''ನಾವು ತಲೆಯನ್ನು ಕಟ್ ಮಾಡೋಕು ಸಿದ್ಧ": ಇಮ್ರಾನ್ ಬಳಿಕ ನಲಪಾಡ್ ವಿವಾದಾತ್ಮಕ ಹೇಳಿಕೆ
ಮಂಡ್ಯ, ನವೆಂಬರ್ 17: 'ನಾವು ತಲೆಯನ್ನು ಕಟ್ ಮಾಡೋಕು ರೆಡಿ ಇದ್ದೀವಿ' ಎಂದು ರಾಜ್ಯ ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪ್ರತಾಪ್ ಗಡಿ ಹೇಳಿಕೆಯ ಕುರಿತು ಸ್ಪಷ್ಟನೆ ನೀಡುವ ಭರದಲ್ಲಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಮ್ರಾನ್ ಕೂಡಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಾದ ಬಳಿಕ ಇಂದು ಮಂಡ್ಯದಲ್ಲಿ ನಲಪಾಡ್ ಕೂಡಾ ಇದೇ ಧಾಟಿಯಲ್ಲಿ ಗುಡುಗಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಲಪಾಡ್, 'ಈ ದೇಶಕ್ಕೋಸ್ಕರ ನಮ್ಮ ತಲೆಯನ್ನು ಕಡಿಸಿಕೊಳ್ಳುತೇವೆ. ಜೊತೆಗೆ ತಲೆಯನ್ನು ಕಟ್ ಮಾಡೋಕು ರೆಡಿ ಇದ್ದೀವಿ. ನಾವು ತಪ್ಪಲ್ಲಿ ಭಯಪಟ್ಟು ತಲೆಯನ್ನು ಬಗ್ಗಿಸಲು ತಯಾರಿಲ್ಲ. ನಾವು ತಲೆಯನ್ನು ಕಟ್ ಮಾಡಿಸೋರು' ಎಂದು ಹೇಳಿದರು. 'ಬಿಜೆಪಿ ಅವರಿಗೆ ಹಿಂದಿ ಬರುವುದಿಲ್ಲ. ಮೊದಲು ಅವರು ಹಿಂದಿ ಕ್ಲಾಸ್ಗೆ ಹೋಗಬೇಕು. ಅವರು ಇಮ್ರಾನ್ ಹೇಳಿಕೆಯನ್ನು ತಪ್ಪಾಗಿ ತಿರುಚಿದ್ದಾರೆ' ಎಂದಿದ್ದಾರೆ. 'ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಣ ಇಲ್ಲ. ನಾವೆಲ್ಲರೂ ಪಕ್ಷಕ್ಕಾಗಿ ದುಡಿಯುತ್ತೇವೆ. ಮುಂದೆನೂ ದುಡಿಯುತ್ತೇವೆ. ರಾಹುಲ್ ಗಾಂಧಿ ಅವರ ಸೈನಿಕರಾಗಿ ದುಡಿಯುತ್ತೇವೆ' ಎಂದರು. 'ಡಿಕೆ ಶಿವಕುಮಾರ್ ಅವರು ಯುವಕ ಮೇಲೆ ಕಾಳಜಿ ಹೊಂದಿದ್ದಾರೆ. ವ್ಯಕ್ತಿ ಪೂಜೆ ಬೇಡ, ಪಕ್ಷ ಪೂಜೆ ಮಾಡಬೇಕು. ಕಾಂಗ್ರೆಸ್ ಪಕ್ಷ ನಮ್ಮ ತಾಯಿ ಇದ್ದಂತೆ. ಹೀಗಾಗಿ ನಾವು ವ್ಯಕ್ತಿ ಪೂಜೆ ಮಾಡುವುದಿಲ್ಲ. ಪಕ್ಷ ಪೂಜೆ ಮಾಡುತ್ತೇವೆ' ಎಂದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಿನ್ನೆ (ನ.16) ನಡೆದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಇಮ್ರಾನ್ ಪ್ರತಾಪ್ ಗಡಿ ವಿವಾದಿತ ಹೇಳಿಕೆ ನೀಡಿದ್ದರು. 'ನೀವು ಟಿಪ್ಪುಸುಲ್ತಾನ್ ನೆಲದಿಂದ ಬಂದವರು'. 'ನಿಮಗೆ ತಲೆ ಕತ್ತರಿಸೋದು ಗೊತ್ತಿದೆ, ತಲೆ ತಗ್ಗಿಸೋದು ಗೊತ್ತಿಲ್ಲ'. 'ನಿಮಗೆ ತಲೆ ಬಾಗುವುದು ತಿಳಿದಿಲ್ಲ, ತಲೆ ಎತ್ತುವುದು ತಿಳಿದಿದೆ' ಅಂತ ಕಾಂಗ್ರೆಸ್ ರಾಷ್ಟ್ರೀಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಮ್ರಾನ್ ಪ್ರತಾಪ್ ಗಡಿ ವಿವಾದಿತ ಭಾಷಣ ಮಾಡಿದ್ದರು. ಬಿಜೆಪಿ ಸರ್ಕಾರದ ನಿಲುವನ್ನು ಖಂಡಿಸುವ ಭರದಲ್ಲಿ ಟಿಪ್ಪು ಸುಲ್ತಾನ್ ನೆಲದವರು ತಲೆ ಕತ್ತರಿಸುವರು ಎಂಬ ರೀತಿಯಲ್ಲಿ ಇಮ್ರಾನ್ ಮಾತನಾಡಿದ್ದರು. ಈ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ದೇಶ ಕಷ್ಟದ ಕಾಲದಲ್ಲಿ ಸಾಗುತ್ತಿದೆ ಎಂದು ಮಾತನಾಡಿದ ಇಮ್ರಾನ್, ಬಿಜೆಪಿ ಸರ್ಕಾರದ ನಿಲುವು ಖಂಡಿಸುವ ಭರದಲ್ಲಿ ವಿವಾದಿತ ಹೇಳಿಕೆ ನೀಡಿದ್ದರು. ಈ ಹಿಂದೆಯೂ ಸಾಕಷ್ಟು ವಿವಾದಿತ ಹೇಳಿಕೆಯನ್ನು ಇಮ್ರಾನ್ ನೀಡಿದ್ದರು. ಶಾಹಿನ್ ಭಾಗ್ ಮಾದರಿ ಹೋರಾಟ ಹೈದರಾಬಾದ್ನಲ್ಲಿ ಏಕಿಲ್ಲ ಎಂದು ಪ್ರಶ್ನಿಸಿ ವಿವಾದ ಹುಟ್ಟುಹಾಕಿದ್ದರು. ಇಮ್ರಾನ್ ವಿರುದ್ಧ ಹೈದರಾಬಾದ್ ಪೋಲಿಸರು ಕೇಸ್ ಕೂಡಾ ದಾಖಲಿಸಿದ್ದರು. ಅಧಿಕಾರಕ್ಕಾಗಿ ಆಡಳಿತಶಾಹಿ ಆಥವಾ ಕಾರ್ಯಾಂಗವನ್ನು ಮುಸ್ಲಿಂಮರು ವಶಕ್ಕೆ ಪಡೆದುಕೊಳ್ಳಬೇಕು ಅಂತ ಇಮ್ರಾನ್ ವಿವಾದ ಸೃಷ್ಟಿಸಿದ್ದರು. ಉತ್ತರ ಪ್ರದೇಶ ಮೂಲದ ನಾಯಕ ಇಮ್ರಾನ್ ಉರ್ದು ಕವಿಯೂ ಅಗಿದ್ದಾರೆ. ಇವರು ಉತ್ತರ ಪ್ರದೇಶದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದ ಆರೋಪವನ್ನು ಹೊಂದಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಿನ್ನೆ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭ ನಡೆದಿತ್ತು. ಸಭಾ ವೇದಿಕೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದರು. ಈ ವೇಳೆ ಕೆಲವರು ಡಿಕೆಶಿ, ಡಿಕೆಶಿ ಅಂತ ಮತ್ತು ಜಮೀರ್ ಹೆಸರು ಹೇಳಿ ಘೋಷಣೆ ಕೂಗಿದ್ದಾರೆ. ಹೀಗಾಗಿ ಸಿಟ್ಟಾದ ಸಿದ್ದರಾಮಯ್ಯ ಅರ್ಧಕ್ಕೆ ಭಾಷಣ ನಿಲ್ಲಿಸಿ ವೇದಿಕೆಯಿಂದ ಕೆಳಗೆ ಇಳಿದಿದ್ದಾರೆ. ಈ ನಡುವೆ ಇದು ಪೂರ್ವ ನಿಯೋಜಿತ ಪ್ಲ್ಯಾನ್ ಎಂಬ ಗುಸುಗುಸು ಕೂಡಾ ಕೇಳಿಬಂದಿದೆ.
ಇಮ್ರಾನ್ ಇಂದು ವಿವಾದಾತ್ಮಕ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಕೆಲವರಿಂದ ನನ್ನ ಹೇಳಿಕೆ ತಿರುಚುವ ಯತ್ನವಾಗಿದೆ. 'ನಮ್ಮ ಹಕ್ಕಿಗಾಗಿ ನಾವು ತಲೆ ಕೊಡ್ತೀವಿ. ನಾವೆಂದೂ ತಲೆ ತಗ್ಗಿಸುವ ಕೆಲಸ ಮಾಡಲ್ಲ ಅಂದಿದ್ದೆ. ಮಾಧ್ಯಮಗಳು ಮೊದಲು ನನ್ನ ಹೇಳಿಕೆಯನ್ನ ಅವಲೋಕನ ಮಾಡಿ.ಕೆಲವರಿಂದ ನನ್ನ ಹೇಳಿಕೆ ತಿರುಚುವ ಯತ್ನ ಮಾಡಲಾಗುತ್ತಿದೆ' ಎಂದರು. ತಮ್ಮ ವಿವಾದಾತ್ಮಕ ಹೇಳಿಕೆಗೆ ಬಿಜೆಪಿಗರ ವಿರೋಧದ ಬಗ್ಗೆ ಮಾತನಾಡಿದ ಅವರು ದೇಶಕ್ಕಾಗಿ ತಲೆ ಕತ್ತರಿಸಿಕೊಳ್ಳೋದು ತಪ್ಪು ಅನ್ನೋದಾದರೆ. ಬಿಜೆಪಿಯವರದ್ದು ಯಾವ ಸೀಮೆಯ ರಾಷ್ಟ್ರ ಪ್ರೇಮ. ನಾವು ಅವತ್ತಿಗೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ವಿ. ಇವತ್ತಿಗೂ ದೇಶಕ್ಕಾಗಿ ಪ್ರಾಣ ತ್ಯಾಗಕ್ಕೆ ಸಿದ್ಧ ಎಂದಿದ್ದಾರೆ.
Recommended Video
ಡಿಕೆ ಶಿವಕುಮಾರ್ ವರ್ಸಸ್ ಜಮೀರ್ ಬೆಂಬಲಿಗರ ಗಲಾಟೆ ವಿಚಾರವಾಗಿ ಮಾತನಾಡಿದ ಅವರು, ಆ ಕಾರ್ಯಕ್ರಮದಲ್ಲಿ 15 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರಿದ್ದರು. ಅವರೆಲ್ಲರೂ ಕಾಂಗ್ರೆಸ್ ಜಿಂದಾಬಾದ್ ಅಂತಾ ಕೂಗುತ್ತಿದ್ದರು. ಯಾರೋ ನಾಲ್ಕು ಜನರ ಕೂಗಿಗೆ ತಲೆ ಕೆಡಿಸಿಕೊಳ್ಳಬಾರದು. ಕಾಂಗ್ರೆಸ್ ಪರ ಘೋಷಣೆ ಕೂಗುವವರಿಗೆ ಮನ್ನಣೆ ಕೊಡಬೇಕು. ಲೋಕಲ್ ಪಾಲಿಟಿಕ್ಸ್ ಗೆ ಯಾಕಿಷ್ಟು ಮನ್ನಣೆ ಕೊಡ್ತೀರಿ? ಎಂದು ಮಾಧ್ಯಮಗಳಿಗೆ ಇಮ್ರಾನ್ ಮರು ಪ್ರಶ್ನೆ ಹಾಕಿದ್ದಾರೆ.