ರಾಷ್ಟ್ರಪತಿ ಚಹಾ ಕೂಟದ ನಿರೀಕ್ಷೆಯಲ್ಲಿ 94ರ ಶಾಮ್ ರಾವ್
ಮಂಗಳೂರು ಜೂನ್ 21: ಬಂಟ್ವಾಳದ ಹಿರಿಯ ಜೀವ 94ರ ಹರೆಯದ ಎಂ.ಡಿ.ಶ್ಯಾಮರಾವ್ ಈ ಬಾರಿಯ ರಾಷ್ಟ್ರಪತಿಗಳ ಚಹಾಕೂಟದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಕ್ವಿಟ್ ಇಂಡಿಯಾ ಚಳುವಳಿಯ ಅಂಗವಾಗಿ ಪ್ರತೀ ವರ್ಷ ದೆಹಲಿಯಲ್ಲಿ ಏರ್ಪಾಡುಗೊಳ್ಳುತ್ತಿರುವ ರಾಷ್ಟ್ರಪತಿಗಳ ಚಹಾಕೂಟದಲ್ಲಿ ಪಾಲ್ಗೊಳ್ಳಬೇಕೆಂಬ ಆಸೆಯಿಂದ, ಕಳೆದ ನಾಲ್ಕೈದು ವರ್ಷಗಳಿಂದ 94ರ ಎಂ.ಡಿ.ಶ್ಯಾಮರಾವ್ ಕಾಯುತ್ತಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ದೊರೆತು 72 ವರ್ಷಗಳು ಕಳೆದಿವೆ. ಭಾರತದ ಸ್ವಾತಂತ್ರ್ಯಕ್ಕೆ ಹೋರಾಡಿದವರಲ್ಲಿ ಬಹುತೇಕರು ನಮ್ಮೊಂದಿಗಿಲ್ಲ. ಅದರಲ್ಲೂ ಕರ್ನಾಟಕದಲ್ಲಿ ಬೆರಳೆಣಿಕೆಯಷ್ಟು ಇರಬಹುದು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಏಕೈಕ ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಶ್ಯಾಮರಾವ್ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಹೋರಾಡಿದವರಲ್ಲಿ ಒಬ್ಬರು.
ಬಂಟ್ವಾಳ ತಾಲೂಕಿನ ಬಿ.ಸಿ ರೋಡ್ ನವರಾದ ಎಂ.ಡಿ.ಶ್ಯಾಮರಾವ್ ಉಳಿಗ್ರಾಮದಲ್ಲಿ ಸರ್ಕಾರ ನೀಡಿರುವ ಜಮೀನಿನಲ್ಲಿ ಸ್ವಂತ ಮನೆ ಹೊಂದಿದ್ದರೂ, ವಿಶ್ರಾಂತ ಜೀವನದ ಹಿನ್ನೆಲೆಯಲ್ಲಿ ಶಿವಮೊಗ್ಗದ ತನ್ನ ಮಗನ ಮನೆಯಲ್ಲಿ ವಾಸ್ತವ್ಯವಿದ್ದಾರೆ. ಆದರೂ ಬಂಟ್ವಾಳದ ನಂಟು ಬಿಡದೆ, ತಾಲ್ಲೂಕಿನ ಪ್ರಮುಖ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಕೆಲವು ವರ್ಷಗಳ ಹಿಂದೆ ಇವರಿಗೆ ಜಿಲ್ಲಾಧಿಕಾರಿ ಕಚೇರಿಯಿಂದ ಕರೆ ಬಂದಿತ್ತು. ರಾಷ್ಟ್ರಪತಿಗಳ ಚಹಾ ಕೂಟಕ್ಕೆ ತೆರಳುವಿರಾ, ಒಪ್ಪಿಗೆ ಪತ್ರ ಕಳುಹಿಸಿ ಎಂದು. ಅದರಂತೆ ಇವರು ಒಪ್ಪಿಗೆ ಸೂಚಿಸಿದರು. ಜೊತೆಯಾಗಿ ತೆರಳುವ ಸಹಾಯಕನ ವಿವರವನ್ನೂ ನೀಡಿದರು. ಆದರೆ ಆ ವರ್ಷ ಇವರ ಪತ್ರಕ್ಕೆ ಮರಳಿ ಪ್ರತಿಕ್ರಿಯೆ ಸಿಕ್ಕಲೇ ಇಲ್ಲ. ನಂತರದ ವರ್ಷ ಇವರನ್ನು ಅನಾರೋಗ್ಯ ಕಾಡಿತ್ತು, ಹಾಗಾಗಿ ದೆಹಲಿಗೆ ಬರಲಾರೆ ಎಂದಿದ್ದರು. ಆ ಬಳಿಕದ ವರ್ಷದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸೂಚನೆಯಂತೆ ಬಂಟ್ವಾಳ ತಾಲ್ಲೂಕಿನ ಆಗಿನ ತಹಶೀಲ್ದಾರರು ಶ್ಯಾಮ್ ರಾವ್ ಅವರನ್ನು ಕರೆಸಿ ಅವರಿಂದ ಒಪ್ಪಿಗೆ ಪತ್ರ ಕೇಳಿದ್ದರು. ಶ್ಯಾಮ್ ರಾವ್ ಅವರು ದೆಹಲಿಗೆ ಹೊರಡುವ ಉತ್ಸಾಹದಲ್ಲೂ ಇದ್ದರು. ಆದರೆ ಆಗಸ್ಟ್ 9ರಂದು ನಡೆಯುವ ಚಹಾಕೂಟಕ್ಕೆ ನಿಮ್ಮ ಸ್ವಂತ ಖರ್ಚಿನಲ್ಲಿ ಬನ್ನಿ ಎಂಬ ಪತ್ರ ಆಗಸ್ಟ್ 7 ರಂದು ಇವರ ಕೈ ಸೇರಿತ್ತು. ಎರಡು ದಿನಗಳ ಅವಧಿಯಲ್ಲಿ ಪ್ರಯಾಣ ತ್ರಾಸವೆನಿಸಿ ಆ ವರ್ಷವೂ ರಾಷ್ಟ್ರಪತಿಗಳ ಚಹಾಕೂಟದ ಆಸೆಯನ್ನು ಕೈಬಿಡಬೇಕಾಯಿತು.
ಈ ಬಾರಿಯಾದರೂ ದೆಹಲಿಯಲ್ಲಿ ನಡೆಯುವ ರಾಷ್ಟ್ರಪತಿಗಳ ಚಹಾಕೂಟದಲ್ಲಿ ಭಾಗಿಯಾಗಬೇಕೆಂಬ ಆಸೆ ಎಂ.ಡಿ.ಶ್ಯಾಮರಾವ್ ಅವರದ್ದು. ಈ ಬಾರಿಯಾದರೂ ಈ ಹಿರಿಯ ಜೀವದ ಆಸೆ ಪೂರೈಸಲಿದೆಯೇ ಕಾದು ನೋಡಬೇಕಿದೆ.












Click it and Unblock the Notifications