ಧರ್ಮಸ್ಥಳದ ವಿರುದ್ಧ ಆರೋಪ ಮಾಡಿದ ವ್ಯಕ್ತಿಗೆ ಜೈಲು ಶಿಕ್ಷೆ, ದಂಡ
ಮಂಗಳೂರು, ಆಗಸ್ಟ್ 29: ಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನೂ ಮೀರಿ ಧರ್ಮಸ್ಥಳ, ಅಲ್ಲಿನ ಧರ್ಮಾಧಿಕಾರಿ ಹಾಗೂ ಅವರಿಗೆ ಸೇರಿದ ಸಂಸ್ಥೆಗಳ ಮೇಲೆ ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡಿದ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ ನಾಯಕ್ ಗೆ ಜೈಲು ಶಿಕ್ಷೆ ವಿಧಿಸಿ ಸೋಮವಾರ ಆದೇಶ ಹೊರಬಿದ್ದಿದೆ.
ಎರಡು ವರ್ಷಗಳಿಂದ ಕೋರ್ಟ್ ಆದೇಶ ಉಲ್ಲಂಘಿಸಿ, ಸೋಮನಾಥ್ ನಾಯಕ್ ಅವರು ಆರೋಪ ಮಾಡಿದ ಬಗ್ಗೆ ಧರ್ಮಸ್ಥಳ ಸಂಸ್ಥೆಗಳ ಪರವಾಗಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬೆಳ್ತಂಗಡಿ ಕೋರ್ಟ್ ಈ ಆದೇಶ ನೀಡಿದೆ.

ಎರಡು ಪ್ರಕರಣದ ವಿಚಾರಣೆಯ ನಂತರ ತಲಾ ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ. ಇದರ ಜತೆಗೆ ತಪ್ಪಿತಸ್ಥರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಧರ್ಮಸ್ಥಳ ಕ್ಷೇತ್ರಕ್ಕೆ ಪರಿಹಾರ ಧನವಾಗಿ 4.93 ಲಕ್ಷ ರುಪಾಯಿ ನೀಡಬೇಕು ಎಂದು ಕೂಡ ಆದೇಶ ಮಾಡಲಾಗಿದೆ.
ಈ ಆದೇಶದ ನಂತರ ಧರ್ಮಸ್ಥಳದ ಪರ ವಕೀಲರು ಪ್ರತಿಕ್ರಿಯೆ ನೀಡಿದ್ದು, ಕ್ಷೇತ್ರದ ವಿರುದ್ಧ ಸುಳ್ಳು ಪ್ರಚಾರ ಮಾಡಿದ ತಪ್ಪಿತಸ್ಥರಿಗೆ ಕುಮ್ಮಕ್ಕು ನೀಡಿದವರಿಗೂ ಶಿಕ್ಷೆ ಆಗಲು ಕಾನೂನು ಹೋರಾಟ ನಡೆಸುತ್ತೇವೆ ಎಂದಿದ್ದಾರೆ.
ಇನ್ನು ಕೋರ್ಟ್ ಆದೇಶದ ಬಗ್ಗೆ ಮಾತನಾಡಿದ ಸೋಮನಾಥ ನಾಯಕ್, ನನ್ನ ಪರವಾಗಿ ವಾದವನ್ನು ಮಂಡಿಸುವುದಕ್ಕೆ ಮತ್ತು ದಾಖಲೆಗಳನ್ನು ಸಲ್ಲಿಸುವುದಕ್ಕೆ ಕಾಲಾವಕಾಶ ಸಿಗಲಿಲ್ಲ. ಈಗಿನ ಆದೇಶದ ವಿರುದ್ಧ ಹೈ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತೇನೆ ಎಂದಿದ್ದಾರೆ.












Click it and Unblock the Notifications