Get Updates
Get notified of breaking news, exclusive insights, and must-see stories!

Mandya Rain: ಆಲಿಕಲ್ಲು ಮಳೆಗೆ ನೆಲ ಕಚ್ಚಿದ ಭತ್ತ-ಕಬ್ಬು; ನಷ್ಟದ ಭೀತಿಯಲ್ಲಿ ರೈತ

ಸೋಮವಾರ ರಾತ್ರಿ ಬಿದ್ದ ಆಲಿಕಲ್ಲು ಮಳೆಗೆ ಮಂಡ್ಯ ತಾಲೂಕಿನ ಗೋಪಾಲಪುರ ಮತ್ತು ಸಾತನೂರಿನಲ್ಲಿ ಕಬ್ಬು ಮತ್ತು ಭತ್ತದ ಬೆಳೆಗೆ ತೀವ್ರ ಹಾನಿ ಸಂಭವಿಸಿದೆ. ಮಳೆಯ ಹೊಡೆತಕ್ಕೆ ಭತ್ತದ ತೆನೆ ಉದುರಿಹೋಗಿದ್ದರೆ, ಕಬ್ಬಿನ ಸುಳಿ ಮುರಿದುಕೊಂಡಿದೆ. ಇದರಿಂದ ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ.

ಬರಗಾಲದ ನಡುವೆಯೂ ಗೋಪಾಲಪುರ ಗ್ರಾಮದ ರೈತರು ಸುಮಾರು 30 ರಿಂದ 40 ಎಕರೆ ಪ್ರದೇಶದಲ್ಲಿ ಕೆರೆಯಲ್ಲಿದ್ದ ಅಲ್ಪಸ್ವಲ್ಪ ನೀರನ್ನು ಬಳಸಿಕೊಂಡು ಭತ್ತದ ಬೆಳೆ ಬೆಳೆದಿದ್ದರು. ಇನ್ನೂ ಹಲವು ರೈತರು ಕಬ್ಬು ಬೆಳೆದಿದ್ದರು. ಕೆರೆಯಿಂದ ಪೈಪ್‌ಲೈನ್ ಸಂಪರ್ಕ ಆಳವಡಿಸಿಕೊಂಡು ನೀರು ಹಾಯಿಸಿಕೊಂಡು ಬೆಳೆ ರಕ್ಷಣೆ ಮಾಡಿದ್ದರು.

Paddy and Sugarcane Crop Damaged by Hailstorms in Mandya

ನಿರೀಕ್ಷೆಯಂತೆ ಭತ್ತದ ಬೆಳೆ ಕೊಯ್ಲಿನ ಹಂತ ತಲುಪಿತ್ತು. ಕೊಯ್ಲಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿಕೊಂಡಿದ್ದರು. ಬರಗಾಲದ ನಡುವೆಯೂ ಬೆಳೆಯನ್ನು ಮನೆಗೆ ಕೊಂಡೊಯ್ಯುವುದಕ್ಕೆ ರೈತರು ಉತ್ಸುಕರಾಗಿದ್ದರು.

ಈ ಮಧ್ಯೆ ದಿಢೀರನೆ ಬಿದ್ದ ಆಲಿಕಲ್ಲು ಮಳೆ ರೈತರ ನಿರೀಕ್ಷೆಯನ್ನೆಲ್ಲಾ ಹುಸಿಗೊಳಿಸಿತು. ಆರು ತಿಂಗಳ ಕಾಲ ಶ್ರಮಪಟ್ಟು ಬೆಳೆದ ಬೆಳೆಯನ್ನು ಅರ್ಧ ಗಂಟೆ ಕಾಲ ಸುರಿದ ಆಲಿಕಲ್ಲು ಮಳೆ ತೀವ್ರವಾಗಿ ಹಾನಿ ಮಾಡಿತು. ಆಲಿಕಲ್ಲು ಮಳೆಯ ಹೊಡೆತಕ್ಕೆ ಭತ್ತದ ತೆನೆ ಗದ್ದೆಯಲ್ಲೇ ಉದುರಿಹೋಗಿವೆ. ಮತ್ತೆ ಕೆಲವು ಭತ್ತದ ತೆನೆಗಳು ನೆಲಕಚ್ಚಿವೆ. ಕೆಲವರು ಭತ್ತವನ್ನು ಕೊಯ್ಲು ಮಾಡಿ ಗದ್ದೆಯಲ್ಲೇ ಒಣಗಿಹಾಕಿದ್ದರು. ಅದೂ ಕೂಡ ಮಳೆಯ ಹೊಡೆತಕ್ಕೆ ಸಿಕ್ಕಿದೆ. ಇದರಿಂದ ಮಳೆಯಿಲ್ಲದೆ ಹಲವು ರೈತರು ಜಮೀನಿನಲ್ಲಿ ಬೆಳೆ ಬೆಳೆಯದೆ ಖಾಲಿ ಬಿಟ್ಟಿದ್ದರೆ, ಇನ್ನೂ ಹಲವು ರೈತರು ಕೆರೆಯ ನೀರನ್ನೇ ಬಳಸಿಕೊಂಡು ಭತ್ತ ಬೆಳೆದರೂ ಕೈಗೆ ಸೇರಿಸಿಕೊಳ್ಳಲಾಗದೆ ನಷ್ಟ ಅನುಭವಿಸಿದ್ದಾರೆ.

ಕಬ್ಬು ಬೆಳೆದವರ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಆಲಿಕಲ್ಲು ಮಳೆಯ ಹೊಡೆತ ತಿಂದ ಕಬ್ಬಿನ ಸುಳಿಗಳು ಮುರಿದುಹೋಗಿವೆ. ಗರಿಗಳು ಸೀಳುಬಿಟ್ಟಿವೆ. ಕಬ್ಬಿನ ಸುಳಿ ಹಾಳಾಗಿರುವುದರಿಂದ ತೀವ್ರ ಬೆಳೆನಷ್ಟ ಉಂಟಾಗಿದೆ. ರೈತರು ಹಗಲು-ರಾತ್ರಿ ಎನ್ನದೆ ನೀರು ಹರಿಸಿ ಬೆಳೆಯನ್ನು ಕಾಪಾಡಿಕೊಂಡು ಬಂದಿದ್ದರು. ಆ ಬೆಳೆಯನ್ನು ಉಳಿಸಿಕೊಳ್ಳಲಾಗಲಿಲ್ಲವೆಂಬ ಸಂಕಟ ಅವರನ್ನು ತೀವ್ರವಾಗಿ ಬಾಧಿಸುತ್ತಿದೆ.

ಸಾತನೂರಿನಲ್ಲೂ ನೂರಾರು ಎಕರೆ ಕಬ್ಬು ಹಾನಿ

ಸೋಮವಾರ ರಾತ್ರಿ ಸುರಿದ ಅಕಾಲಿಕ ಆಲಿಕಲ್ಲು ಮಳೆ, ಬಿರುಗಾಳಿಯಿಂದಾಗಿ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ಬೆಳೆಗಳು ಹಾನಿಗೊಳಗಾಗಿವೆ. ತಾಲೂಕಿನ ಸಾತನೂರು ಗ್ರಾಮದ ಹಾನಿಯಾದ ಪ್ರದೇಶಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಳೆ ಕೊರತೆ ಹಿನ್ನೆಲೆಯಲ್ಲಿ ಕೊಳವೆ ಬಾವಿ ಆಶ್ರಯಿಸಿಕೊಂಡು ರೈತರು ಕಬ್ಬಿನ ಬೆಳೆ ಬೆಳೆದಿದ್ದರು. ಬೆಳೆಯೂ ಉತ್ತಮವಾಗಿ ಬಂದಿದ್ದರಿಂದ ಖುಷಿಯಾಗಿದ್ದರು. ವಿದ್ಯುತ್ ಕೊರತೆ ನಡುವೆಯೂ ವಿದ್ಯುತ್ ಬಂದಾಗ ಗದ್ದೆಗೆ ನೀರು ಹಾಯಿಸಿಕೊಂಡು ಬೆಳೆಯನ್ನು ಕಾಪಾಡಿಕೊಂಡು ಬಂದಿದ್ದರು. ಕೆಲವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೊಳವೆ ಬಾವಿ ಕೊರೆಸಿ ಕಬ್ಬು ಬೆಳೆಗೆ ನೀರು ಕೊಟ್ಟಿದ್ದರು. ಆಲಿಕಲ್ಲು ಮಳೆಯಿಂದಾಗಿ ಕಬ್ಬಿನ ಸುಳಿಗೆ ಹೊಡೆತ ಬಿದ್ದು, ಸುಳಿ ಸಹಿತ ಗರಿಗಳಿಗೂ ಹಾನಿಯಾಗಿದೆ. ಇದರಿಂದ ಬೆಳೆನಷ್ಟಕ್ಕೊಳಗಾದ ರೈತರು ದಿಕ್ಕೆಟ್ಟು ಕುಳಿತಿದ್ದಾರೆ.

ಸಾತನೂರು ಗ್ರಾಮಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಶಿವಕುಮಾರ್ ಬಿರಾದಾರ್, ಕಂದಾಯಾಧಿಕಾರಿ ಮನೋಹರ್, ಗ್ರಾಮ ಲೆಕ್ಕಿಗೆ ಲಿಖಿತಾ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಬೆಳೆ ಹಾನಿ ಬಗ್ಗೆ ಮಾಹಿತಿ ಪಡೆದುಕೊಂಡರು. ಗಾಳಿ ಮತ್ತು ಮಳೆಗೆ ಕಬ್ಬು ಬೆಳೆ ನೆಲಕಚ್ಚಿದೆ. ಅದೇ ರೀತಿ ಕಬ್ಬಿನ ಗರಿ ಮತ್ತು ಸುಳಿ ನಾಶವಾಗಿದೆ. ಆದ್ದರಿಂದ ರೈತರು ಸೂಕ್ತ ದಾಖಲೆಗಳನ್ನೂ ನೀಡಬೇಕು, ಕೃಷಿ ಇಲಾಖೆ ಮತ್ತು ತಾಲೂಕು ಆಡಳಿತ ಜಂಟಿಯಾಗಿ ತನಿಖೆ ಮಾಡಿ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+