ಮಂಡ್ಯ: ಖತರ್ನಾಕ್ ಮನೆಗಳ್ಳರ ಬಂಧನ, 230 ಗ್ರಾಂ ಚಿನ್ನ ವಶ
ಮಂಡ್ಯ, ಅಕ್ಟೋಬರ್ 16 : ಮಂಡ್ಯ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮನೆಗೆ ಕನ್ನ ಹಾಕುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸಿರುವ ಸೆಂಟ್ರಲ್ ಠಾಣೆ ಪೊಲೀಸರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ದಾವಣಗೆರೆ ಜಿಲ್ಲೆಯ ಚಿಕ್ಕಹಬ್ಬಿಗೆರೆ ಗ್ರಾಮದ ತಿಪ್ಪೇಶ (34) ಮತ್ತು ತುಮಕೂರು ಜಿಲ್ಲೆಯ ಸೈಯ್ಯದ್ ಬಾಷಾ ಅಲಿಯಾಸ್ ಬಾಷಾ (28) ಬಂಧಿತ ಆರೋಪಿಗಳು. ಬಂಧಿತರಿಂದ ಸುಮಾರು 7 ಲಕ್ಷ ರೂ. ಮೌಲ್ಯದ 230 ಗ್ರಾಂ ಚಿನ್ನಾಭರಣ, 1 ಕೆ.ಜಿ. ಬೆಳ್ಳಿ ವಶಪಡಿಕೊಳ್ಳಲಾಗಿದೆ.
ಇವರಿಬ್ಬರು ಕಳ್ಳತನ ಮಾಡುವುದನ್ನೇ ಕಸುಬಾಗಿಸಿಕೊಂಡಿದ್ದರಲ್ಲದೆ, ಸಮಯ ನೋಡಿ ಮನೆಯಲ್ಲಿ ಯಾರೂ ಇಲ್ಲದ ಸಮಯ ಸಾಧಿಸಿ ಕನ್ನ ಹಾಕುತ್ತಿದ್ದರು.
ಈ ನಡುವೆ ನಗರದ ಷುಗರ್ ಟೌನ್ನಲ್ಲಿ ವಾಸವಾಗಿರುವ ಮೈಷುಗರ್ ಭದ್ರತಾ ನೌಕರ ಮರಿಸ್ವಾಮಿ ಅವರ ಮನೆಯ ಬೀಗ ಮುರಿದು ಒಳ ನುಗ್ಗಿ ಮನೆಯಲ್ಲಿದ್ದ ಚಿನ್ನಾಭರಣ, 8 ಸಾವಿರ ನಗದು ಹಣವನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಸೆಂಟ್ರಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ಪೊಲೀಸರು ಗಸ್ತಿನಲ್ಲಿದ್ದಾಗ ಮಂಡ್ಯದ ನಕ್ಷತ್ರ ಗೋಲ್ಡ್ ಗಿರವಿ ಅಂಗಡಿ ಮುಂದೆ ಅನುಮಾನಾಸ್ಪದವಾಗಿ ತಿಪ್ಪೇಶ ಮತ್ತು ಬಾಷಾ ಓಡಾಡುತ್ತಿದ್ದರು.
ಇದರಿಂದ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದಾಗ ಮಂಡ್ಯ ನಗರ, ಗ್ರಾಮಾಂತರ ಪ್ರದೇಶಗಳಲ್ಲಿ ಕಳ್ಳತನ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ.
ಆರೋಪಿಗಳು ದಾವಣಗೆರೆ, ಚಿತ್ರದುರ್ಗ, ಕಾರವಾರ, ತುಮಕೂರು, ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲೂ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ಕಾರ್ಯಾಚರಣೆಯಲ್ಲಿ ಸಿಪಿಐ ಸಂತೋಷ್ಕುಮಾರ್ ನೇತೃತ್ವದಲ್ಲಿ ಸೆಂಟ್ರಲ್ ಠಾಣೆಯ ಪಿಎಸ್ಐ ಆನಂದ್ ಕುಮಾರ್ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.