ಮಂಗಳೂರಿನಲ್ಲಿ ರಾಹುಲ್ ಗಾಂಧಿ ಸಮಾವೇಶ
ಮಂಗಳೂರು, ಏ.4 : ಲೋಕಸಭೆ ಚುನಾವಣೆಯ ಪ್ರಚಾರಕ್ಕಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ಕರ್ನಾಟಕಕ್ಕೆ ಆಗಮಿಸಿದ್ದಾರೆ. ಬಳ್ಳಾರಿಯಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿರುವ ಅವರು, ಜನಾರ್ದನ ಪೂಜಾರಿ ಪರವಾಗಿ ಮತಯಾಚಿಸಲು ಮಂಗಳೂರಿಗೆ ಆಗಮಿಸಿದ್ದಾರೆ.
ಮಂಗಳೂರಿನ ನೆಹರು ಕ್ರೀಡಾಂಗಣದಲ್ಲಿ ರಾಹುಲ್ ಗಾಂಧಿ ಅವರ ಸಮಾವೇಶ ಆಯೋಜಿಸಲಾಗಿದೆ. ಸಂಜೆ 5.30ಕ್ಕೆ ರಾಹುಲ್ ಗಾಂಧಿ ಸಮಾವೇಶ ನಡೆಯುವ ಮೈದಾನಕ್ಕೆ ಆಗಮಿಸಿದ್ದಾರೆ. ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ, ಸಚಿವ ರಮಾನಾಥ ರೈ, ಯುಟಿ ಖಾದರ್ ಮುಂತಾದವರು ರಾಹುಲ್ ಗಾಂಧಿ ಅವರಿಗೆ ಸಾಥ್ ನೀಡಿದ್ದಾರೆ.

ರಾಹುಲ್ ಗಾಂಧಿ ಭಾಷಣ : ಪಕ್ಷದ ಸ್ಥಳೀಯ ಸದಸ್ಯರ ಮತ್ತು ನಾಯಕರ ಮುಖಾಂತರ ಆ ಕ್ಷೇತ್ರದಲ್ಲಿ ಪಕ್ಷದ ಪರವಾಗಿ ಸ್ಪರ್ಧಿಸುವ ಅಭ್ಯರ್ಥಿಯನ್ನು ಆಯ್ಕೆಮಾಡುವ ನೂತನ ಪರಿಕಲ್ಪನೆಯನ್ನು ಮಂಗಳೂರಿನಲ್ಲಿ ಅಳವಡಿಸಿ ನಾವು ಯಶಸ್ವಿಯಾಗಿದ್ದೇವೆ ಎಂದು ರಾಹುಲ್ ಗಾಂಧಿ ಮಾತು ಆರಂಭಿಸಿದರು.
* ಭ್ರಷ್ಟಾಚಾರದ ಕುರಿತು ಮಾತನಾಡುವ ಬಿಜೆಪಿ ನಾಯಕರು ಸಂಸತ್ತಿನಲ್ಲಿ ಲೋಕಪಾಲ ಮಸೂದೆಯನ್ನು ವಿರೋಧಿಸಿದ್ದು ಏಕೆ ಎಂದು ಪ್ರಶ್ನಿಸಿದ ರಾಹುಲ್ ಗಾಂಧಿ, ಯಡಿಯೂರಪ್ಪ ಭ್ರಷ್ಟಾಚಾರದ ಕುರಿತು ಬಿಜೆಪಿ ನಾಯಕರ ಏಕೆ ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
* ಬಿಜೆಪಿಯವರು ಹಿಂದು-ಮುಸ್ಲಿಂಮರ ನಡುವೆ, ಹಿಂದು-ಕ್ರಿಶ್ಚಿಯನ್ ನಡುವೆ ದ್ವೇಷದ ಬೀಜವನ್ನು ಬಿತ್ತಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಾರೆ. ಅಂತಹವರಿಗೆ ಅಧಿಕಾರ ನೀಡಬೇಡಿ. ಪ್ರತಿಯೊಬ್ಬರು ಶಕ್ತಿ ನೀಡುತ್ತೇವೆ ಎಂಬ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದರು.
* ಮಂಗಳೂರು ಶಿಕ್ಷಣ ಕ್ಷೇತ್ರದಲ್ಲಿ ವಿಶ್ವದಲ್ಲೆ ಪ್ರಸಿದ್ಧಿ ಪಡೆದಿದೆ. ಮಂಗಳೂರಿನ ಅಭಿವೃದ್ಧಿಗೆ ಅಗತ್ಯವಿರುವ ಯೋಜನೆಗಳನ್ನು ಜಾರಿಗೊಳಿಸುವಂತೆ ನಾನು ಮಾನ್ಯ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡುತ್ತೇನೆ ಎಂದು ರಾಹುಲ್ ಹೇಳಿದರು.
* ಕರ್ನಾಟಕದಲ್ಲಿ ಆಗಿರುವಷ್ಟು ಅಭಿವೃದ್ಧಿ ಇನ್ನುಳಿದ ರಾಜ್ಯಗಳಲ್ಲಿ ಅಗಬೇಕು. ಮಂಗಳೂರು ಶಿಕ್ಷಣ ನಗರಿಯಾಗಿದೆ, ಬೆಂಗಳೂರು ಐಟಿ ನಗರವಾಗಿದೆ. ಆ ಮೂಲಕ ಕರ್ನಾಟಕದ ಹೆಸರು ಇಡೀ ವಿಶ್ವದಲ್ಲಿ ಹಬ್ಬಿದೆ. ಹೀಗೆ ಉಳಿದ ನಗರಗಳು ಅಭಿವೃದ್ಧಿಯಾಗಬೇಕು ಅದಕ್ಕಾಗಿ ಕಾಂಗ್ರೆಸ್ ಬೆಂಬಲಿಸಿ ಎಂದರು. [ರಾಹುಲ್ ಬಳ್ಳಾರಿ ಸಮಾವೇಶದಲ್ಲಿ ಹೇಳಿದ್ದೇನು?]
* ಕರ್ನಾಟಕ ಅಭಿವೃದ್ಧಿಯಾದ ಮೇಲೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ಅವರು ಭಷ್ಟಾಚಾರ ಮಾಡಿದರು. ಜನರಿಗೆ ಅವರು ಏನು ಕೊಡುಗೆ ನೀಡಿಲ್ಲ. ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದರು. ಇಂತಹವರನ್ನು ಚುನಾವಣೆಯಲ್ಲಿ ಬೆಂಬಲಿಸುತ್ತಿರಾ? ಎಂದು ರಾಹುಲ್ ಪ್ರಶ್ನಿಸಿದರು.
* ನಮಗೆ ಕಾವಲುಗಾರ ಬೇಡ. ಜನರಿಗೆ ಶಕ್ತಿ ತುಂಬುವ ನಾಯಕರು ಬೇಕು. ಒಬ್ಬರಿಗೆ ಕಾವಲುಗಾರನ ಸ್ಥಾನ ನೀಡಿ, ಜನರನ್ನು ಮರೆತು ಬಿಡುವುದು ಬಿಜೆಪಿಯ ಆಲೋಚನೆ. ನಾವು ನಿಮಗೆ ಶಕ್ತಿ ನೀಡುತ್ತೇವೆ ನಮ್ಮನ್ನು ಬೆಂಬಲಿಸಿ ಎಂದರು.
*ನಿಮ್ಮೊಂದಿಗೆ ಚರ್ಚಿಸಿ ಚುನಾವಣೆ ಪ್ರಣಾಳಿಕೆ ರಚಿಸಿದ್ದೇವೆ. ಅದರಲ್ಲಿ ನೀವು ಹೇಳಿದ ಅಂಶಗಳಿವೆ. ಅವುಗಳನ್ನು ಜಾರಿಗೆ ತರಲು ನಮಗೆ ಬೆಂಬಲ ನೀಡಿ. ಕೇಂದ್ರದಲ್ಲಿ ಯುಪಿಎಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು. [ಕಾಂಗ್ರೆಸ್ ಪ್ರಣಾಳಿಕೆ ನೋಡಿ]
ವೇದಿಕೆಯಿಂದ ಪೂಜಾರಿ ದೂರ : ರಾಹುಲ್ ಗಾಂಧಿ ಪ್ರಚಾರಕ್ಕೆ ಬಂದಿದ್ದರೂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ವೇದಿಕೆ ಹತ್ತಿಲ್ಲ. ಅಭ್ಯರ್ಥಿ ವೇದಿಕೆ ಮೇಲೆ ಕುಳಿತರೆ ಸಮಾವೇಶದ ಖರ್ಚು ಅಭ್ಯರ್ಥಿ ಚುನಾವಣಾ ವೆಚ್ಚಕ್ಕೆ ದಾಖಲಾಗುವುದರಿಂದ ಪೂಜಾರಿ ವೇದಿಕೆಯಿಂದ ದೂರವುಳಿದಿದ್ದರು. ಸಿಎಂ ಸಿದ್ದರಾಮುಯ್ಯ, ಪರಮೇಶ್ವರ್, ಸಚಿವ ಆಸ್ಕರ್ ಫರ್ನಾಂಡೀಸ್ ರಾಹುಲ್ ಜೊತೆ ವೇದಿಕೆ ಹಂಚಿಕೊಂಡಿದ್ದರು.
ಹೊಸ ಪ್ರಯೋಗ : ಮಂಗಳೂರು ಕ್ಷೇತ್ರದಲ್ಲಿ ಆಂತರಿಕ ಚುನಾವಣೆ ನಡೆಸುವ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಯಿತು. ರಾಹುಲ್ ಗಾಂಧಿ ಅವರ ಈ ಪ್ರಯೋಗಕ್ಕೆ ಜನಾರ್ದನ ಪೂಜಾರಿ ಅವರಂತಹ ನಾಯಕರು ಒಪ್ಪಿಗೆ ನೀಡಿ ಚುನಾವಣೆಯಲ್ಲಿ ಪಾಲ್ಗೊಂಡು ಜಯಗಳಿಸಿದರು ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಜನರಿಗೆ ಮನವಿ ಮಾಡಿದರು.
ಮೋದಿಯೇ ಪ್ರಧಾನಿ ಅಭ್ಯರ್ಥಿ ಏಕೆ : ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಮೋದಿ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಂದು ಏಕೆ ಘೋಷಿಸಿದೆ? ಎಂದು ಪ್ರಶ್ನಿಸಿದರು. ಮೋದಿ ಹಾರ್ಡ್ ಕೋರ್ ಆರ್ ಎಸ್ಎಸ್ ನಾಯಕ ಅವರಿಂದ ದೇಶದಲ್ಲಿ ಕೋಮುವಾದ ಹರಡಲು ಅವರನ್ನು ಪ್ರಧಾನಿ ಎಂದು ಘೋಷಿಸಲಾಗಿದೆ. ಆದರೆ, ಮೋದಿ ಎಂದಿಗೂ ಪ್ರಧಾನಿಯಾಗುವುದಿಲ್ಲ ಎಂದು ಸಿಎಂ ಭವಿಷ್ಯ ನುಡಿದರು.












Click it and Unblock the Notifications