ಬಿಕೋ ಎನ್ನುತ್ತಿರುವ ಮಂಡ್ಯದ ಪೇಟೆ ಬೀದಿ
ಮಂಡ್ಯ, ಮೇ 06: ನಂಜನಗೂಡಿನ ಜುಬಿಲಿಯೆಂಟ್ ಕಾರ್ಖಾನೆ ನೌಕರನಾಗಿರುವ ಪೇಟೆ ಬೀದಿಯ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಇಡೀ ಪ್ರದೇಶವನ್ನು ನಿರ್ಬಂಧಿತ ವಲಯವಾಗಿ ಘೋಷಣೆ ಮಾಡಿರುವುದರಿಂದ ನಗರದ ಪ್ರಮುಖ ವಾಣಿಜ್ಯ ಕೇಂದ್ರ ಎನಿಸಿರುವ ಪೇಟೆಬೀದಿ ವ್ಯಾಪಾರ-ವಹಿವಾಟು ಇಲ್ಲದೆ ಬಿಕೋ ಎನ್ನುತ್ತಿದೆ.
ನಿರ್ಬಂಧಿತ ವಲಯವಾದ ಪೇಟೆಬೀದಿಯಲ್ಲಿರುವ ಎಲ್ಲ್ಲ ಅಂಗಡಿಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಜನ ಹಾಗೂ ವಾಹನ ಸಂಚಾರಕ್ಕೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದ್ದು, ನಿಯಮಗಳನ್ನು ಚಾಚೂತಪ್ಪದೇ ಪಾಲಿಸುವಂತೆ ಭದ್ರತೆಯು ಉಸ್ತುವಾರಿ ಹೊತ್ತ ಪೊಲೀಸರು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಚಾಮರಾಜನಗರದಲ್ಲಿ ಪ್ರೊಬೆಷನರಿ ಪಿಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಟಿ.ಎಸ್.ದೀಕ್ಷಿತ್ ಅವರು ಒಂದು ವಾರದ ಹಿಂದೆಯಷ್ಟೇ ಸೆಂಟ್ರಲ್ ಪೊಲೀಸ್ ಠಾಣೆಯ ಪಿಎಸ್ ಐ ಆಗಿ ನಿಯೋಜನೆಗೊಂಡಿದ್ದರು. ಸೆಂಟ್ರಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಂಟೈನ್ ಮೆಂಟ್ ಝೋನ್ ಇರುವ ಕಾರಣ ಯಾವುದೇ ಅಧಿಕಾರಿಗಳು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದ ಸಂದರ್ಭದಲ್ಲಿ ಪಿಎಸ್ ಐ ಆಗಿ ನಿಯೋಜನೆಗೊಂಡ ದೀಕ್ಷಿತ್ ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆಂಬ ಮಾತುಗಳು ಸಾರ್ವಜನಿಕವಾಗಿ ಕೇಳಿಬರುತ್ತಿವೆ.

ಕಂಟೈನ್ ಮೆಂಟ್ ವಲಯದಲ್ಲಿರುವ ಪೇಟೆ ಬೀದಿಯಲ್ಲೇ ಸಗಟು ವ್ಯಾಪಾರ ಮಳಿಗೆಗಳಿವೆ. ಆ ವಲಯದಲ್ಲಿರುವ ಅಂಗಡಿಗಳೆಲ್ಲವೂ ಬಂದ್ ಆಗಿರುವುದರಿಂದ ನಗರ ಸೇರಿದಂತೆ ಗ್ರಾಮಾಂತರ ಪ್ರದೇಶಗಳಿಗೆ ದಿನಸಿ ಸೇರಿದಂತೆ ಇತರೆ ವಸ್ತುಗಳ ಸಾಗಾಣಿಕೆಯಾಗದೆ ತೊಂದರೆಯಾಗಿದೆ. ಆ ಹಿನ್ನೆಲೆಯಲ್ಲಿ ಇಲ್ಲಿನ ವರ್ತಕರು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಕಂಟೈನ್ ಮೆಂಟ್ ನಿಬಂಧನೆಗಳನ್ನು ಸಡಿಲಗೊಳಿಸಿ ಕೆಲ ಸಮಯವಾದರೂ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದರಾದರೂ, ಜಿಲ್ಲಾಡಳಿತ ಅದಕ್ಕೆ ಸಹಮತ ವ್ಯಕ್ತಪಡಿಸಿಲ್ಲ. ಈ ಹಿನ್ನಲೆಯಲ್ಲಿ ಕಂಟೈನ್ ಮೆಂಟ್ ನಿಬಂಧನೆಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.












Click it and Unblock the Notifications