ಅನೈತಿಕ ಸಂಬಂಧ ಹಿನ್ನೆಲೆ, ಚೂರಿಯಿಂದ ಇರಿದು ಅಣ್ಣನನ್ನೇ ಕೊಂದ ತಮ್ಮ
ಮಂಡ್ಯ, ನವೆಂಬರ್.23: ತಮ್ಮನೇ ಅಣ್ಣನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ನಡೆದಿದ್ದು, ಕೊಲೆಗೆ ಅನೈತಿಕ ಸಂಬಂಧವೇ ಕಾರಣ ಎನ್ನಲಾಗಿದೆ.
ಕೆಸ್ತೂರು ಗ್ರಾಮದ ನಿವಾಸಿ, ಬೆಂಗಳೂರಿನ ಬಿಎಂಟಿಸಿಯಲ್ಲಿ ಸರ್ಕಾರಿ ಬಸ್ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಶಶಿಕುಮಾರ್(45) ಕೊಲೆಯಾದ ದುರ್ದೈವಿಯಾಗಿದ್ದು, ಡಿಎಫ್ಓ ಆಗಿರುವ ರವಿಕುಮಾರ್ ಹತ್ಯೆಗೈದ ಹಂತಕನಾಗಿದ್ದಾನೆ.
ರವಿಕುಮಾರ್ ಮತ್ತು ಶಶಿಕುಮಾರ್ ಸಹೋದರರಾಗಿದ್ದು, ಕೆಸ್ತೂರು ಗ್ರಾಮದ ನಿವಾಸಿಗಳಾದ ಸಣ್ಣೇಗೌಡ ಮತ್ತು ಲಕ್ಷಮ್ಮ ದಂಪತಿ ಪುತ್ರರಾಗಿದ್ದಾರೆ.

ಕೊಲೆಯಾದ ಅಣ್ಣ ಶಶಿಕುಮಾರ್ಗೂ ಮತ್ತು ಸಹೋದರ ರವಿಕುಮಾರ್ ನ ಹೆಂಡತಿಗೂ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ಈ ವಿಚಾರದಲ್ಲಿ ಅಣ್ಣ-ತಮ್ಮಂದಿರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಈ ನಡುವೆ ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದ್ದು ಮದ್ಯ ಸೇವಿಸಿದ್ದರಿಂದ ಮಾತಿಗೆ ಮಾತು ಬೆಳೆದಿದ್ದು, ಈ ವೇಳೆ ಕೋಪಗೊಂಡ ತಮ್ಮ ರವಿಕುಮಾರ್ ಅಣ್ಣ ಶಶಿಕುಮಾರ್ಗೆ ಹರಿತವಾದ ಚೂರಿಯಿಂದ ಚುಚ್ಚಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡ ಶಶಿಕುಮಾರ್ ಸಾವನ್ನಪ್ಪಿದ್ದಾರೆ.

ಮೃತನ ಪುತ್ರ ನಿಶಾಂತ್ ಗೌಡ ನೀಡಿದ ದೂರಿನ ಮೇರೆಗೆ ಕೆಸ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ರವಿಕುಮಾರ್ ಅವರನ್ನು ಬಂಧಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.












Click it and Unblock the Notifications