ಗಣೇಶ ಮೂರ್ತಿ ಪೊಲೀಸ್ ವಾಹನದಲ್ಲಿ: ಕಾಂಗ್ರೆಸ್ ಸರ್ಕಾರ ಹೆಚ್ಚು ದಿನ ಉಳಿಯಲ್ಲ ಎಂದ ಭಕ್ತರು
ನಾಗಮಂಗಲ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಗಲಭೆ ಪ್ರಕರಣದಲ್ಲಿ ಹಿಂದೂಗಳನ್ನು ಬಂಧಿಸಿರುವುದು ಒಂದು ಕಡೆಯಾದರೆ, ಮೆರವಣಿಗೆ ಮಾಡುತ್ತಿದ್ದ ಗಣೇಶನ ಮೂರ್ತಿಯನ್ನು ಕೂಡ ಪೊಲೀಸ್ ವಾಹನದಲ್ಲಿ ಇಟ್ಟಿದ್ದ ಫೋಟೊಗಳು ಇದೀಗ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ಕರ್ನಾಟಕ ಸರ್ಕಾರದ ವಿರುದ್ಧ ಜನ ಸಿಟ್ಟಿಗೆದ್ದಿದ್ದಾರೆ.
ನಾಗಮಂಗಲದಲ್ಲಿ ವಿನಾಯಕ ಮೆರವಣಿಗೆ ಮೇಲೆ ದಾಳಿಯನ್ನು ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುವ ವೇಳೆ, ಪೊಲೀಸರು ಪ್ರತಿಭಟನಾಕಾರರ ಬಳಿಯಿದ್ದ ಗಣೇಶನನ್ನು ವಶಕ್ಕೆ ಪಡೆದು ವ್ಯಾನ್ನಲ್ಲಿ ಇಟ್ಟುಕೊಂಡಿದ್ದಾರೆ, ಬಳಿಕ ಅದನ್ನು ಭಕ್ತರು ದ್ವಿಚಕ್ರ ವಾಹನದಲ್ಲಿ ಕೊಂಡೊಯ್ದಿದ್ದಾರೆ. ಆದರೆ ವಿಸರ್ಜನೆಗೆ ತೆಗೆದುಕೊಂಡು ಹೋಗುತ್ತಿದ್ದ ಗಣೇಶನ ಮೂರ್ತಿಯನ್ನು ಹೀಗೆ ಪೊಲೀಸ್ ವಾಹನದಲ್ಲಿ ಇಟ್ಟಿರುವುದು ಭಕ್ತರ ಮನಸ್ಸಿಗೆ ಘಾಸಿಯಾಗಿದೆ. ಇದೇ ಕಾರಣಕ್ಕೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಕೆಲವು ಭಕ್ತರಂತು ಇದು ಕಾಂಗ್ರೆಸ್ ಸರ್ಕಾರದ ಅಃಧಪತನದ ಮುನ್ಸೂಚನೆ ಎಂದಿದ್ದಾರೆ. ಹಿಂದೂ ದೇವರಿಗೆ ಅವಮಾನ ಮಾಡುವ ಈ ಸರ್ಕಾರ ಹೆಚ್ಚು ದಿನ ಇರುವುದಿಲ್ಲ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಹಜ ಸ್ಥಿತಿಯತ್ತ ನಾಗಮಂಗಲ
ಗಣೇಶ ಮೆರವಣಿಗೆ ಸಮಯದಲ್ಲಿ ಉಂಟಾಗಿದ್ದ ಕೋಮು ಗಲಭೆಯಿಂದಾಗಿ ಪ್ರಕ್ಷುಬ್ದಗೊಂಡಿದ್ದ ನಾಗಮಂಗಲ ಪಟ್ಟಣ ಈಗ ಸಹಜ ಸ್ಥಿತಿಗೆ ಮರಳಿದ್ದು, ನಗರದಲ್ಲಿ ಶಾಂತಿಯುತ ವಾತಾವರಣವಿದೆ. ಪಟ್ಟಣದಲ್ಲಿ ಪೊಲೀಸರು ನಗರದಲ್ಲಿ ಬಿಗಿ ಭದ್ರತೆ ಮುಂದುವರೆಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ಶುಕ್ರವಾರ ಬೆಳಿಗ್ಗೆ ಎಂದಿನಂತೆ ಹಾಲು, ತರಕಾರಿ, ಔಷಧಿ ಸೇರಿದಂತೆ ಇನ್ನಿತರೆ ಅಂಗಡಿ ಮುಂಗಟ್ಟುಗಳು ತೆರೆದು ವ್ಯಾಪಾರ ವಹಿವಾಟು ನಡೆಸಿದರೆ, ಬಹುತೇಕ ದಿನಸಿ ಮತ್ತು ಬಟ್ಟೆ ಅಂಗಡಿಗಳು ಶುಕ್ರವಾರವೂ ಮುಚ್ಚಿದ್ದವು. ಪಟ್ಟಣ ವ್ಯಾಪ್ತಿಯಲ್ಲಿ 144 ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಶುಕ್ರವಾರ ವಾರದ ಸಂತೆ ಕೂಡ ನಡೆಯಲಿಲ್ಲ. ಸಂತೆ ಬೀದಿಯಲ್ಲಿ ಬೆರಳೆಣಿಕೆಯಷ್ಟು ತರಕಾರಿ ಮಾರಾಟ ಹೊರತುಪಡಿಸಿ ಬೇರ್ಯಾವುದೇ ವ್ಯಾಪಾರ ವಹಿವಾಟು ನಡೆಯಲಿಲ್ಲ.
ಬುಧವಾರ ರಾತ್ರಿ ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಪಟ್ಟಣ ವ್ಯಾಪ್ತಿಯ ಕೆಲ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಸೆಸ್ಕಾಂ ಸಿಬ್ಬಂದಿಗಳು ಶುಕ್ರವಾರ ಬೆಳಿಗ್ಗೆಯಿಂದ ಸಂಜೆವರೆಗೂ ಹೆದ್ದಾರಿ ಬದಿಯಲ್ಲಿರುವ ವಿದ್ಯುತ್ ಕಂಬಗಳಲ್ಲಿ ಸುಟ್ಟುಹೋಗಿದ್ದ ಕೇಬಲ್ ಬದಲಿಸಿ ಈ ಮಾರ್ಗದಲ್ಲಿ ವಿದ್ಯುತ್ ಪೂರೈಕೆ ಮಾಡಿದರು.
ಮುಸ್ಲೀಂ ಸಮುದಾಯ ಹೆಚ್ಚಾಗಿರುವ ಪಟ್ಟಣದ ಮಂಡ್ಯ ರಸ್ತೆ ಹಾಗೂ ಮೈಸೂರು ರಸ್ತೆಯಲ್ಲಿ ಯಾವೊಂದು ಅಂಗಡಿಗಳೂ ತೆರೆದಿರಲಿಲ್ಲ. ಇದರಿಂದಾಗಿ ಇರಡೂ ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.
ಶುಕ್ರವಾರ ಬೆಳಿಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪಟ್ಟಣಕ್ಕೆ ಭೇಟಿ ಕೊಟ್ಟು ಗಲಭೆಯಿಂದ ಹಾನಿಗೊಳಗಾಗಿರುವ ಅಂಗಡಿ ಮುಂಗಟ್ಟುಗಳನ್ನು ಪರಿಶೀಲಿಸಿ ಸಂತ್ರಸ್ಥರಿಗೆ ಸಾಂತ್ವನ ಹೇಳಿದರು.












Click it and Unblock the Notifications