ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ: ಮಂಡ್ಯ ಶಾಸಕರ ಸಭೆ ಕರೆದ ಕುಮಾರಸ್ವಾಮಿ
Recommended Video

ಮಂಡ್ಯ, ಮಾರ್ಚ್ 07: ಕುಮಾರಸ್ವಾಮಿ ಅವರು ತಮ್ಮ ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಮಂಡ್ಯದಿಂದ ಕಣಕ್ಕೆ ಇಳಿಸುವುದು ಬಹುತೇಕ ಖಚಿತವಾಗಿದೆ.
ಮಂಡ್ಯದಿಂದ ನಿಖಿಲ್ ಅವರನ್ನು ಕಣಕ್ಕಿಳಿಸುತ್ತಿರುವ ಕಾರಣ ಕುಮಾರಸ್ವಾಮಿ ಅವರು ಇಂದು ಮಂಡ್ಯದ ಶಾಸಕರು ಸಚಿವರೊಂದಿಗೆ ಸಭೆ ಕರೆದಿದ್ದಾರೆ. ನಗರದ ಖಾಸಗಿ ಹೊಟೆಲ್ನಲ್ಲಿ ಸಭೆ ನಡೆಯಲಿದೆ.
ಕ್ಷೇತ್ರದ ಜನರ ಭಾವನೆ ಏನಿದೆ, ಕಾರ್ಯಕರ್ತರ ಅನಿಸಿಕೆ ಏನಿದೆ? ಸುಮಲತಾ ಅವರನ್ನು ಹೇಗೆ ಕಟ್ಟಿಹಾಕಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಕುಮಾರಸ್ವಾಮಿ ಚರ್ಚೆ ನಡೆಸಲಿದ್ದಾರೆ. ಸುಮಲತಾ ಅವರ ಸ್ಪರ್ಧೆಯ ವಿಷಯ ಬಹುಮುಖ್ಯವಾಗಿರಲಿದೆ.
ಕ್ಷೇತ್ರದ ಕಾಂಗ್ರೆಸ್ ಪ್ರಮುಖ ಮುಖಂಡರನ್ನು ಗುರುತಿಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಬಗ್ಗೆಯೂ ಕುಮಾರಸ್ವಾಮಿ ಚರ್ಚೆ ಮಾಡಲಿದ್ದಾರೆ. ಕಾಂಗ್ರೆಸ್ ಬೆಂಬಲದೊಂದಿಗೆ ನಿಖಿಲ್ ಸ್ಪರ್ಧಿಸುತ್ತಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರ ಬೆಂಬಲ ದೊರಕಿದರೆ ಜಯ ಸುಲಭ ಎಂಬುದು ಕುಮಾರಸ್ವಾಮಿ ಲೆಕ್ಕಾಚಾರ.

ಪ್ರಚಾರ ಕಾರ್ಯದ ಬಗ್ಗೆ ಚರ್ಚೆ
ಪ್ರಚಾರದ ಬಗ್ಗೆ ಸೇರಿದಂತೆ ಇನ್ನೂ ಹಲವು ವಿಚಾರಗಳ ಬಗ್ಗೆ ಕುಮಾರಸ್ವಾಮಿ ಅವರು ಇಂದು ಮಂಡ್ಯದ ಶಾಸಕರೊಂದಿಗೆ ಮಾತನಾಡಲಿದ್ದಾರೆ. ಕಾಂಗ್ರೆಸ್ನ ಕೆಲವು ಸ್ಥಳೀಯ ಮುಖಂಡರು ಸುಮಲತಾ ಅವರಿಗೆ ಬೆಂಬಲ ನೀಡಲಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆಯೂ ಚರ್ಚೆ ನಡೆಯಲಿದೆ.

ಮಂಡ್ಯದಲ್ಲಿ ಆರು ಜೆಡಿಎಸ್ ಶಾಸಕರು
ಮಂಡ್ಯದಲ್ಲಿ ಆರು ಜನ ಜೆಡಿಎಸ್ ಶಾಸಕರೇ ಇದ್ದಾರೆ. ಅವರಲ್ಲಿ ಇಬ್ಬರನ್ನು ಸಚಿವರನ್ನಾಗಿಸಲಾಗಿದೆ. ಮಂಡ್ಯಕ್ಕೆ ಕುಮಾರಸ್ವಾಮಿ ಹಲವು ಯೋಜನೆಗಳನ್ನು ನೀಡಿದ್ದು, ಭಾರಿ ಮೊತ್ತದ ಅನುದಾನವನ್ನೂ ನೀಡಿದ್ದಾರೆ. ಇದೆಲ್ಲದರ ಹಿಂದೆ ಮಗನ ರಾಜಕೀಯ ಭವಿಷ್ಯದ ಯೋಜನೆ ಇದೆ ಎಂಬುದು ಸರ್ವವಿಹಿತ.

ಸುಮಲತಾ ಅಂಬರೀಶ್ ಅಡ್ಡಗಾಲು
ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರು ಕಾಂಗ್ರೆಸ್ ಟಿಕೆಟ್ನಿಂದ ಸ್ಪರ್ಧಿಸುವ ಉಮೇದು ವ್ಯಕ್ತಪಡಿಸಿದ್ದರು. ಆದರೆ ಜೆಡಿಎಸ್ ಅದಕ್ಕೆ ಅವಕಾಶ ನೀಡಿಲ್ಲ. ಸುಮಲತಾ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಸಾಧ್ಯವಿಲ್ಲವೆಂದು ಪಕ್ಷದ ಮುಖಂಡರು ಹೇಳಿದ್ದು, ಈಗ ಅವರು ಪಕ್ಷೇತರವಾಗಿ ಸ್ಪರ್ಧಿಸುವ ಯೋಚನೆಯಲ್ಲಿದ್ದಾರೆ. ಇವರು ನಿಖಿಲ್ಗೆ ಪ್ರಬಲ ಎದುರಾಳಿ ಆಗುವ ಸಾಧ್ಯತೆ ಇದೆ.

ಮಗನ ಗೆಲ್ಲಿಸಲು ಎಚ್ಡಿಕೆ ಪಟ್ಟು
ಮಗನನ್ನು ಗೆಲ್ಲಿಯೇ ತೀರಲು ಕುಮಾರಸ್ವಾಮಿ ಅವರು ಪಣತೊಟ್ಟಿದ್ದು ಈ ಬಗ್ಗೆ ಅದಕ್ಕಾಗಿ ಹಲವು ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಸುಮಲತಾ ಅಂಬರೀಶ್ ಅವರು ನಿಖಿಲ್ ದಾರಿಗೆ ಅಡ್ಡಗಾಲಾಗಿದ್ದು, ಅದೇ ಕುಮಾರಸ್ವಾಮಿ ಅವರಿಗೆ ಬಹುದೊಡ್ಡ ಚಿಂತೆಯಾಗಿದೆ.












Click it and Unblock the Notifications