ಅಂಬಿಗೂ ಮಂಡ್ಯದ ಸರ್ ಎಂವಿ ಕ್ರೀಡಾಂಗಣಕ್ಕೂ ಎಂಥ ನಂಟು ಗೊತ್ತಾ?
Recommended Video
ಮಂಡ್ಯ, ನವೆಂಬರ್ 25 : ರೆಬೆಲ್ ಸ್ಟಾರ್ ಅಂಬರೀಶ್ ಪಾರ್ಥಿವ ಶರೀರ ಮಂಡ್ಯ ತಲುಪಿದೆ. ನಗರದ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಂಬರೀಶ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಅಮ್ದ ಹಾಗೆ ಸರ್ ಎಂ.ವಿ. ಕ್ರೀಡಾಂಗಣಕ್ಕೂ ಅಂಬಿಗೂ ಅವಿನಾಭಾವ ನಂಟಿದೆ. ಅಂಬರೀಶ್ ಅವರು 1996ರಲ್ಲಿ ಇದೇ ಕ್ರೀಡಾಂಗಣದಲ್ಲೇ ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ್ದರು. ಆ ಬಳಿಕ 2002ರಲ್ಲಿ ಅಂಬರೀಶ್ ಅವರು ತಮ್ಮ 50ನೇ ಜನ್ಮ ದಿನ ಕಾರ್ಯಕ್ರಮವನ್ನು ಇದೇ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು.
LIVE: ಮಂಡ್ಯಕ್ಕೆ ತಲುಪಿದ 'ಮಂಡ್ಯದ ಗಂಡು' ಅಂಬರೀಶ್ ಪಾರ್ಥಿವ ಶರೀರ
2016ರಲ್ಲಿ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ಇದೇ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮ ಮಾಡಿದ್ದರು. ಈ ವೇಳೆ ಅವರು ಬಹುತೇಕ ಸ್ಯಾಂಡಲ್ವುಡ್ ನಟರನ್ನು ಕಾರ್ಯಕ್ರಮಕ್ಕೆ ಕರೆಸಿ, ಅಂದು ತಾವು ಸಹ ಕುಣಿದು ಕುಪ್ಪಳಿಸಿ ಅಭಿಮಾನಿಗಳನ್ನು ರಂಜಿಸಿದ್ದರು.
ಇದೀಗ ಅವರ ಪಾರ್ಥಿವ ಶರೀರದ ಅಂತಿಮ ದರ್ಶನದ ವ್ಯವಸ್ಥೆಯನ್ನೂ ಇದೇ ಕ್ರೀಡಾಂಗಣದಲ್ಲಿ ಮಾಡಿರುವುದರಿಂದ ಹಿಂದಿನ ಘಟನೆಗಳೆಲ್ಲ ಮತ್ತೆ ನೆನಪಾಗುತ್ತಿದೆ.