ಮಂಡ್ಯ; ಕೇಂದ್ರದ ಯೋಜನೆ ಫಲಾನುಭವಿಗಳ ಜೊತೆ ಸಚಿವರ ಸಂವಾದ
ಮಂಡ್ಯ, ಅಕ್ಟೋಬರ್, 28: ಸರ್ಕಾರದ ಯೋಜನೆಗಳು ದೇಶದ ಮೊದಲ ವ್ಯಕ್ತಿಗಳ ಹೆಸರಿನಲ್ಲಿ ಪ್ರಾರಂಭವಾಗುತ್ತಿತ್ತು. ಆದರೆ ಈಗ ಪ್ರಧಾನಿ ಹೆಸರಿನಲ್ಲೇ ಕಾರ್ಯಕ್ರಮಗಳು ನಡೆಯುವಂತಾಗಿವೆ ಎಂದು ಕೇಂದ್ರ ಇಂಧನ ಸಚಿವ ಕ್ರಿಷ್ಣನ್ ಪಾಲ್ ಗುರ್ಜರ್ ಕಾಂಗ್ರೆಸ್ ನಾಯಕರಿಗೆ ಮಂಡ್ಯದಲ್ಲಿ ಪರೋಕ್ಷವಾಗಿ ಟಾಂಗ್ ನೀಡಿದರು.
ಮದ್ದೂರಿನ ಕ್ರೀಡಾಂಗಣದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಮಹಿಳಾ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ಸಾರ್ವಜನಿಕರ ತೆರಿಗೆ ಹಣದಲ್ಲಿ ವ್ಯಕ್ತಿಗಳ ಹೆಸರಿನಲ್ಲೇ ಯೋಜನೆಗಳು ನಡೆಯುತ್ತಿತ್ತು. ಅದು ಸರಿಯಲ್ಲ ಎನ್ನುವ ಕಾರಣಕ್ಕೆ ಅವರು ಪ್ರಧಾನಿ ಹೆಸರಿನಲ್ಲೇ ಯೋಜನೆಗಳನ್ನು ಪ್ರಾರಂಭಿಸಿದ್ದಾರೆ. ಕೇಂದ್ರ ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ಮಾತೃವಂದನಾ ಯೋಜನೆ, ಸೀ ಶಕ್ತಿ ಸಂಘಗಳಿಗೆ ಸಾಲ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರು ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಸಬಲರಾಗಬೇಕು ಎಂದು ಕರೆ ನೀಡಿದರು.
ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯಡಿ ಮೊದಲ ಬಾರಿ ಗರ್ಭಿಣಿ ಮಹಿಳೆಯರಿಗೆ ಪೌಷ್ಠಿಕ ಆಹಾರ ಒದಗಿಸಲು ಮೂರು ಕಂತುಗಳಲ್ಲಿ 5000 ರೂಪಾಯಿ ಸಹಾಯಧನವನ್ನು ನೀಡಲಾಗುತ್ತಿತ್ತು. ಈ ಯೋಜನೆಯನ್ನು ಮಾನ್ಯ ಪ್ರಧಾನ ಮಂತ್ರಿಗಳು ಎರಡನೇ ಬಾರಿ ಗರ್ಭಿಣಿಯಾಗುವ ಮಹಿಳೆಗೂ ಮಾತೃ ವಂದನಾ ಯೋಜನೆಯನ್ನು ವಿಸ್ತರಿಸಲು ಅಧಿಸೂಚನೆ ಹೊರಡಿಸಲಿದ್ದಾರೆ ಎಂದರು.

ಕೊರೊನಾ ಸಂದರ್ಭದಲ್ಲಿ ಉಚಿತ ಅಕ್ಕಿ; ಕೊರೊನಾ ಸಂದರ್ಭದಲ್ಲಿ ದೇಶದ 80 ಕೋಟಿ ಬಿಪಿಎಲ್ ಕಾರ್ಡುದಾರರಿಗೆ ಪ್ರತಿ ತಿಂಗಳು ಗರೀಬ್ ಕಲ್ಯಾಣ ಯೋಜನೆಯಡಿ ಉಚಿತವಾಗಿ 5 ಕೆಜಿ ಅಕ್ಕಿ ಸೇರಿದಂತೆ ಇತರೆ ಧಾನ್ಯ ನೀಡಲಾಗಿದೆ. ದೇಶದ ಜನರಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡಲಾಗಿದೆ. ನರೇಗಾ ಯೋಜನೆಯಡಿ ಕೆಲಸ, ಆವಾಸ್ ಯೋಜನೆಯಡಿ ಮನೆ ನಿರ್ಮಾಣಕ್ಕೆ ಸಹಾಯಧನ, ಆಯುಷ್ಮಾನ್ ಯೋಜನೆಯಡಿ ಬಿಪಿಎಲ್ ಕಾರ್ಡುದಾರರಿಗೆ 5 ಲಕ್ಷದವರೆಗೆ ಉಚಿತ ಚಿಕಿತ್ಸೆ, ಜಲ ಜೀವನ್ ಯೋಜನೆಯಡಿ ಮನೆಗಳಿಗೆ ನಲ್ಲಿ ವ್ಯವಸ್ಥೆ ಹಾಗೂ ನೀರು ನೀಡಲಾಗಿದೆ ಎಂದು ತಿಳಿಸಿದರು.
ಫಲಾನುಭವಿಗಳೊಂದಿಗೆ ಸಂವಾದ; ಒಂದು ದೇಶ ಒಂದು ಪಡಿತರ ಯೋಜನೆಯ ಫಲಾನುಭವಿಯಾದ ಬೆಸಗರಹಳ್ಳಿ ಸಯ್ಯದ್ ಲುಕ್ಮನ್ ಅವರು ತಾವು ಕೇರಳದಿಂದ ಕೆಲಸಕ್ಕಾಗಿ ಮದ್ದೂರಿಗೆ ಬಂದಿದ್ದರು. ಕೇರಳದಲ್ಲಿ ಪಡೆದ ಪಡಿತರ ಚೀಟಿಯ ಸಹಾಯದಿಂದ ಮಂಡ್ಯ ಜಿಲ್ಲೆಯಲ್ಲಿ ಅಕ್ಕಿಯನ್ನು ಪಡೆಯುತ್ತಿದ್ದೇನೆ. "ಈ ಯೋಜನೆಯಿಂದ ಬೇರೆ ಬೇರೆ ಸ್ಥಳಗಳಿಗೆ ಕೆಲಸಕ್ಕೆ ತೆರಳುವ ಕಾರ್ಮಿಕರಿಗೆ ಹೆಚ್ಚು ಅನುಕೂಲವಾಗಿದೆ," ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಸ್ಟಾಂಡ್ ಆಫ್ ಇಂಡಿಯಾ ಯೋಜನೆಯಡಿ ಚಂದ್ರಕಲಾ ಎಂಬುವವರು ಕ್ರಷರ್ ಕೆಲಸಕ್ಕಾಗಿ 45 ಲಕ್ಷ ರೂಪಾಯಿ ಸಾಲ ಪಡೆದಿದ್ದು, 20 ಜನರಿಗೆ ಕೆಲಸ ನೀಡುವುದರೊಂದಿಗೆ ಪ್ರತಿ ತಿಂಗಳು 5 ಲಕ್ಷ ಲಾಭಗಳಿಸುತ್ತಿದ್ದೇನೆ ಎಂದು ತಿಳಿಸಿದರು.
ಅಕ್ಷತಾ ಎನ್ನುವ ವಿದ್ಯಾರ್ಥಿನಿಗೆ ಹೃದಯದಲ್ಲಿ ಸಮಸ್ಯೆ ಕಂಡು ಬಂದಿತ್ತು. ಇದೀಗ ಆಕೆ ಗುಣಮುಖವಾಗಿದ್ದು, ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದೇನೆ. ಈ ಹಿನ್ನೆಲೆ ಸರ್ಕಾರಕ್ಕೆ ಧನ್ಯವಾದವನ್ನು ತಿಳಿಸುತ್ತನೆ ಎಂದರು.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಶಿವಪುರದ ಮಮತಾ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಚಾಮನಹಳ್ಳಿ ಪಲ್ಲವಿ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮಹದೇವಮ್ಮ, ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್ ಧನ್ ಯೋಜನೆಯಡಿ ಪ್ರಮೀಳಾ (ಟೈಲರ್), ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿ ವಿದ್ಯಾಶ್ರೀ, ಜಲಜೀವನ್ ಮಿಷನ್ ಯೋಜನೆಯಡಿ ಸಿಂಧುಶ್ರೀ ಸೇರಿದಂತೆ ಇನ್ನಿತರ ಯೋಜನೆಗಳನ್ನು ಕುರಿತಂತೆ ಫಲಾನುಭವಿಗಳು ಸಚಿವರೊಂದಿಗೆ ಸಂವಾದ ನಡೆಸಿದರು.
ವಿವಿಧ ಯೋಜನೆಯಡಿ ಚೆಕ್ ವಿತರಣೆ; ಸ್ಟಾಂಡ್ ಆಫ್ ಇಂಡಿಯಾ ಯೋಜನೆಯಿಂದ ಸಾಲಕ್ಕಾಗಿ ಚಂದ್ರಕಲಾ ಎಂಬುವವರಿಗೆ 45 ಲಕ್ಷ ರೂಪಾಯಿ ನೀಡಲಾಗಿದೆ. ಶೋಭ ಮತ್ತು ಸ್ವರ್ಣಗೌರಿ ಅವರಿಗೆ ತಲಾ 10 ಲಕ್ಷ ಮೌಲ್ಯದ ಚೆಕ್ ಹಾಗೂ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಯೋಜನೆಯಡಿ ಕುಮಾರ್ ಮತ್ತು ಸಂದೀಪ್ ಎಂಬುವವರಿಗೆ ತಲಾ 2 ಲಕ್ಷ ರೂಪಾಯಿ ಚೆಕ್ ವಿತರಿಸಲಾಯಿತು.












Click it and Unblock the Notifications