ಮಂಡ್ಯ ಮುಡಾ 5 ಕೋಟಿ ವಂಚನೆ ಪ್ರಕರಣ: ಕೆಬ್ಬಳ್ಳಿ ಆನಂದ್ ಸೇರಿ 5 ಮಂದಿಗೆ 7 ವರ್ಷ ಸಜೆ, 5 ಕೋಟಿ ರೂ ದಂಡ
ಮಂಡ್ಯ, ಸೆಪ್ಟೆಂಬರ್ 9 : ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ 5 ಕೋಟಿ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಕೆಬ್ಬಳ್ಳಿ ಆನಂದ್ ಸೇರಿದಂತೆ ಐದು ಮಂದಿಗೆ ತಲಾ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಸಿಪಿಐ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ಕೆಬ್ಬಹಳ್ಳಿ ಆನಂದ್, ನಾಗಲಿಂಗಸ್ವಾಮಿ, ಹೆಮ್ಮನಹಳ್ಳಿ ಚಂದ್ರಶೇಖರ್, ಮುಡಾದ ಪ್ರಥಮ ದರ್ಜೆ ಸಹಾಯಕ ಎಚ್.ಕೆ. ನಾಗರಾಜು, ಕೆ.ಬಿ. ಹರ್ಷ ಎಂಬುವರೇ ಶಿಕ್ಷೆಗೊಳಗಾದ ಆಪಾದಿತರು.
ಅಬಕಾರಿ ಹಗರಣ: ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಆರೋಪಿ ನಂಬರ್ 1 ಯಾಕೆ?
ಏನಿದು ಗೋಲ್ ಮಾಲ್?
ವಿವೇಕಾನಂದ ನಗರದ ಒಳಚರಂಡಿ ಕಾಮಗಾರಿಗಾಗಿ ಮೂಡಾಗೆ ಬಂದಿದ್ದ 5 ಕೋಟಿ ರೂ. ಹಣವನ್ನು ಅಲಹಾಬಾದ್ ಬ್ಯಾಂಕ್ನಲ್ಲಿ ಠೇವಣಿ ಇಡಲಾಗಿತ್ತು. ಈ ಹಣವನ್ನು ತಮ್ಮ ಬ್ಯಾಂಕ್ನಲ್ಲಿ ಇಡುವಂತೆ ಇಂಡಿಯನ್ ಬ್ಯಾಂಕ್ನವರು ಮುಡಾಗೆ ಮನವಿ ಮಾಡಿ ಪತ್ರ ಬರೆದಿದ್ದರು.
ಮನವಿ ಪುರಸ್ಕರಿಸಿದ ಮೂಡಾ ಅಲಹಾಬಾದ್ ಬ್ಯಾಂಕ್ನಲ್ಲಿದ್ದ ಹಣವನ್ನು ಫೆಬ್ರವರಿ ತಿಂಗಳಿನಲ್ಲಿ ಇಂಡಿಯನ್ ಬ್ಯಾಂಕ್ಗೆ ಐದು ಚೆಕ್ಗಳ ಮೂಲಕ ವರ್ಗಾಯಿಸಿತ್ತು. ಖಾತೆ ನಮೂದಿಸುವ ಸ್ಥಳವನ್ನು ಖಾಲಿ ಬಿಟ್ಟು ಆಯುಕ್ತ ಶಿವರಾಮು ಅವರು ಚೆಕ್ಗಳನ್ನು ನೀಡಿದ್ದು, ಅದಕ್ಕೆ ಕಾಂಗ್ರೆಸ್ ಮುಖಂಡ ಕೆಬ್ಬಳ್ಳಿ ಆನಂದ್, ಪ್ಯೂಚರ್ ವೆಲ್ ಫಾರ್ಮ್ ಆಂಡ್ ಎಸ್ಟೇಟ್ ಪ್ರೈ.ಲಿ.ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗಲಿಂಗಸ್ವಾಮಿ ಅವರುಗಳು ತಮ್ಮ ಖಾತೆಗಳ ಸಂಖ್ಯೆ ನಮೂದಿಸಿ ಜಮಾ ಮಾಡಿಕೊಂಡಿದ್ದರು.
ಬೆಂಗಳೂರು-ಮೈಸೂರು ಹೆದ್ದಾರಿಗೆ ಕೊಳ್ಳೆ ಹೊಡೆದ ಹಣದಲ್ಲಿ ಪ್ರತಾಪ್ ಸಿಂಹಗೂ ಪಾಲು: ಮಂಜುನಾಥ್ ಆರೋಪ
ಈ ಹಣಕ್ಕೆ ಇಂಡಿಯನ್ ಬ್ಯಾಂಕ್ನಲ್ಲಿ ಠೇವಣಿ ಇಟ್ಟಂತೆ ನಕಲಿ ಬಾಂಡ್ಗಳನ್ನು ಸೃಷ್ಟಿಸಿದ್ದರು. ಕೆಲವು ತಿಂಗಳುಗಳ ನಂತರ ಕಾಮಗಾರಿಗಾಗಿ ಠೇವಣಿ ಹಣ ಪಡೆಯುವಂತೆ ಜಿಲ್ಲಾಧಿಕಾರಿಗಳು ಮುಡಾ ಆಯುಕ್ತರಿಗೆ ಸೂಚಿಸಿದಾಗ ಹಣ ಗೋಲ್ಮಾಲ್ ಆಗಿರುವ ಬಗ್ಗೆ ಶಿವರಾಮು ಬ್ಯಾಂಕ್ನ ಹಿಂದಿನ ಮ್ಯಾನೆಜರ್ ರಾಮಸ್ವಾಮಿ ಹಾಗೂ ಹಾಲಿ ಮ್ಯಾನೇಜರ್ ಕುಮಾರ್ ನಾಯಕ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ತನಿಖೆ ಕೈಗೊಂಡ ನಂತರ ಪ್ರಕರಣದಲ್ಲಿ ಬ್ಯಾಂಕ್ ಅಧಿಕಾರಿಗಳಿಗಿಂತ ಆಯುಕ್ತ ಶಿವರಾಮು ಕೈವಾಡವಿರುವುದು ಸ್ಪಷ್ಟವಾಗತೊಡಗಿತು. ಆದರೆ, ಹಣ ಹಂಚಿಕೆಯಲ್ಲಿ ಕಾಂಗ್ರೆಸ್ ಮುಖಂಡ ಕೆಬ್ಬಳ್ಳಿ ಆನಂದ್ಗೆ ಸಿಂಹಪಾಲು ಸಿಕ್ಕಿದೆ. ಅವ್ಯವಹಾರದ ಪ್ರಮುಖ ಆರೋಪಿ ಕಾಂಗ್ರೆಸ್ ಮುಖಂಡ ಕೆಬ್ಬಳ್ಳಿ ಆನಂದ್ 2.3 ಕೋಟಿ ರೂ. ಹಣ ಡ್ರಾ ಮಾಡಿಕೊಂಡಿದ್ದರೆ, ನಾಗಲಿಂಗಸ್ವಾಮಿ 1.45 ಕೋಟಿ ರೂ., ಆಯುಕ್ತ ಶಿವರಾಮು 10 ಲಕ್ಷ ರೂ., ಗುತ್ತಿಗೆದಾರ ಚಂದ್ರಶೇಖರ್ 15 ರಿಂದ 25 ಲಕ್ಷ ರೂ. ಹಣ ಪಡೆದುಕೊಂಡಿರುವುದು ತನಿಖೆಯಿಂದ ತಿಳಿದುಬಂದಿತ್ತು.
ಇನ್ನು ಹಗರಣಕ್ಕೆ ಸಂಬಂಧಿಸಿದಂತೆ ಕೆಬ್ಬಹಳ್ಳಿ ಆನಂದ್ ಸೇರಿ ಒಟ್ಟು 11 ಮಂದಿ ವಿರುದ್ಧ 2013ರ ಜುಲೈ 5ರಂದು ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರಕಾರ ಸಿಬಿಐ ತನಿಖೆಗೆ ಒಪ್ಪಿಸಿತ್ತು.
ಸಿಬಿಐ ವಿಚಾರಣೆ ವೇಳೆ 6 ಜನರನ್ನು ಕೈಬಿಟ್ಟು 5 ಮಂದಿಯ ವಿರುದ್ಧ ಅಂದಿನ ಸಿಬಿಐ ಡಿವೈಎಸ್ಪಿ ಕೆ.ವೈ. ಗುರುಪ್ರಸಾದ್ ನೇತೃತ್ವದ ತಂಡ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪಿಗಳ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಐದು ಮಂದಿ ಅಪರಾಧಿಗಳಿಗೆ ತಲಾ 7 ವರ್ಷ ಜೈಲು ಶಿಕ್ಷೆ, ತಲಾ ಒಂದೊಂದು ಕೋಟಿಯಂತೆ ಐದು ಕೋಟಿ ದಂಡ ವಿಧಿಸಿ ತೀರ್ಪು ನೀಡಿದೆ.