ಭೋರ್ಗರೆಯುತ್ತಿರುವ ಗಗನ ಚುಕ್ಕಿ-ಭರಚುಕ್ಕಿ ಜಲಪಾತಗಳು: ಸಾವಿರಾರು ಪ್ರವಾಸಿಗರ ದಂಡು
ಮಂಡ್ಯ, ಜುಲೈ 11 : ಕೃಷ್ಣರಾಜ ಸಾಗರ (ಕೆಆರ್ಎಸ್) ಜಲಾಶಯದಿಂದ ಕಾವೇರಿ ನದಿಗೆ ಹೆಚ್ಚಿನ ನೀರು ಬಿಟ್ಟಿರುವುದರಿಂದ ಕೆಂಡದ ಜಲಪಾತ ಎಂದೇ ಖ್ಯಾತಿಯಾಗಿರುವ ಗಗನಚುಕ್ಕಿ ಜಲಪಾತದಲ್ಲಿ ನೊರೆ ಹಾಲಿನಂತೆ ಧುಮ್ಮಿಕ್ಕಿ ಹರಿಯುತ್ತಿರುವ ನೀರನ್ನು ವೀಕ್ಷಿಸಲು ಸಾವಿರಾರು ಪ್ರವಾಸಿಗರು ಶಿವನಸಮುದ್ರಕ್ಕೆ ಆಗಮಿಸುತ್ತಿದ್ದಾರೆ.
ಕೆಆರ್ಎಸ್ ಅಣೆಕಟ್ಟೆ ಭರ್ತಿ ಹಂತಕ್ಕೆ ತಲುಪಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯದಿಂದ 50 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಬಿಡಲಾಗುತ್ತಿದೆ. ಇದರಿಂದ ಗಗನಚುಕ್ಕಿ ಜಲಪಾತ ಮೈದುಂಬಿಕೊಂಡು ಧುಮ್ಮಿಕ್ಕಿ ಹರಿಯುವ ಮೂಲಕ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.
ಕಾವೇರಿ ಜಲಾಶಯದಲ್ಲಿ ವ್ಯಾಪಕ ಮಳೆ: ನಿಧಾನವಾಗಿ ಮೈದುಂಬುತ್ತಿರುವ ಕೆಆರ್ಎಸ್
ಕೆಆರ್ಎಸ್ ಜಲಾಶಯ 122.60 ಅಡಿ ತಲುಪಿರುವುದರಿಂದ ಜಲಾಶಯದಿಂದ 50 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಭಾನುವಾರ ರಜಾ ದಿನವಾಗಿದ್ದರಿಂದ ಕಾವೇರಿ ನದಿಗೆ ನೀರು ಬಿಟ್ಟ ವಿಷಯ ತಿಳಿದ ಮಂಡ್ಯ ಸೇರಿದಂತೆ ಬೆಂಗಳೂರು, ಮೈಸೂರು, ಚಾಮರಾಜನಗರ ಹಾಗೂ ಸುತ್ತಮುತ್ತಲ ಜಿಲ್ಲೆಗಳ ಸುಮಾರು 8 ಸಾವಿರಕ್ಕೂ ಅಧಿಕ ಪ್ರವಾಸಿಗರು ಗಗನಚುಕ್ಕಿ ಜಲಪಾತಕ್ಕೆ ಭೇಟಿ ನೀಡಿ ನೊರೆಹಾಲಿನಂತೆ ನಾನೂರಕ್ಕೂ ಹೆಚ್ಚು ಅಡಿ ಎತ್ತರಿಂದ ಕಂದಕ್ಕೆ ಧುಮ್ಮಿಕ್ಕುವ ನೀರನ್ನು ನೋಡಿ ರೋಮಾಂಚನಗೊಂಡರು. ಈ ವೇಳೆ ಭೋರ್ಗರೆಯುವ ನೀರನ್ನು ನೋಡಿ ಬಂಡೆ ಮೇಲೆ ನಿಂತು ಸೆಲ್ಫಿತೆಗೆದುಕೊಂಡರು.
ಸೋಮವಾರದಿಂದ ಇನ್ನಷ್ಟು ಪ್ರಮಾಣದಲ್ಲಿ ಜಲಾಶಯದಿಂದ ನದಿಗೆ ಬಿಡುವುದರಿಂದ ಜಲಪಾತದ ರಮಣೀಯ ದೃಶ್ಯ ನೋಡಲು ಸಾವಿರಾರು ಪ್ರವಾಸಿಗರು ಆಗಮಿಸುವ ಸಾಧ್ಯತೆ ಇದೆ. ಅಲ್ಲದೇ ಭರಚುಕ್ಕಿ ಜಲಪಾತವೂ ಕೂಡ ನೀರಿನಿಂದ ಕಂಗೊಳಿಸಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ದೃಶ್ಯ ಕಂಡು ಬಂತು.
ಭೋರ್ಗರೆಯುತ್ತಿದೆ ಭರಚುಕ್ಕಿ, ಹೊಗೆನಕಲ್ ಫಾಲ್ಸ್; ಕಾವೇರಿಯ ಹೊರಹರಿವು ಹೆಚ್ಚುತ್ತಿದ್ದಂತೆ ರಾಜ್ಯದ ಗಡಿಯಲ್ಲಿರುವ ಪ್ರಸಿದ್ಧ ಹೊಗೆನಕಲ್ ಜಲಪಾತ ಮತ್ತು ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತಗಳು ಕೂಡ ಧುಮ್ಮಿಕ್ಕಿ ಹರಿಯುತ್ತಿವೆ.
ಕಬಿನಿ ಮತ್ತು ಕೆಆರ್ಎಸ್ ಆಣೆಕಟ್ಟೆಯಿಂದ ಹೊರಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತ ಭೋರ್ಗರೆದು ದುಮ್ಮಿಕ್ಕುತ್ತಿದೆ. ಹಾಲಿನ ನೊರೆಯಂತೆ ದುಮ್ಮಿಕ್ಕುತ್ತಿರುವ ಭರಚುಕ್ಕಿ ವೈಭವ ರುದ್ರ ರಮಣೀಯವಾಗಿದ್ದು ಜಲಧಾರೆಯನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಮಳೆಯ ನಡುವೆಯೂ ಬರುತ್ತಿದ್ದಾರೆ.
ಕರ್ನಾಟಕದ ಗಡಿಯಲ್ಲಿರುವ ಭಾರತದ ನಯಾಗರ ಎಂದೇ ಕರೆಯುವ ಹೊಗೆನಕಲ್ ಜಲಪಾತ ಭೋರ್ಗರೆದು ದುಮ್ಮಿಕುತ್ತಿದ್ದು ಅಪರೂಪದ ದೃಶ್ಯ ಕಾವ್ಯವೇ ರೂಪುಗೊಂಡಿದೆ. ಸದ್ಯಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶವಿದ್ದು ಕಳೆದ ಬಾರಿ ರೀತಿ ಜಲಪಾತವೇ ಮಾಯವಾದಂತೆ ನೀರು ಬಂದರೇ ಮತ್ತೆ ಪ್ರವಾಸಿಗರಿಗೆ ನಿರ್ಬಂಧ ಹೇರುವ ಸಾಧ್ಯತೆಯಿದೆ.
Recommended Video