ಭಾರತದ ಜತೆಗೆ ನೇರ ಯುದ್ಧ ಮಾಡಲು ಪಾಕಿಸ್ತಾನಕ್ಕೆ ಆಗಲ್ಲ: ಕರಂದ್ಲಾಜೆ
ಮಂಡ್ಯ, ಫೆಬ್ರವರಿ 16: ಪಾಕಿಸ್ತಾನಕ್ಕೆ ಭಾರತದೊಂದಿಗೆ ನೇರವಾಗಿ ಯುದ್ಧ ಮಾಡಲು ಆಗಲ್ಲ. ಹೀಗಾಗಿ ಭಯೋತ್ಪಾದಕರಿಗೆ ಹಣ ಕೊಟ್ಟು ಈ ರೀತಿ ಕೃತ್ಯ ಮಾಡುತ್ತಿದೆ. ಇದೀಗ ಪಾಕಿಸ್ತಾನಕ್ಕೆ ನೇರವಾಗಿ ಉತ್ತರ ಕೊಡುವ ಕಾಲ ಸನಿಹವಾಗಿದೆ. ಸರ್ಜಿಕಲ್ ಸ್ಟ್ರೈಕ್ ಮೂಲಕ ಮತ್ತೆ ತಕ್ಕ ಪಾಠ ಕಲಿಸುತ್ತೇವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಶನಿವಾರ ಹೇಳಿದ್ದಾರೆ.
ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರ ಕುಟುಂಬಕ್ಕೆ ಸರಕಾರ ನೆರವಾಗಬೇಕು. ಪಾಕಿಸ್ತಾನವನ್ನು ಮಟ್ಟ ಹಾಕುವ ಶಕ್ತಿ ಭಾರತಕ್ಕಿದೆ. ಪ್ರಪಂಚದ ಎಲ್ಲ ದೇಶಗಳು ಭಾರತಕ್ಕೆ ಶಕ್ತಿ ತುಂಬಬೇಕು. ಆಗ ಮಾತ್ರ ಭಯೋತ್ಪಾದನೆಗೆ ಕಡಿವಾಣ ಹಾಕುವುದಕ್ಕೆ ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮಾತನಾಡಿ, ಇದು ಅತ್ಯಂತ ದುಃಖದ ಕ್ಷಣ. ಭಯೋತ್ಪಾದನಾ ಚಟುವಟಿಕೆಯಿಂದಾಗಿದೆ ನಮ್ಮ ದೇಶದ ಹಲವು ಯೋಧರ ದುರ್ಮರಣ, ಹಲವರು ಗಂಭೀರ ಗಾಯಗೊಂಡಿದ್ದಾರೆ. ಯೋಧರ ಆತ್ಮಕ್ಕೆ ಶಾಂತಿ ಸಿಗುವ ರೀತಿಯಲ್ಲಿ ಪ್ರಧಾನಿಯವರು ಗಂಭೀರ ಚಿಂತನೆ ಮಾಡಿದ್ದಾರೆ ಎಂದಿದ್ದಾರೆ.
ಪ್ರಧಾನಿ ನಿಲುವು ದೇಶದ ಎಲ್ಲರ ನಿಲುವು. ನಾವೆಲ್ಲರೂ ಅವರ ಜೊತೆ ಇರ್ತೀವಿ. ಬಡ ಕುಟುಂಬದಿಂದ ಬಂದವರು ಗುರು. ದೇಶ ಪ್ರೇಮದ ಬಗ್ಗೆ ಅನಕ್ಷರಸ್ಥರಾಗಿರುವ ಗುರು ಕುಟುಂಬದವರಿಂದ ಕಲಿಯಬೇಕು. ಅವರ ಕುಟುಂಬಕ್ಕೆ ನೆರವಾಗುವ ಹೆಜ್ಜೆಯನ್ನು ಪ್ರಧಾನಿ ಇಟ್ಟಿದ್ದಾರೆ. ಇದು ಇಡೀ ದೇಶದ ಸವಾಲು. ಆ ಸವಾಲನ್ನು ಸ್ವೀಕಾರ ಮಾಡುತ್ತೇವೆ. ನಾವೆಲ್ಲರೂ ಗುರು ಹೆಸರಲ್ಲಿ ಪ್ರತಿಜ್ಞೆ ಸ್ವೀಕಾರ ಮಾಡಬೇಕಿದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications