ಈ ಶಾಸಕ ಗೆದ್ದಾಗಲೆಲ್ಲ ರಾಜ್ಯ ವಿಧಾನಸಭೆಯಲ್ಲಿ ಅತಂತ್ರ ಸ್ಥಿತಿ!
ಮಂಡ್ಯ, ಮೇ 18 : ಮಂಡ್ಯದಲ್ಲಿ ಜೆಡಿಎಸ್ ಕ್ಲೀನ್ ಸ್ವೀಪ್ ಮಾಡಿದೆ. 7 ಕ್ಷೇತ್ರಗಳಲ್ಲಿಯೂ ಜೆಡಿಎಸ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಮಂಡ್ಯ ಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಎಂ. ಶ್ರೀನಿವಾಸ್ ಜಯಭೇರಿ ಬಾರಿಸಿದ್ದು, ಕಾಂಗ್ರೆಸ್ ನ ರವೀಂದ್ರ ಗಣಿಗ ಸೋಲು ಅನುಭವಿಸಿದ್ದಾರೆ.
ಆದರೆ ಈಗ ಹೇಳಲು ಹೊರಟಿರುವುದು ಮಂಡ್ಯ ಪಟ್ಟಣ ಕ್ಷೇತ್ರದ ಶಾಸಕ ಎಂ.ಶ್ರೀನಿವಾಸ್ ಬಗ್ಗೆ. ಹೌದು. ಇವರು ಶಾಸಕರಾದ ಸಂದರ್ಭದಲೆಲ್ಲ ರಾಜ್ಯ ವಿಧಾನಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುತ್ತಿದೆ. ಇದು ಕಾಕತಾಳೀಯ ಎನಿಸಿದರೂ ಸತ್ಯ!
2004ರಲ್ಲಿ ಎಂ.ಶ್ರೀನಿವಾಸ್ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಆಗ ರಾಜ್ಯದಲ್ಲಿ ಬಿಜೆಪಿ 79, ಕಾಂಗ್ರೆಸ್ 65, ಜೆಡಿಎಸ್ 58 ಸ್ಥಾನ ಗಳಿಸಿತ್ತು. ಮೊದಲ 20 ತಿಂಗಳು ಧರ್ಮಸಿಂಗ್, ನಂತರದ 20 ತಿಂಗಳು ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು.

2008ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 110 ಸ್ಥಾನ ಗಳಿಸಿದರೆ, ಕಾಂಗ್ರೆಸ್ 80 ಹಾಗೂ ಜೆಡಿಎಸ್ 28 ಸ್ಥಾನ ಗಳಿಸಿತ್ತು. 28 ಶಾಸಕರ ಪೈಕಿ ಶ್ರೀನಿವಾಸ್ ಕೂಡ ಒಬ್ಬರು. ಆಗ 6 ಪಕ್ಷೇತರರು ಇದ್ದು ಎಲ್ಲರನ್ನು ಸೆಳೆದ ಬಿಜೆಪಿ ಅಧಿಕಾರ ಹಿಡಿದಿತ್ತು. ಆ ಸಂದರ್ಭದಲ್ಲಿ ಪಕ್ಷೇತರವಾಗಿ ಗೆದ್ದಿದ್ದ ನರೇಂದ್ರಸ್ವಾಮಿ ಸಚಿವರಾಗಿದ್ದರು.
2013ರಲ್ಲಿ ಶ್ರೀನಿವಾಸ್, ಅಂಬರೀಶ್ ವಿರುದ್ಧ ಪರಾಜಿತರಾದರು. ಆಗ ರಾಜ್ಯದಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು.
ಈಗ 2018 ರಲ್ಲಿ ನಡೆದ ಚುನಾವಣೆಯಲ್ಲಿ 2008ರ ಮಾದರಿಯಲ್ಲಿ ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್ 38, ಇಬ್ಬರು ಪಕ್ಷೇತರರಿದ್ದಾರೆ. ಎಂ.ಶ್ರೀನಿವಾಸ್ ಈಗಲೂ ಶಾಸಕರಾಗಿದ್ದಾರೆ. 2008ರಲ್ಲೂ ಶ್ರೀನಿವಾಸ್ ಅವರನ್ನು ಸೆಳೆಯಲು ಕಮಲ ಕಸರತ್ತು ನಡೆಸಿತ್ತು. ಈಗಲೂ ಅಂಥ ಪ್ರಯತ್ನಕ್ಕೆ ಮುಂದಾಗಿರುವುದು ವಿಪರ್ಯಾಸ.












Click it and Unblock the Notifications