ಅಂಬಿಗೆ ಚುಂಚಶ್ರೀ ಪ್ರಶಸ್ತಿ ನೀಡಿದರೆ ಮಠಕ್ಕೆ ಮುತ್ತಿಗೆ ಹಾಕ್ತೀವಿ
ಮಂಡ್ಯ, ಸೆಪ್ಟೆಂಬರ್ 23: ಶುಕ್ರವಾರದ ವಿಶೇಷ ಅಧಿವೇಶನಕ್ಕೆ ಗೈರು ಹಾಜರಾದ ಅಂಬರೀಶ್ ವಿರುದ್ಧ ಮಂಡ್ಯದಲ್ಲಿ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಬರೀಶ್ ಗೆ ಚುಂಚಶ್ರೀ ಪ್ರಶಸ್ತಿ ನೀಡುವ ನಿರ್ಧಾರವನ್ನು ವಾಪಸ್ ಪಡೆಯಬೇಕು. ಯಾರಾದರೂ ಬಡವರಿಗೆ ಈ ಪ್ರಶಸ್ತಿ ನೀಡಬೇಕು ಎಂದು ಆಗ್ರಹಿಸಿದರು.
ಕಾವೇರಿ ಹೋರಾಟದಲ್ಲೂ ಅಂಬರೀಶ್ ಭಾಗಿಯಾಗಲಿಲ್ಲ. ವಿಶೇಷ ಅಧಿವೇಶನಕ್ಕೂ ಗೈರಾಗಿದ್ದಾರೆ. ಅವರಿಗೇ ಪ್ರಶಸ್ತಿ ನೀಡುವುದಾದರೆ ಮಠಕ್ಕೆ ಮುತ್ತಿಗೆ ಹಾಕ್ತೀವಿ ಎಂದು ಚಳವಳಿಯಲ್ಲಿ ಭಾಗವಹಿಸಿದವರು ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯು ಸ್ವಾಮೀಜಿಯನ್ನು ಸಂಪರ್ಕಿಸಿ ನಿರ್ಧಾರ ಬದಲಿಸಲು ಮನವಿ ಮಾಡಲಿದೆ.
ಇನ್ನು ಸಂಸದ ಪ್ರತಾಪ ಸಿಂಹ ಅವರನ್ನು ಕೆಲ ಹೋರಾಟಗಾರರು ತರಾಟೆಗೆ ತೆಗೆದುಕೊಂಡರು. ಪ್ರಧಾನಿ ಮಂತ್ರಿ ಕಾವೇರಿ ವಿಚಾರವಾಗಿ ತುಟಿ ಬಿಚ್ಚುತ್ತಿಲ್ಲ. ಇಂಥ ಸನ್ನಿವೇಶದಲ್ಲೂ ಬಿಜೆಪಿಯ ಯಾವುದೇ ಸಂಸದರು ಅಥವಾ ಶಾಸಕರು ಯಾಕೆ ರಾಜೀನಾಮೆ ನೀಡ್ತಿಲ್ಲ ಎಂದು ಪ್ರಶ್ನಿಸಿದರು.
ಸರ್ವಪಕ್ಷಗಳ ಸಭೆಗೆ ಗೈರು ಹಾಜರಾಗಿದ್ದಕ್ಕೆ ತರಾಟೆಗೆ ತೆಗೆದುಕೊಂಡರು. ಈ ವೇಳೆ ಮಾತನಾಡಿದ ಪ್ರತಾಪ ಸಿಂಹ, ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಕೇಂದ್ರ ಸರಕಾರ ಹಾಗೂ ಬಿಜೆಪಿ ರಾಜ್ಯ ಮುಖಂಡರ ಬೆಂಬಲವಿದೆ ಎಂದರು.