ರಂಗನತಿಟ್ಟು ಪಕ್ಷಿಧಾಮಕ್ಕೆ ಸಿಗಲಿದೆಯೇ ಅಂತರಾಷ್ಟ್ರೀಯ ಮಾನ್ಯತೆ?
ಮಂಡ್ಯ, ಜೂನ್ 21 : ರಾಜ್ಯದಲ್ಲೇ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಕರ್ನಾಟದಕ ಪಕ್ಷಿ ಕಾಶಿ ಎಂದೇ ಕರೆಸಿಕೊಳ್ಳುವ ರಂಗನತಿಟ್ಟು ಪಕ್ಷಿಧಾಮಕ್ಕೆ ಅಂತಾರಾಷ್ಟ್ರೀಯ ಮಟ್ಟದ ಮಾನ್ಯತೆ ದೊರಕಿಸುವ ನಿಟ್ಟಿನಲ್ಲಿ ಸತತ ಪ್ರಯತ್ನ ನಡೆಯುತ್ತಿದೆ.
ರಂಗನತಿಟ್ಟು ಪಕ್ಷಿಧಾಮ ಶೀಘ್ರವೇ ರಾಮ್ಸರ್ ಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ಈ ಮೂಲಕ ಈ ಪಕ್ಷಿಧಾಮಕ್ಕೆ ಅಂತಾರಾಷ್ಟ್ರೀಯ ಮಟ್ಟದ ಮಾನ್ಯತೆ ಸಿಗಲಿದೆ. ರಾಮ್ಸರ್ ಪಟ್ಟಿಗೆ ಸೇರ್ಪಡೆಯಾಗಿಸಲು ಅರಣ್ಯ ಮತ್ತು ವನ್ಯಜೀವಿ ಇಲಾಖೆ ಸತತ ಪ್ರಯತ್ನ ನಡೆಸುತ್ತಿದೆ. ಈ ಪ್ರಕ್ರಿಯೆ ಅಂತಿಮಗೊಳ್ಳಲು ಎರಡು ಮೂರು ವರ್ಷ ಕಾಲ ಬೇಕಾಗಬಹುದು ಎನ್ನುತ್ತಾರೆ ರಂಗನತಿಟ್ಟು ಪಕ್ಷಿಧಾಮದ ಉಸ್ತುವಾರಿ ಆರ್ ಎಫ್ ಓ ಅನನ್ಯಕುಮಾರ್.
ಜಲಚರ, ಪ್ರಾಣಿ ಪಕ್ಷಿಗಳು ಇರುವ ಜೌಗು ಪ್ರದೇಶವನ್ನು ರಾಮ್ಸರ್ ತಾಣವೆಂದು ಗುರುತಿಸಲಾಗುತ್ತದೆ. ಜಗತ್ತಿನ ವಿವಿಧ ಭಾಗದಲ್ಲಿ ಇರುವ ಇಂತಹ ಪ್ರದೇಶವನ್ನು ಸಂರಕ್ಷಣೆ ಮಾಡಲು ರಾಮ್ಸರ್ ಸಂಸ್ಥೆ ಹುಟ್ಟಿಕೊಂಡಿದೆ. ಈಗಾಗಲೇ ರಂಗನತಿಟ್ಟು ಪಕ್ಷಿಧಾಮವನ್ನು ವೆಟ್ ಲ್ಯಾಂಡ್ ಎಂದು ಘೋಷಣೆ ಮಾಡಲು ರಾಮ್ಸರ್ ಸಂಸ್ಥೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಅಲ್ಲದೆ, ರಾಮ್ಸರ್ ಸಂಸ್ಥೆಯ ಸೂಚನೆ ಮೇರೆಗೆ ಅರಣ್ಯ ಇಲಾಖೆಯಿಂದ ವೈಜ್ಞಾನಿಕ ಪಕ್ಷಿ ಗಣತಿ ಕಾರ್ಯ ಕೂಡ ಕಳೆದ ಕೆಲವು ದಿನಗಳ ಹಿಂದಷ್ಟೇ ನಡೆದಿತ್ತು.

ರಂಗನತಿಟ್ಟು ರಾಮ್ಸರ್ ಪಟ್ಟಿಗೆ ಸೇರ್ಪಡೆಯಾದರೆ ವಿಶೇಷ ಅನುದಾನ ಸಿಗಲಿದೆ. ಈ ಪ್ರದೇಶದ ಅಭಿವೃದ್ಧಿ ಹಾಗೂ ಸಂರಕ್ಷಣೆಗೆ ಈ ಅನುದಾನ ಸಹಕಾರಿಯಾಗಲಿದೆ. ಇನ್ನು ರಂಗನತಿಟ್ಟು ರಾಮ್ಸರ್ ಪಟ್ಟಿಗೆ ಸೇರ್ಪಡೆಯಾದರೆ ಅದು ರಾಜ್ಯದ ಮೊದಲ ರಾಮ್ಸರ್ ಪ್ರದೇಶ ಎಂದು ಕರೆಸಿಕೊಳ್ಳುತ್ತದೆ.











Click it and Unblock the Notifications