ಕೆಆರ್ಎಸ್ ಮುತ್ತಿಗೆ: ವಾಟಾಳ್, ಸಾರಾ ಮತ್ತಿತರರ ಬಂಧನ
ಶ್ರೀರಂಗಪಟ್ಟಣ, ಸೆಪ್ಟೆಂಬರ್ 10 : ನಿಷೇಧವಿದ್ದರೂ ಕೃಷ್ಣ ರಾಜ ಸಾಗರ ಒಳನುಗ್ಗಲು ಯತ್ನಿಸಿದ ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಕನ್ನಡ ಸೇನೆ ಅಧ್ಯಕ್ಷ ಕುಮಾರ್ ಸೇರಿದಂತೆ 25ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ರೈತರು ಮತ್ತು ಹೋರಾಟಗಾರರ ವಿರೋಧದ ನಡುವೆಯೂ ತಮಿಳುನಾಡಿಗೆ ನೀರು ಹರಿಸುತ್ತಿರುವ ಕ್ರಮ ಖಂಡಿಸಿ ಕೆ.ಆರ್.ಎಸ್.ನಲ್ಲಿ ಧರಣಿ ನಡೆಸುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಅವರು, ಕೆ.ಆರ್.ಎಸ್. ಒಳನುಗ್ಗಲು ಯತ್ನಿಸಿದರು. ಇದರಿಂದಾಗಿ ಪೊಲೀಸರು ವಾಟಾಳ್ ನಾಗರಾಜ್, ಸಾ.ರಾ. ಗೋವಿಂದು, ಕನ್ನಡ ಸೇನೆ ಅಧ್ಯಕ್ಷ ಕುಮಾರ್ ಮತ್ತಿತರನ್ನು ವಶಕ್ಕೆ ಪಡೆದು, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು.
ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಪ್ರದರ್ಶಿಸುತ್ತಿರುವ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸೆ.15ರಂದು ರಾಜ್ಯಾದ್ಯಂತ ರೈಲು ಬಂದ್ಗೆ ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಕರೆ ನೀಡಿದರು. [ಪೊಲೀಸರ ಲಾಠಿ ಏಟಿಗೆ ಬಾವು ಇಳಿದರೂ, ಇಳಿಯದ ಕಾವು]
ಮಂಡ್ಯ ನಗರದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ರೈಲು ಸಂಚಾರ ಬಂದ್ ಮಾಡಲಾಗುವುದು. ರೈತರು ಹಾಗೂ ಹೋರಾಟಗಾರರು ಯಾವುದೇ ಕಾರಣಕ್ಕೂ ಎದೆಗುಂದಬಾರದು. ಕಾವೇರಿ ನದಿ ನೀರಿನ ವಿಷಯದಲ್ಲಿ ಜೈಲಿಗೆ ಹೋಗಲೂ ಸಿದ್ಧರಿರಬೇಕು ಎಂದರು.
19ರವರೆಗೆ ನಿಷೇಧಾಜ್ಞೆ : ಕೃಷ್ಣರಾಜಸಾಗರ ಅಣೆಕಟ್ಟೆಯ ಹೊರಭಾಗದಿಂದ 500 ಮೀ.ಸುತ್ತಲಿನ ಪ್ರದೇಶವನ್ನು ಶನಿವಾರ ಮಧ್ಯಾಹ್ನ 3 ಗಂಟೆಯಿಂದ ಸೆ.19ರ ಮಧ್ಯರಾತ್ರಿಯವರೆಗೆ ನಿಷೇಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಆದೇಶ ಹೊರಡಿಸಿದ್ದಾರೆ. [ಕಾವೇರಿ ವಿವಾದ : ಸೆಪ್ಟೆಂಬರ್ 15ರಂದು ರೈಲ್ವೆ ಬಂದ್]