ಯುವತಿಯ ಬರ್ಬರ ಹತ್ಯೆ; ಹೇಮಾವತಿ ನದಿಯಲ್ಲಿ ಅಂಗಾಂಗಗಳು ಪತ್ತೆ
ಮಂಡ್ಯ, ನವೆಂಬರ್ 19: ಯುವತಿಯ ಅಂಗಾಂಗಗಳನ್ನು ಕತ್ತರಿಸಿ ಬರ್ಬರವಾಗಿ ಕೊಲೆ ಮಾಡಿ ನದಿಗೆ ಎಸೆದಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಬಂಡಿಹೊಳೆಯಲ್ಲಿ ನಡೆದಿದೆ. ಇಲ್ಲಿನ ಹೇಮಾವತಿ ನದಿಯಲ್ಲಿ ಯುವತಿಯ ಅಂಗಾಂಗಗಳು ಪತ್ತೆಯಾಗಿವೆ.
ಗುರುವಾರ ಬೆಳಿಗ್ಗೆ ಹೇಮಾವತಿ ನದಿಯಲ್ಲಿ ಯುವತಿಯ ದೇಹ, ತಲೆ ಮತ್ತು ಅಂಗಾಂಗಗಳು ಪತ್ತೆಯಾಗಿವೆ. ವಿಕೃತವಾಗಿ ಯುವತಿಯನ್ನು ಕೊಲೆಗೈದು ಆಕೆಯ ಅಂಗಾಂಗಗಳನ್ನು ಕತ್ತರಿಸಿ ದುಷ್ಕರ್ಮಿಗಳು ನದಿಗೆ ಎಸೆದಿದ್ದಾರೆ.
ಬಂಡಿಹೊಳೆ ಗ್ರಾಮದ ಹೇಮಾವತಿ ದಡದಲ್ಲಿರುವ ವಿದ್ಯುತ್ ಸ್ಥಾವರ ಘಟಕದ ಸಮೀಪ ತಲೆ ಮತ್ತು ಅಂಗಾಂಗಗಳು ಪತ್ತೆಯಾಗಿವೆ. ಸ್ಥಳೀಯರು ಮೊದಲು ಯುವತಿಯ ದೇಹದ ಅಂಗಾಂಗಗಳು ತೇಲುತ್ತಿದ್ದುದನ್ನು ನೋಡಿದ್ದಾರೆ. ನಂತರ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಎರಡು ದಿನಗಳ ಹಿಂದೆ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ.

25 ರಿಂದ 30 ವರ್ಷದ ಅಪರಿಚಿತ ಯುವತಿಯನ್ನು ತುಂಡುತುಂಡಾಗಿ ಕತ್ತರಿಸಿ ಕೊಲೆ ಮಾಡಿರುವ ದುಷ್ಕರ್ಮಿಗಳು, ಮೃತದೇಹವನ್ನು ಗೋಣಿಚೀಲದಲ್ಲಿ ಹಾಕಿಕೊಂಡು ವಾಹನದಲ್ಲಿ ಬಂದು ಇಲ್ಲಿ ಬಿಸಾಡಿ ಹೋಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತ ಯುವತಿ ಯಾರೆಂದು ಇನ್ನೂ ತಿಳಿದುಬಂದಿಲ್ಲ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಶೋಧ ಕಾರ್ಯ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಸೆರೆಗೆ ತನಿಖೆ ಕೈಗೊಂಡಿದ್ದಾರೆ. ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ತಲೆ ಹಾಗೂ ದೇಹದ ಭಾಗವನ್ನು ಮರಣೋತ್ತರ ಪರೀಕ್ಷೆಗಾಗಿ ಕೆ.ಆರ್.ಪೇಟೆಯ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಪೊಲೀಸರು ಸಾಗಿಸಿದ್ದು, ಯುವತಿಯ ಮೂಗಿನಲ್ಲಿ ಕೆಂಪು ಹರಳಿನ ಮೂಗುತಿ, ಬಲಗೈನ ಮುಂಗೈನ ಮೇಲೆ ಮೀನಿನ ಹಚ್ಚೆಯ ಗುರುತು ಇದೆ. ಈಕೆಯ ವಾರಸುದಾರರು ಯಾರಾದರೂ ಇದ್ದಲ್ಲಿ ಕೆ.ಆರ್.ಪೇಟೆ ಗ್ರಾಮಾಂತರ ಪೋಲಿಸರನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.












Click it and Unblock the Notifications