ಮಗನನ್ನು ಪಿಎಸ್ಐ ಮಾಡುವ ಆಸೆ: 38 ಲಕ್ಷ ಕಳೆದುಕೊಂಡ ಮಂಡ್ಯದ ರೈತ
ಮಂಡ್ಯ, ಜೂ25: ತನ್ನ ಮಗನಿಗೆ ಪಿಎಸ್ಐ ಕೆಲಸ ಕೊಡಿಸೋ ಆಸೆಗೆ ಬಿದ್ದ ರೈತರೊಬ್ಬರು 38 ಲಕ್ಷ ರೂ. ಕಳೆದುಕೊಂಡು ಕಣ್ಣೀರು ಹಾಕುಕ್ತಿರುವ ಘಟನೆ ಮಂಡ್ಯದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಶ್ರೀರಂಗಪಟ್ಟಣ ತಾಲೂಕು ಗಾಮನಹಳ್ಳಿ ನಿವಾಸಿ ನಿಂಗರಾಜು ಮೋಸ ಹೋದ ರೈತ. ತನಗೆ ವಂಚನೆ ಮಾಡಿದ ಕೋಲಾರ ಮೂಲದ ಜೆ.ಅಕ್ಷಯ್ ಅಲಿಯಾಸ್ ಮಂಜುನಾಥ್ ಎಂಬುವರ ವಿರುದ್ಧ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿ, ತಮಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ. ಜತೆಗೆ, ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದಾರೆ.
ನಿಂಗರಾಜು ಮಗ ಅರುಣ್ಕುಮಾರ್ ಕಳೆದ ಬಾರಿ ಪಿಎಸ್ಐ ಪರೀಕ್ಷೆ ಬರೆದಿದ್ದನು. ಆ ವೇಳೆ ತಮಗೆ ಪರಿಚಯದ ಬಿಜೆಪಿ ಮುಖಂಡರೊಬ್ಬರ ಮೂಲಕ ವಂಚಕ ಮಂಜುನಾಥ್ ಪರಿಚಯವಾಗಿದ್ದನು. ಭೇಟಿ ವೇಳೆ ತಾನು ಸಿ.ಎಂ.ಬಸವರಾಜ ಬೊಮ್ಮಾಯಿ, ಬಿ.ವೈ.ವಿಜಯೇಂದ್ರ ಆಪ್ತ ಎಂದು ಹೇಳಿಕೊಂಡಿದ್ದನು. 40 ಲಕ್ಷ ರೂ. ಕೊಟ್ಟರೆ ನಿಮ್ಮ ಮಗನಿಗೆ ಪಿಎಸ್ಐ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದನು ಎಂದು ನಿಂಗರಾಜು ದೂರಿನಲ್ಲಿ ತಿಳಿಸಿದ್ದಾರೆ.
38 ಲಕ್ಷ ರೂ. ಕೊಡುವುದಾಗಿ ಸಮ್ಮತಿಸಿ 30.25 ಲಕ್ಷ ರೂ.ಗಳನ್ನು ನೀಡಿದ್ದಾರೆ. ಇದರಲ್ಲಿ 18 ಲಕ್ಷ ರೂ.ಗಳನ್ನು ಆರ್ಟಿಜಿಎಸ್ ಮೂಲಕ ಹಾಗೂ ಉಳಿದ ಹಣವನ್ನು ನಗದು ರೂಪದಲ್ಲಿ ನೀಡಲಾಗಿದೆ. ದೂರು ನೀಡಿದರೂ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಕುಟುಂಬ ಕಣ್ಣೀರಿಡುತ್ತಿದೆ. ಬೆಂಗಳೂರಿನ ಬ್ಯಾಟರಾಯನಪುರ ಠಾಣೆ ಹಾಗೂ ಮಂಡ್ಯ ಎಎಸ್ಪಿಗೆ ನಿಂಗರಾಜು ದೂರು ನೀಡಿದ್ದು, ಎಫ್ಐಆರ್ ದಾಖಲು ಮಾಡದೇ ಮಂಜುನಾಥ್ ಕರೆಸಿ, ಮಾತನಾಡುವುದಾಗಿ ಪೊಲೀಸರು ಹೇಳುತ್ತಿದ್ದಾರೆ ಎಂದು ನಿಂಗರಾಜು ಅಳಲು ತೋಡಿಕೊಂಡಿದ್ದಾರೆ.

ಅಕ್ಷಯ್ ಸಬೂಬು ಹೇಳುತ್ತಿದ್ದಾರೆ
ಮಗ ಪೊಲೀಸ್ ಆಗುವ ಆಸೆಯಿಂದ ಬಡ್ಡಿಗೆ ಸಾಲ ಮಾಡಿ, ಜತೆಗೆ ಒಂದೂವರೆ ಎಕರೆ ಜಮೀನು ಮಾರಿ ಹಣ ನೀಡಿದ್ದೇನೆ. ಆದರೆ, ಆಯ್ಕೆ ಪಟ್ಟಿಯಲ್ಲಿ ಮಗನ ಹೆಸರೇ ಇರಲಿಲ್ಲ. ಆಗ ಹಣವನ್ನು ವಾಪಸ್ ನೀಡುವಂತೆ ಕೇಳಿದಾಗ ವಂಚಕ ಅಕ್ಷಯ್ ಸಬೂಬು ಹೇಳುತ್ತಿದ್ದಾರೆ. ಇತ್ತ ಮಗನಿಗೆ ಕೆಲಸವೂ ಇಲ್ಲ, ಅಲ್ಲ ಹಣ ಮತ್ತು ಆಸ್ತಿಯೂ ಇಲ್ಲ. ಸಾಲದ ಹಣಕ್ಕೆ ಬಡ್ಡಿ ಕಟ್ಟಲಾಗುತ್ತಿಲ್ಲ. ನನ್ನ ಹಾಗೂ ನನ್ನ ಮಗನ ಭವಿಷ್ಯವನ್ನು ಹಾಳು ಮಾಡಿದ ಅಕ್ಷಯ್ ವಿರುದ್ಧ ಕಾನೂನು ಕ್ರಮ ಕೈಗೊಂಡು ನಾನು ನೀಡಿರುವ ಹಣವನ್ನು ವಾಪಸ್ ಕೊಡಿಸಬೇಕೆಂದು ಮನವಿ ಮಾಡಿದ್ದಾರೆ.

ದೂರು ಬಂದಿದೆ
"ಪಿಎಸ್ಐ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದಿರುವ ಬಗ್ಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. ಪಿಎಸ್ಐ ನೇಮಕಾತಿ ಹಗರಣದ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿರುವುದರಿಂದ ಈ ವಿಚಾರವನ್ನು ಸಿಐಡಿ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಅವರ ನಿರ್ದೇಶನದಂತೆ ಸಿಐಡಿಗೆ ರೈತರ ದೂರನ್ನು ವರ್ಗಾಯಿಸಲಾಗುವುದು," ಎಂದು ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷ ಎನ್.ಯತೀಶ್ ತಿಳಿಸಿದ್ದಾರೆ.

ಲಕ್ಷ ಲಕ್ಷ ವಸೂಲಿ ಮಾಡಿ ವಂಚಿಸಿದ ಕಿರಾತಕನ ಬಂಧನ
ಪೊಲೀಸ್ ಸಬ್ ಇನ್ಸಪೆಕ್ಟರ್ ಹುದ್ದೆಯ ನೇಮಕಾತಿಯಲ್ಲೂ ಅಕ್ರಮದ ವಾಸನೆ ಆಗಿದೆಯಾ ಎಂಬ ಅನುಮಾನ ಮೂಡಿಸುತ್ತಿದೆ. ಪಿಎಸ್ಐ ಹುದ್ದೆ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿದ ಆರೋಪದ ಮೇರೆಗೆ ನವೀನ್ ಧಳಬಂಜನ್ ಎಂಬ ವ್ಯಕ್ತಿಯನ್ನು ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿ ಮೂಲದ ನವೀನ್ ಧಳಬಂಜನ್, ಪಿಎಸ್ಐ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ್ದಾನೆ ಎಂಬ ಕಾರಣಕ್ಕೆ ಬಾಗೇಪಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಹಲವರ ಬಂಧನ
ರಾಜ್ಯದಲ್ಲಿ ಪಿಎಸ್ ಐ ಹುದ್ದೆಗಳ ಪರೀಕ್ಷೆ ಅಕ್ರಮ ಮತ್ತು ನೇಮಕಾತಿ ಪ್ರಕರಣವು ಬಯಲಿಗೆ ಬಂದ ಮೇಲೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕಾರಣಿಗಳ ಸಮೇತ ಹಲವರ ಬಂಧನ ಆಗಿದ್ದು ತನಿಖೆ ಮುಂದುವರಿದಿದೆ.












Click it and Unblock the Notifications