ಲಕ್ಷ ರೂಪಾಯಿ ಪ್ರಶಸ್ತಿ ಹಣವನ್ನು 'ಕೆರೆಗೆ ಚೆಲ್ಲಲಿರುವ' ಮಂಡ್ಯದ ಕಾಮೇಗೌಡರು
ಮಂಡ್ಯ, ಡಿಸೆಂಬರ್ 19: ಹದಿನಾಲ್ಕು ಕೆರೆಗಳನ್ನು ಕಟ್ಟಿದ ಮಂಡ್ಯದ ಕಾಮೇಗೌಡರಿಗೆ ಇತ್ತೀಚೆಗಷ್ಟೆ ಕುಮಾರಸ್ವಾಮಿ ಅವರು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಶಸ್ತಿ ಪಡೆದ ನಂತರ ಕಾಮೇಗೌಡರು ಸುಮ್ಮನೇ ಕೂತಿಲ್ಲ, ಕೆರೆ ಕಟ್ಟುವ ಕಾಯಕ ಹಾಗೆಯೇ ಮುಂದುವರೆಸಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ ಜೊತೆಗೆ ನೀಡಿದ ಒಂದು ಲಕ್ಷ ರೂಪಾಯಿ ಹಣ ಹಾಗೂ 25 ಗ್ರಾಂ ಚಿನ್ನವನ್ನು 15ನೇ ಕೆರೆ ಕಟ್ಟಲು ವಿನಿಯೋಗಿಸುತ್ತಿದ್ದಾರೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು ದಾಸನದೊಡ್ಡಿಯ 80 ರ ಆಸು-ಪಾಸಿನ ಕಾಮೇಗೌಡರು.
ಸಂಪಾದಿಸಿದ ಅಲ್ಪ ಸ್ವಲ್ಪ ಹಣದಲ್ಲಿಯೇ 14 ಕೆರೆ ಕಟ್ಟಿರುವ ಕಾಮೇಗೌಡರಿಗೆ ಸರ್ಕಾರ ಕೊಟ್ಟಿರುವ 1 ಲಕ್ಷ ಹಣ ಹೆಚ್ಚಿನ ಉತ್ಸಾಹ ತುಂಬಿದೆ. ಈ ಹಣದಿಂದ ಅವರು ಈಗ ಕಟ್ಟಿರುವ ಕೆರೆಗಳನ್ನು ಅಗಲ ಮಾಡುತ್ತಾರಂತೆ ಹಾಗೂ 15ನೇ ಕೆರೆಯನ್ನು ಕಟ್ಟುತ್ತಾರಂತೆ.

ಜನವರಿಯಲ್ಲಿ ಕೆರೆ ಕಟ್ಟುವ ಕಾರ್ಯ
15ನೇ ಕೆರೆ ಕಟ್ಟುವ ಕಾರ್ಯ ಜನವರಿಯಲ್ಲಿ ಪ್ರಾರಂಭವಾಗುತ್ತದೆ ಎಂದಿದ್ದಾರೆ ಕಾಮೇಗೌಡರು. ಹೀಗೆ ಬಂದ ಹಣ ಖರ್ಚು ಮಾಡಿದರೆ ಕುಟುಂಬದವರು ಬೈಯುವುದಿಲ್ಲವೇ ಎಂದರೆ, '14 ಕೆರೆ ಕಟ್ಟಿದಾಗಲೂ ಬೈದಿದ್ದರು, ಈಗಲೂ ಬೈತಾರೆ ಅಷ್ಟೆ' ಎನ್ನುತ್ತಾರೆ ಅವರು.

'ಸತ್ತ ಮೇಲೆ ಮಲಗುತ್ತೀನಿ'
ವಯಸ್ಸು ಹೆಚ್ಚಾಯ್ತು ವಿಶ್ರಾಂತಿ ಏನು ಬೇಡ್ವೇನು? ಅಂದರೆ 'ಸತ್ತಮೇಲೆ ಮಲಗ್ತೀನಿ, ಈಗ ಕೆರೆ ಕಟ್ಟೋ ಕೆಲ್ಸ ಬಾಕಿ ಇದೆ ಎನ್ನುತ್ತಾರೆ ಕಾಮೇಗೌಡರು. ವಯಸ್ಸು 80 ದಾಟಿರುವ ಅವರಿಗೆ ಕೆರೆ ಕಟ್ಟುವುದು, ಅದರ ಕುಶಲೋಪರಿ ನೋಡಿಕೊಳ್ಳುವುದೇ ಧ್ಯಾನ, ವ್ಯಾಯಾಮ ಎಲ್ಲವೂ.

40 ವರ್ಷಗಳಿಂದ ಕೆರೆ ಕಟ್ಟುವ ಕಾರ್ಯ
40 ವರ್ಷಗಳಿಂದಲೂ ಕಾಮೇಗೌಡರು ಕೆರೆ ಕಟ್ಟುವ ಕಾಯಕ ಮಾಡುತ್ತಿದ್ದಾರೆ ಈವರೆಗೆ 14 ಕೆರೆಗಳನ್ನು ಕಟ್ಟಿದ್ದಾರೆ. ಸರ್ಕಾರಿ ಜಾಗಗಳನ್ನು ಕೆರೆಕಟ್ಟಲು ಬಳಸಿದ್ದಾರೆ. ಕೆರೆ ಕಟ್ಟಲು ಖರ್ಚು ಮಾಡಿರುವ ಹಣ ಸ್ವಂತದ್ದು. ಅವರು ಕಟ್ಟಿದ ಕೆರೆ ಹಲವು ಹಳ್ಳಿಗಳನ್ನು ಹಸಿರಾಗಿಸಿವೆ. ಸಾವಿರಾರು, ಪ್ರಾಣಿ-ಪಕ್ಷಿಗಳು ನೀರು ಕುಡಿಯುತ್ತಿವೆ.

ಓದುಗರ ಅಭುತಪೂರ್ವ ಪ್ರತಿಕ್ರಿಯೆ
ಕಾಮೇಗೌಡರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾದಾಗ 'ಒನ್ಇಂಡಿಯಾ ಕನ್ನಡ'ವು 'ಊರ ಮಂದಿಯಿಂದ ಹುಚ್ಚ ಎನಿಸಿಕೊಂಡಿದ್ದ ಕಾಮೇಗೌಡರಿಗೆ ರಾಜ್ಯೋತ್ಸವ ಪ್ರಶಸ್ತಿ' ತಲೆ ಬರಹದಡಿ ಸುದ್ದಿ ಪ್ರಕಟಿಸಿತ್ತು. ಸಹೃದಯ ಓದುಗರು ಭಾರಿ ಸಂಖ್ಯೆಯಲ್ಲಿ ಆ ಸುದ್ದಿಯನ್ನು ಓದಿದ್ದರು. ಮತ್ತು ಅಭೂತಪೂರ್ವ ಪ್ರತಿಕ್ರಿಯೆಯೂ ಸುದ್ದಿಗೆ ವ್ಯಕ್ತವಾಗಿತ್ತು. ಇದಕ್ಕೆ ಕಾಮೇಗೌಡರ ನಿಶ್ಕಲ್ಮಶ ಸೇವೆ ಕಾರಣ.












Click it and Unblock the Notifications