Get Updates
Get notified of breaking news, exclusive insights, and must-see stories!

ನಾಗಮಂಗಲ ತಾಲೂಕು ಕಚೇರಿಯಲ್ಲಿ 3 ಕೋಟಿ ರೂಪಾಯಿಗೂ ಅಧಿಕ ಹಣ ದುರುಪಯೋಗ: ಲೋಕಾಯುಕ್ತರಿಗೆ ದೂರು

ನಾಗಮಂಗಲ ತಾಲೂಕು ಕಚೇರಿಯಲ್ಲಿ ಕೋವಿಡ್‌ ಪರಿಹಾರ ವಿತರಣೆಯಲ್ಲಿ ಭಾರಿ ಅಕ್ರಮ ನಡೆದಿದೆ. ಹಾಗಾದರೆ ಅಧಿಕಾರಿಗಳು ಲಪಟಾಯಿಸಿದ ಹಣ ಎಷ್ಟು ಅನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ.

ಮಂಡ್ಯ, ಫೆಬ್ರವರಿ, 08: ನಾಗಮಂಗಲ ತಾಲೂಕು ಕಚೇರಿಯಲ್ಲಿ ಪ್ರಕೃತಿ ವಿಕೋಪ ಪರಿಹಾರ ಹಾಗೂ ಕೋವಿಡ್‌ಗೆ ಸಂಬಂಧಿಸಿದಂತೆ 3 ಕೋಟಿ ರೂಪಾಯಿಗೂ ಅಧಿಕ ಹಣ ದುರುಪಯೋಗವಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಹಿಂದಿನ ತಹಶೀಲ್ದಾರ್ ಎನ್.ಎ.ಕುಂಞ ಅಹಮದ್ ಮತ್ತು ಅಮಾನತುಗೊಂಡಿರುವ ದ್ವಿತೀಯ ದರ್ಜೆ ಸಹಾಯಕಿ ಎಸ್.ಎಂ.ಉಮಾ ವಿರುದ್ಧ ಸಮಗ್ರ ತನಿಖೆಗೆ ಆಗ್ರಹಿಸಿ ಆರ್‌ಟಿಐ ಕಾರ್ಯರ್ತ ಕೆ.ಆರ್.ರವೀಂದ್ರ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.

ಸರ್ಕಾರದ ಹಣವನ್ನು ಕಬಳಿಸಬೇಕೆಂಬ ಉದ್ದೇಶದಿಂದ ಇವರಿಬ್ಬರೂ ಖಾಸಗಿ ವ್ಯಕ್ತಿಗಳ ಜೊತೆ ಶಾಮಿಲಾಗಿದ್ದಾರೆ ಎಂದು ಆರೋಪಿಸಲಾಗಿದೆ. ಹಾಗೂ ನಿಯಮಾವಳಿ ಮತ್ತು ಕಾಯ್ದೆಗಳನ್ನು ಧಿಕ್ಕರಿಸಿ ಸರ್ಕಾರಕ್ಕೆ ಹಾಗೂ ಸಾರ್ವಜನಿಕರಿಗೆ ವಂಚನೆ ಮಾಡಿದ್ದಾರೆ ಎಂದು ದಾಖಲೆಗಳ ಸಹಿತ ದೂರು ನೀಡಿದ್ದಾರೆ.

1. ಕೋವಿಡ್ ಲಸಿಕಾ ಮೇಳಕ್ಕೆ ವಾಹನಗಳನ್ನು ನಿಯೋಜಿಸಿರುವುದಾಗಿ ಡಿ.ದೇವರಾಜು ಹೆಸರಿನ ಬ್ಯಾಂಕ್ ಆಫ್ ಬರೋಡಾ ಖಾತೆಗೆ 5,08,200 ರೂಪಾಯಿಗಳನ್ನು ಚೆಕ್ ಮೂಲಕ ಪಾವತಿಸಿದೆ. ಕೋವಿಡ್ ಲಸಿಕೆ ಸಂಬಂಧ ಬಾಡಿಗೆ ಕರಾರು ವಾಹನಕ್ಕೆ 5.40 ಲಕ್ಷ ರೂಪಾಯಿಗಳನ್ನು ಡ್ರಾ ಮಾಡಲಾಗಿದೆ. ಕೋವಿಡ್ ಲಸಿಕಾ ಮೇಳಕ್ಕೆ ವಾಹನಗಳನ್ನು ಬಳಸಿಕೊಂಡಿರುವುದಾಗಿ ಎನ್.ಪಿ. ಮಹೇಶ ಹೆಸರಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾಸಗಿ ಖಾತೆಗೆ 3.16 ಲಕ್ಷ ರೂಪಾಯಿ ಹಣವನ್ನು ಚೆಕ್ ಮೂಲಕ ಪಾವತಿಸಲಾಗಿದೆ. ವಾಹನಗಳ ಬಾಡಿಗೆ ಹೆಸರಿನಲ್ಲಿ 1.80 ಲಕ್ಷ ರೂಪಾಯಿ ನೀಡಲಾಗಿದೆ. ಈ ಎಲ್ಲಾ ಚೆಕ್‌ಗಳಿಗೆ ತಹಶೀಲ್ದಾರ್ ಒಬ್ಬರೇ ಸಹಿ ಮಾಡಿದ್ದು, ವಿಷಯ ನಿರ್ವಾಹಕರು, ಶಾಖಾ ಮುಖ್ಯಸ್ಥರು ಸಹಿ ಮಾಡಿಲ್ಲ. ದಿನಾಂಕವನ್ನೂ ನಮೂದಿಸಿಲ್ಲ.

 ಸಹಿ ಮಾಡಿ ಚೆಕ್‌ಗಳನ್ನ ಪಡೆಯಬೇಕು

ಸಹಿ ಮಾಡಿ ಚೆಕ್‌ಗಳನ್ನ ಪಡೆಯಬೇಕು

2. ನಾಗಮಂಗಲ ತಾಲೂಕಿನಿಂದ ಮಳೆ ಹಾನಿಯಿಂದ 105 ಫಲಾನುಭವಿಗಳಿಗೆ 80,62,069ರೂಪಾಯಿ ಪರಿಹಾರ ವಿತರಿಸಲಾಗಿದೆ. ರಾಜೀವ್‌ ಗಾಂಧಿ ಹೌಸಿಂಗ್ ಕಾರ್ಪೋರೇಷನ್ ಲಿಮಿಟೆಡ್ ಡೇಟಾ ಎಂಟ್ರಿ ಮಾಡದಿರುವುದು ನಿಯಮಬಾಹೀರವಾಗಿದೆ. ಫಲಾನುಭವಿಗಳು ಚೆಕ್ ವಿತರಣಾ ವಹಿವಾಟಿಯಲ್ಲಿ ಸಹಿ ಮಾಡಿ ಚೆಕ್‌ಗಳನ್ನು ಪಡೆಯಬೇಕು. ಆದರೆ, ಇಲ್ಲಿ ಬೇರೆ ಬೇರೆ ವ್ಯಕ್ತಿಗಳು ಸಹಿ ಮಾಡಿ ಚೆಕ್‌ಗಳನ್ನು ಪಡೆದಿರುವುದು ಕಂಡುಬಂದಿದೆ.

 ವ್ಯಾಪಕ ಅಕ್ರಮ ನಡೆದಿದೆಯಾ?

ವ್ಯಾಪಕ ಅಕ್ರಮ ನಡೆದಿದೆಯಾ?

ಹಲವಾರು ಫಲಾನುಭವಿಗಳ ಹೆಸರಿನಲ್ಲಿ ಒಬ್ಬರೇ ಸಹಿ ಮಾಡಿ ಚೆಕ್‌ಗಳನ್ನು ಪಡೆದಿದ್ದಾರೆ. ಫಲಾನುಭವಿಗಳ ಹೆಸರು ಇರುವ ಪಟ್ಟಿಯಲ್ಲಿ ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯ ಕಂದಾಯ ಲೆಕ್ಕ ಪರಿಶೋಧಕರು 28 ಫೆಬ್ರವರಿ 2022ರಂದು 2020-21ನೇ ಸಾಲಿನ ಚೆಕ್ ವಿತರಣಾ ಪುಸ್ತಕ ಮತ್ತು ನಗದು ಪುಸ್ತಕವನ್ನು ಪರಿಶೀಲನೆಗೆ ಹಾಜರುಪಡಿಸಿಲ್ಲವೆಂದು ಬರೆದಿದ್ದಾರೆ. ಇದು ವ್ಯಾಪಕ ಅಕ್ರಮ ನಡೆದಿರುವುದಕ್ಕೆ ಸಾಕ್ಷಿಯಾಗಿದೆ.

 ಅಕ್ರಮ ಎಸಗಿರುವ ಸಾಧ್ಯತೆಗಳಿವೆ

ಅಕ್ರಮ ಎಸಗಿರುವ ಸಾಧ್ಯತೆಗಳಿವೆ

3. ಕೆಲವು ಫಲಾನುಭವಿಗಳಿಗೆ ವಿತರಿಸಿರುವ ಪರಿಹಾರದ ಪಟ್ಟಿಯಲ್ಲಿ ಎಂಎಲ್‌ಎ ಎಂದು ಬರೆಯಲಾಗಿದೆ. ದಿನಾಂಕ ಹಾಗೂ ಚೆಕ್ ನಂಬರ್‌ಗಳನ್ನು ನಮೂದಿಸಿಲ್ಲ. ಹಾಗಾಗಿ ಪರಿಹಾರ ವಿತರಣೆಯಲ್ಲಿ ಶಾಸಕ ಕೆ. ಸುರೇಶ್‌ಗೌಡರು ಪ್ರಭಾವ ಬೀರಿರುವ ಮತ್ತು ಅಕ್ರಮ ಎಸಗಿರುವ ಸಾಧ್ಯತೆಗಳಿವೆ. ಅಲ್ಲದೆ, ಪರಿಹಾರ ಹಣವನ್ನು ಆರ್‌ಟಿಜಿಎಸ್ ಮೂಲಕ ಫಲಾನುಭವಿಗಳ ಖಾತೆಗೆ ನೀಡದೆ ಚೆಕ್ ಮೂಲಕ ವಿತರಿಸಿರುವುದರ ಹಿಂದೆ ಕಮಿಷನ್ ದಂಧೆ ನಡೆದಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

 ವರ್ಗಾವಣೆ ನಂತರವೂ ಚೆಕ್‌ಗೆ ಸಹಿ

ವರ್ಗಾವಣೆ ನಂತರವೂ ಚೆಕ್‌ಗೆ ಸಹಿ

4. ತಹಶೀಲ್ದಾರ್ ಕುಂಞ ಅಹಮದ್ ಅವರಿಗೆ ನಾಗಮಂಗಲದಿಂದ 28 ಫೆಬ್ರವರಿ 2022ರಂದು ವರ್ಗಾವಣೆ ಆದೇಶವಾಗಿತ್ತು. ಅದರ ನಂತರವೂ ಮಾರ್ಚ್ 7, 2022ರಂದು ಚೆಕ್‌ಗಳಿಗೆ ಸಹಿ ಮಾಡಿದ್ದಾರೆ. ಆದರೂ ಕರ್ತವ್ಯದಿಂದ ಬಿಡುಗಡೆಯಾಗಿದ್ದಾರೆ. ನಾಗಮಂಗಲ ತಹಶೀಲ್ದಾರ್ ಹೆಸರಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆಯನ್ನು ಹೊಂದಿದ್ದು, ಈ ಖಾತೆಗೆ ಬಂದ ಹಣ ಹಾಗೂ ಖಾಸಗಿ ವ್ಯಕ್ತಿಗಳಿಗೆ ಹಣ ಸಂದಾಯವಾಗಿರುವ ಬಗ್ಗೆ ಸಂಪೂರ್ಣ ತನಿಖೆಯಾಗಬೇಕಿದೆ. ಫೆಬ್ರವರಿ 16, 2022ರಂದು ಜಿಲ್ಲಾಧಿಕಾರಿ ಖಾತೆಯಿಂದ ತಹಶೀಲ್ದಾರ್ ಖಾತೆಗೆ 75 ಲಕ್ಷ ರೂಪಾಯಿ ಜಮಾ ಆಗಿದ್ದು, ಈ ಹಣ ವೆಚ್ಚ ಮಾಡಿರುವ ಬಗ್ಗೆಯೂ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

5. ಪ್ರಥಮ ದರ್ಜೆ ಸಹಾಯಕಿಯಾಗಿದ್ದ ಎಸ್.ಎಂ.ಉಮಾ ಗೈರು ಹಾಜರಿ ಬಗ್ಗೆ ತಹಶೀಲ್ದಾರ್ ನಂದೀಶ್ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದಾಗ ಆಕಸ್ಮಿಕವಾಗಿ ಮನೆಯಲ್ಲಿ ಕಾಲು ಜಾರಿ ಬಿದ್ದು ನನ್ನ ಬಲಗೈ ತೋಳು ಮುರಿದಿದೆ. ಆದ್ದರಿಂದ ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ತಿಳಿಸಿ ನಾಗರಾಜೇಗೌಡ ಮೆಮೋರಿಯಲ್ ಆಸ್ಪತ್ರೆ ವೈದ್ಯರು ಪ್ರಮಾಣಪತ್ರ ನೀಡಿದ್ದಾರೆ. ಉಮಾ ಅವರನ್ನು ಪರೀಕ್ಷಿಸಿ ಈ ವೈದ್ಯಕೀಯ ಪ್ರಮಾಣ ಪತ್ರವನ್ನು ದೃಢೀಕರಿಸುವಂತೆ ಜೂನ್ 31, 2022ರಂದು ಪತ್ರ ಬರೆದಿದ್ದರೂ ಉತ್ತರ ಬಂದಿಲ್ಲ.

 ಎಸ್.ಎಂ. ಉಮಾ ಅಮಾನತು ಆಗಿದ್ದೇಕೆ?

ಎಸ್.ಎಂ. ಉಮಾ ಅಮಾನತು ಆಗಿದ್ದೇಕೆ?

ಅಲ್ಲದೆ ಜೂನ್ 10, 2022ರಂದೇ ಎಸ್.ಎಂ. ಉಮಾ ಮೇಲಿನ ಆರೋಪಗಳನ್ನು ಪರಿಗಣಿಸಿ ಆಮಾನತುಗೊಳಿಸುವಂತೆ ತಹಶೀಲ್ದಾರ್‌ ಅವರು ಕೋರಿದ್ದು, ಜನವರಿ 7, 2023ರಂದು ಅಮಾನತುಗೊಳಿಸಲಾಗಿದೆ. ಇವೆಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಕೋವಿಡ್ ಮತ್ತು ಪ್ರಕೃತಿ ವಿಕೋಪ ಪರಿಹಾರಕ್ಕೆ ಸಂಬಂಧಿಸಿದಂತೆ ಬೋಗಸ್ ಬಿಲ್‌ಗಳನ್ನು ಸೃಷ್ಟಿಸಿ ಫಲಾನುಭವಿಗಳನ್ನು ಸೃಷ್ಟಿಸಿರುವ ಸಾಧ್ಯತೆಗಳಿವೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಹಶೀಲ್ದಾರ್ ಎನ್.ಎ.ಕುಂಞ ಅಹಮದ್ ಮತ್ತು ಅಮಾನತುಗೊಂಡಿರುವ ದ್ವಿತೀಯ ದರ್ಜೆ ಸಹಾಯಕಿ ಎಸ್.ಎಂ.ಉಮಾ ಹಾಗೂ ಇತರೆ ವ್ಯಕ್ತಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ, ವಂಚನೆ ಪ್ರಕರಣ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ.

ಕೋವಿಡ್ -19 ಮತ್ತು ಪ್ರಕೃತಿ ವಿಕೋಪ ಕುರಿತಂತೆ ಇಡೀ ರಾಜ್ಯಾದ್ಯಂತ ಅವ್ಯವಹಾರಗಳು ನಡೆದಿವೆ. ಕೆಲ ತಹಶೀಲ್ದಾರ್‌ ಇಂತಹ ಅವ್ಯವಹಾರಗಳಲ್ಲಿ ಪಾಲ್ಗೊಂಡು ಹಣ ಲೂಟಿ ಹೊಡೆಯುವ ಕೆಲಸವನ್ನು ಮಾಡಿದ್ದಾರೆನ್ನಲಾಗಿದೆ. ಈ ಪ್ರಕರಣ ರಾಜ್ಯಾದ್ಯಂತ ತನಿಖೆಯಾಗಬೇಕು. ಆಗ ಮಾತ್ರ ಸತ್ಯಾಂಶ ಹೊರಬರಲು ಸಾಧ್ಯ ಎಂದು ಮಂಡ್ಯ ಸಾಮಾಜಿಕ ಹೋರಾಟಗಾರ ಕೆ.ಆರ್. ರವೀಂದ್ರ ಒತ್ತಾಯಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+