ಮಂಡ್ಯದಲ್ಲಿ ಮೂಲೆ ಸೇರಿದ ಮುಕ್ತಿರಥ!
ಮಂಡ್ಯ ಮಾರ್ಚ್ 7: ಹಳೇ ಮೈಸೂರು ವ್ಯಾಪ್ತಿಯಲ್ಲಿ ಹಲವೆಡೆ ಶವ ಸಾಗಿಸುವುದಕ್ಕಾಗಿ ಇದ್ದ ವಾಹನಗಳು ಇಂದು ಮೂಲೆ ಸೇರಿವೆ. ಮುಕ್ತಿರಥ ಎಂಬ ಹೆಸರಿನ ಈ ವಾಹನಗಳೇ ಇಂದು ಮುಕ್ತಿ ಪಡೆದುಬಿಟ್ಟಿವೆಯಾ ಎಂಬ ಪ್ರಶ್ನೆ ಎಲ್ಲೆಡೆ ಹುಟ್ಟಿಕೊಂಡಿದೆ.
ಗೋ.ಮಧುಸೂದನ್ ಅವರು ವಿಧಾನ ಸಭಾಸದಸ್ಯರಾಗಿದ್ದಾಗ ಈ ವಾಹನಗಳನ್ನು ವಿಧಾನಪರಿಷತ್ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯಿಂದ ನೀಡಿದ್ದರು. ತಲಾ 12 ಲಕ್ಷ ಬೆಲೆಯ ಈ ವಾಹನಗಳ ಕಾರ್ಯ ವೈಖರಿಯಿಂದ ಗೋ.ಮಧುಸೂಧನ್ ಸಹ ಜನಮೆಚ್ಚುಗೆ ಗಳಿಸಿದ್ದರು. ಆದರೆ ದಿನ ಕಳೆದಂತೆ ಚಾಲಕರ ಕೊರತೆ, ಇಂಧನದ ವೆಚ್ಚ ಭರಿಸುವುದು ಕಷ್ಟ ಎಂಬಿತ್ಯಾದಿ ಸಮಸ್ಯೆಗಳಿಂದಾಗಿ ಮುಕ್ತಿರಥವೇ ಪಂಚರ್ ಆದಂತಾಯಿತು.

ಸದುದ್ದೇಶದಿಂದಲೇ ಈ ವಾಹನವನ್ನು ಸ್ಥಳೀಯ, ಪುರಸಭೆ, ನಗರಸಭೆಗಳಿಗೆ ನೀಡಲಾಗಿತ್ತು. ಅದರಂತೆ ಮಂಡ್ಯ ನಗರಸಭೆಗೂ ಜೂನ್ 14, 2014ರಂದು ನೀಡಲಾಗಿತ್ತು. ಖುದ್ದು ಗೋ.ಮಧುಸೂದನ್ ಅವರೇ ಈ ಯೋಜನೆಗೆ ಚಾಲನೆ ನೀಡಿದ್ದರು. ಆವತ್ತಿನಿಂದ ಇಲ್ಲಿಯ ತನಕ ಲೆಕ್ಕ ಹಾಕಿದರೆ ಈ ಮುಕ್ತಿರಥದಲ್ಲಿ ನೂರಾರು ಶವಗಳನ್ನು ಸಾಗಿಸಬೇಕಾಗಿತ್ತು. ಆದರೆ ಸುಮಾರು 32 ತಿಂಗಳಿಗೆ ಈ ವಾಹನದಲ್ಲಿ ಸಾಗಿಸಿದ ಶವಗಳ ಸಂಖ್ಯೆ ಕೇವಲ 20 ಎಂದರೆ ಅಚ್ಚರಿಯಾಗಬಹುದು. ಆದರೆ ಇದು ಸತ್ಯ!
ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಾದ ನಗರಸಭೆ ಮೌನತಾಳಿದೆ. ಈ ವಾಹನವಿಲ್ಲದ ಕಾರಣ ಬಡವರು ಶವವನ್ನು ಸಾವಿರಾರು ರೂಪಾಯಿ ವೆಚ್ಚ ಮಾಡಿ ಸಾಗಿಸಬೇಕಾಗಿದೆ.
ಅಂಬುಲೆನ್ಸ್ ಮಾಫಿಯಾ
ಖಾಸಗಿ ಅಂಬುಲೆನ್ಸ್ ಮಾಫಿಯಾ ಇಲ್ಲಿ ಕೆಲಸ ಮಾಡುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಮುಕ್ತಿರಥ ಸಮರ್ಪಕವಾಗಿ ಬಳಕೆಯಾದರೆ ಖಾಸಗಿ ಅಂಬುಲೆನ್ಸ್ ಗಳಿಗೆ ಹೊಡೆತ ಬೀಳಬಹುದು ಎಂಬ ಕಾರಣಕ್ಕೆ ಒಳಗಿಂದೊಳಗೆ ನಗರಸಭೆಯ ಮೇಲೆ ಒತ್ತಡ ತರುತ್ತಿದ್ದಾರಾ ಎಂಬ ಸಂಶಯವೂ ವ್ಯಕ್ತವಾಗುತ್ತಿದೆ.












Click it and Unblock the Notifications