ಈ ಹುಡುಗನಲ್ಲಿನ ಪ್ರಾಣಿ ದಯೆ ಎಲ್ಲರಲ್ಲೂ ಬರಲಿ (ವಿಶೇಷ ವರದಿ)
ಮಂಗಳೂರು : ದಯೆ ಇಲ್ಲದ ಧರ್ಮ ಯಾವುದಯ್ಯ..? ದಯೆಯೇ ಧರ್ಮದ ಮೂಲವಯ್ಯ ಎಂಬ ವಚನದಂತೆ ಪ್ರಾಣಿ,ಪಕ್ಷಿಗಳ ಮೇಲೆ ದಯೆ ತೋರುವ ವಿಚಾರವು ಯಾವುದೇ ವ್ಯಕ್ತಿ, ಸಮುದಾಯ ಅಥವಾ ವಯೋಮಾನಕ್ಕೆ ಸೀಮಿತವಾಗಿಲ್ಲ ಎಂಬುದಕ್ಕೆ ಪಾವೂರು ಗ್ರಾಮದ ಹುಡುಗ ಸಾಬೀತುಪಡಿಸಿದ್ದಾನೆ. ಇಷ್ಟು ಚಿಕ್ಕ ವಯಸ್ಸಿಗೇ ಈತ ನಾನಾ ಪ್ರಾಣಿಗಳಿಗೆ, ಪಕ್ಷಿಗಳಿಗೆ ಆಶ್ರಯ ನೀಡಿರುವುದು ಗಮನಿಸಬೇಕಾದ ವಿಚಾರ.
ಮಹಮ್ಮದೀಯರೂ ಗೋಪ್ರೇಮಿಗಳೆಂದು ಸಾಬೀತು ಪಡಿಸಿದ್ದಾನೆ ಮಹಮ್ಮದ್ ಸಾಬಿತ್ ದನ,ಕರು,ಪಕ್ಷಿಗಳೊಂದಿಗಿನ ಒಡನಾಟದ ಜೀವನವೇ ಈ ಹನ್ನೆರಡರ ಪೋರನ ದುನಿಯಾ.
ಮುಸ್ಲಿಂ ಸಮುದಾಯಕ್ಕೆ ಸೇರಿರುವ ಪಾವೂರು ಗ್ರಾಮದ ಇನ್ನೋಳಿಯ ಹನ್ನೆರಡರ ಹುಡಗ ಸಾಬಿತ್ ತಾನು ಸಾಕಿರುವ ದನ,ಕರುವಿನ ಜೊತೆಗೆ ವಿಧ,ವಿಧದ ಪಕ್ಷಿ ಸಂಕುಲಗಳಿಗೂ ಆಸರೆ ನೀಡಿ ತನ್ನದೇ ಸುಂದರವಾದ ದುನಿಯಾ ಕಟ್ಟಿಕೊಂಡಿದ್ದಾನೆ.

ಪ್ರಾಣಿ ಪ್ರೇಮದಲ್ಲಿ ಹಿಂದೆ ಬಿದ್ದಿಲ್ಲ
ಮುಸ್ಲಿಮರೆಂದರೆ ಕೇವಲ ಮಾಂಸಾಹಾರಿಗಳಲ್ಲ. ಪ್ರಾಣಿಗಳ ಮೇಲೆ ಅವರಿಗೂ ದಯೆಯಿದೆ ಎಂಬುದನ್ನು ಈ ಹುಡುಗ ಸಾಬೀತುಪಡಿಸಿದ್ದಾನೆ. ಪಾವೂರು ಗ್ರಾಮದ ಇನ್ನೋಳಿಯ ಬಶೀರ್ ಮನೆಗೆ ಒಮ್ಮೆ ಭೇಟಿ ನೀಡಿ ಅವರ ಮಗ ಮಹಮ್ಮದ್ ಸಾಬಿತ್ನ ಗೋಪ್ರೇಮವನ್ನು ನೋಡಲೇಬೇಕು. ಇನ್ನೋಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ಓದುತ್ತಿರುವ ಸಾಬಿತ್ ಕಲಿಕೆಯಲ್ಲಿ ಸ್ವಲ್ಪ ಹಿಂದೆ ಬಿದ್ದಿದ್ದರೂ ತಾನು ಬೆಳೆಸಿಕೊಂಡಿರುವ ಪ್ರಾಣಿ ಪ್ರೇಮದಲ್ಲಂತೂ ಅಗ್ರಸ್ಥಾನಿಯಾಗಿದ್ದಾನೆ.

ಕರು ಕಟ್ಟಿಹಾಕಿ ಶಾಲೆಗೆ
ಸಾಬಿತ್ ಇನ್ನೋಳಿಯ ಬಶೀರ್ ಮತ್ತು ಆಸಿಯಾ ಎಂಬ ಬಡ ದಂಪತಿಗಳ ಹಿರಿಯ ಮಗ. ಬಶೀರ್ ಕೂಲಿ ಕೆಲಸಕ್ಕೆ ಹೋಗಿ ತನ್ನ ಮೂವರು ಮಕ್ಕಳನ್ನು ಸಾಕುತ್ತಿದ್ದಾರೆ. ಸಾಬಿತ್ ಚಿಕ್ಕಂದಿನಿಂದಲೂ ಗೋವುಗಳ ಮೇಲೆ ಅತೀವ ಪ್ರೀತಿ ಇರಿಸಿದ್ದು ಅಪ್ಪನಲ್ಲಿ ಹೇಳಿ ಒಂದು ಹಸುವನ್ನು ಖರೀದಿಸಿ ಸಾಕಿದ್ದಾನೆ.ಹಸುವು ಇದೀಗ ಮುದ್ದಾದ ಕರುವೊಂದಕ್ಕೆ ಜನನ ನೀಡಿದೆ. ಕರು ಮತ್ತು ಸಾಬಿತ್ ನಡುವೆ ಅನ್ಯೋನ್ಯ ಗಾಢ ಸಂಬಂಧ ಬೆಳೆದಿದೆ. ಬೆಳಿಗ್ಗೆ ಎದ್ದು ಹಸುವಿನ ಹಾಲು ಕರೆದು ಅದನ್ನು ಮೇಯಲು ಬಿಟ್ಟು ,ಮತ್ತೆ ಹಸು ಕರುವನ್ನು ಕಟ್ಟಿಹಾಕಿ ಶಾಲೆಗೆ ತೆರಳುತ್ತಾನೆ.

ತಂದೆ-ತಾಯಿಯರ ಪ್ರೋತ್ಸಾಹ
ಶಾಲೆಗೆ ಯಾವಾಗಲೂ ಲೇಟಾಗಿ ಹೋಗುತ್ತಿರುವುದರ ಬಗ್ಗೆ ಮೇಷ್ಟ್ರು ಪ್ರಶ್ನಿಸಿದರೆ ಇತರ ವಿದ್ಯಾರ್ಥಿಗಳೆಲ್ಲರೂ ಸಾಬಿತ್ ಹಸು ಮತ್ತು ಕರುವಿಗೆ ಹುಲ್ಲು ನೀಡುತ್ತಿದ್ದನೆಂದು ಉತ್ತರಿಸುವಂತಾಗಿದೆ. ಸಂಜೆಯಗುತ್ತಿದ್ದಂತೆಯೇ ಮನೆಗೆ ಓಡೋಡಿ ಹೋಗಿ ಮತ್ತೆ ತನ್ನ ಪ್ರಾಣಿ,ಪಕ್ಷಿಗಳ ದುನಿಯಾದೊಂದಿಗೆ ಬೆರೆತು ತನ್ನ ಮುದ್ದಾದ ದನ,ಕರುವಿನ ಆರೈಕೆಯೊಂದಿಗೆ ಕಾಲ ಕಲೆಯುತ್ತಾನೆ. ಹೊತ್ತು ಮೂಡುತ್ತಿದ್ದಂತೆಯೇ ಮದರಸ ವಿದ್ಯಾಭ್ಯಾಸಕ್ಕೂ ತಪ್ಪದೆ ಹೊರಡುತ್ತಾನೆ. ಸಾಬಿತ್ ಪ್ರಾಣಿ ಮತ್ತು ಪಕ್ಷಿಗಳ ಮೇಲಿಟ್ಟಿರುವ ಪ್ರೀತಿಯನ್ನು ಮನಗಂಡಿರುವ ತಂದೆ ಬಶೀರ್ ಮತ್ತು ದೊಡ್ಡಪ್ಪ ಮಹಮ್ಮದ್ ಶಾಫಿ ಅವರು ಆತನಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಸಾಬಿತ್ಗೆ ಇನ್ನೊಂದು ಕರುವನ್ನು ಖರೀದಿಸುವ ಮಹಾದಾಸೆ ಉಂಟಾಗಿದ್ದು ತಂದೆ ಮಾಡುವ ಕೂಲಿ ಕೆಲಸದ ಆದಾಯದಿಂದ ಖರೀದಿಸಲು ಕಷ್ಟ ಸಾಧ್ಯವಾಗಿದೆ.

ಮಿಕ್ಕ ಅನ್ನ ತಂದು ಹಾಕುವ ದಯಾಮಯಿ
ಸಾಬಿತ್ ಗೋಸಾಕಣೆಯೊಂದೇ ಅಲ್ಲದೆ ತನ್ನ ಮನೆಯಲ್ಲೇ 50ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ವಿದೇಶಿ ತಳಿಯ ಪಾರಿವಾಳಗಳನ್ನು ಸಾಕಿದ್ದಾನೆ. ಇದರ ಜೊತೆಗೆ ಸಾಕಷ್ಟು ಕೋಳಿಗಳು, ಟರ್ಕಿ ಕೋಳಿಗಳು, ಆಡುಗಳನ್ನೂ ಸಾಕುತ್ತಿದ್ದಾನೆ. ತಾನು ಕಲಿಯುತ್ತಿರುವ ಶಾಲೆಯ ಅನ್ನದಾಸೋಹದಲ್ಲಿ ಮಕ್ಕಳು ಉಂಡು ಬಿಟ್ಟ ಉಳಿದ ಅನ್ನವನ್ನು ಮೂರು ಬಕೆಟ್ಗಳಲ್ಲಿ ಶೇಖರಿಸಿಟ್ಟು ಅದನ್ನು ಮನೆಯ ಗೋವುಗಳು ಮತ್ತು ಆಡುಗಳಿಗೆ ತಿನ್ನಲು ಕೊಟ್ಟು ಮನೆಯವರ ಜವಬ್ದಾರಿಯನ್ನು ಕಡಿಮೆಗೊಳಿಸಿದ್ದಾನೆ.

ಅವುಗಳ ಸೇವೆಯಿಂದ ಭಗವಂತನೂ ಸಂಪ್ರೀತ
'ಒನ್ ಇಂಡಿಯಾ' ಕನ್ನಡ ಜೊತೆಗೆ ಮಾತನಾಡಿದ ಮಹಮ್ಮದ್ ಸಾಬಿತ್, ''ಮೂಕ ಪ್ರಾಣಿಗಳಿಗೆ ನಮ್ಮಂತೆಯೇ ಜೀವಿಸುವ ಹಕ್ಕಿದೆ. ಅವುಗಳನ್ನು ನೋಯಿಸದೆ ಪ್ರೀತಿಯಿಂದ ಪಾಲಿಸಿದರೆ ಅವುಗಳು ನಮ್ಮನ್ನು ಪ್ರೀತಿಸುತ್ತವೆ. ಅದರಲ್ಲೂ ಗೋವುಗಳು ಅತೀ ಸಾಧು ಸ್ವಭಾವದ ಪ್ರಾಣಿಗಳಾಗಿದ್ದು ಅವುಗಳನ್ನು ಪ್ರೀತಿಸಿದರೆ ಭಗವಂತನು ನಮನ್ನು ಖಂಡಿತವಾಗಿಯೂ ಹರಸುತ್ತಾನೆ'' ಎಂದು ಹೇಳುತ್ತಾನೆ.

ಪ್ರಾಣಿ ಸೇವೆಯಲ್ಲಿ ಸದಾ ಮುಂದೆ
ಸಾಬಿತ್ ಶಿಕ್ಷಣದಲ್ಲಿ ಸ್ವಲ್ಪ ಮಟ್ಟಿಗೆ ಹಿಂದುಳಿದಿದ್ದರೂ ಸಹ ಅವನು ಪ್ರಾಣಿ,ಪಕ್ಷಿಗಳ ಮೇಲಿಟ್ಟಿರುವ ಪ್ರೀತಿ ಅಪಾರ. ನಾವು ಯಾವತ್ತೂ ಒಂದು ಸಮುದಾಯವನ್ನು ಬೊಟ್ಟು ಮಾಡಿ ಗೋಹಂತಕರ ಪಟ್ಟ ಕಟ್ಟುವುದು ತಪ್ಪು. ಎಲ್ಲಾ ಸಮುದಾಯದಲ್ಲೂ ಗೋವಿನ ಬಗ್ಗೆ ಪ್ರೀತಿ, ಕಾಳಜಿ ಇಟ್ಟವರು ಇದ್ದಾರೆ ಎಂಬುದಕ್ಕೆ ಸಾಬಿತೇ ಸಾಕ್ಷಿ ಎಂದು ಮಹಮ್ಮದ್ ಸಾಬಿತ್ ನ ಶಿಕ್ಷಕ ಮೋಹನ್ ಶಿರ್ಲಾಲ್ ಅವರು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.












Click it and Unblock the Notifications