ಕೆಆರ್ ಎಸ್ ನಿಂದ ನಾಲೆಗಳಿಗೆ ಹರಿದ ನೀರು: ರೈತರಲ್ಲಿ ಸಂತಸ
ಮಂಡ್ಯ, ಮೇ 13: ಬೇಸಿಗೆಯಲ್ಲಿ ರೈತರು ಬೆಳೆದ ಬೆಳೆಯು ನೀರಿಲ್ಲದೆ ಒಣಗುತ್ತಿರುವುದನ್ನು ಮನಗಂಡ ಜಿಲ್ಲಾಧಿಕಾರಿಗಳು ನಾಲೆಗಳಿಗೆ ನೀರು ಹರಿಸುವಂತೆ ಸೂಚಿಸಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
Recommended Video
ಈಗಾಗಲೇ ಕೆಆರ್ ಎಸ್ ನಿಂದ ದೇವರಾಯ ನಾಲೆ ಮತ್ತು ವಿರಿಜಾ ನಾಲೆಗಳಿಗೆ ನೀರು ಹಾಯಿಸಿರುವುದರಿಂದ ನಾಲೆ ತುಂಬಿ ಹರಿಯುತ್ತಿದೆ. ಹೀಗಾಗಿ ನೀರಿಲ್ಲದೆ ಬೆಳೆ ಒಣಗುತ್ತಿದ್ದರಿಂದ ಬೇಸರಗೊಂಡಿದ್ದ ರೈತರಲ್ಲಿ ಸಂತಸ ಮನೆ ಮಾಡಿದೆ. ಈಗಾಗಲೇ ಕೆಲವು ರೈತರು ತಮ್ಮ ಅನುಕೂಲಕ್ಕೆ ತಕ್ಕಂತೆ ಕಬ್ಬು, ಭತ್ತ ಸೇರಿದಂತೆ ಹಲವು ರೀತಿಯ ಬೆಳೆಗಳನ್ನು ಬೆಳೆದಿದ್ದಾರೆ. ಕೆಲವರು ಕೊಳವೆ ಬಾವಿ ನೀರನ್ನು ಆಶ್ರಯಿಸಿದ್ದರೆ, ಇನ್ನು ಕೆಲವರು ನಾಲೆ ನೀರನ್ನು ಆಶ್ರಯಿಸಿದ್ದರು.
ಆದರೆ ನಾಲೆಯಲ್ಲಿ ನೀರು ಹರಿಯದ ಕಾರಣದಿಂದ ಬೆಳೆಗಳು ನೀರಿಲ್ಲದೆ ಒಣಗುವ ಸ್ಥಿತಿಗೆ ತಲುಪಿದ್ದವು. ಸಹಸ್ರಾರು ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆ ಒಣಗಿ ಹಾಳಾಗುತ್ತದೆಯಲ್ಲ ಎಂಬ ಬೇಸರದಲ್ಲಿದ್ದ ರೈತರು ಬೆಳೆದು ನಿಂತಿರುವ ಬೆಳೆಗಳಿಗೆ ನೀರು ಹರಿಸಿ ರಕ್ಷಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು. ರೈತರ ಮನವಿಯನ್ನು ಆಲಿಸಿದ ಡಾ.ಎಂವಿ.ವೆಂಕಟೇಶ್ ಅವರು ನೀರಿನ ಅಭಾವದಿಂದ ಬೆಳೆಗಳನ್ನು ರಕ್ಷಿಸಲು ಆಗುತ್ತಿಲ್ಲ ಎಂಬ ರೈತರ ನೋವಿಗೆ ತಕ್ಷಣವೇ ಸ್ಪಂದಿಸಿ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ನಂತರ ದೇವರಾಯ ನಾಲೆ, ವಿರಿಜಾ ನಾಲೆಗಳಿಗೆ ಕೃಷ್ಣರಾಜಸಾಗರ ಅಣೆಕಟ್ಟಿನಿಂದ ನೀರನ್ನು ಬಿಡುವಂತೆ ಸೂಚನೆ ನೀಡಿದರು. ಇದೀಗ ಜಿಲ್ಲಾಧಿಕಾರಿಗಳ ಸೂಚನೆಯಂತೆ ನೀರಾವರಿ ಇಲಾಖೆಯ ಅಧಿಕಾರಿಗಳು ನಾಲೆಗಳಿಗೆ ನೀರನ್ನು ಹರಿಸಿದ್ದು, ರೈತರು ನೆಮ್ಮದಿಯುಸಿರು ಬಿಡುವಂತಾಗಿದೆ.












Click it and Unblock the Notifications