ಮಂಡ್ಯದಲ್ಲಿ ನಿಖಿಲ್ಗೆ ಸೋಲು: ರಾಜ್ಯ ಸರ್ಕಾರಕ್ಕೆ ಮುಖಭಂಗ
ಮಂಡ್ಯ, ಮೇ 23: ತೀವ್ರ ಜಿದ್ದಾಜಿದ್ದಿನ ಕದನ ನಡೆದ ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಅಂಬರೀಷ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗದ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಷ್ ಅವರಿಗೆ ಬಿಜೆಪಿ ಬೆಂಬಲ ನೀಡಿತ್ತು. ಜತೆಗೆ ಕಾಂಗ್ರೆಸ್ನ ಅತೃಪ್ತ ಮುಖಂಡರು ತೆರೆಮರೆಯಲ್ಲಿ ಬೆಂಬಲ ನೀಡಿದ್ದರು. ಜೆಡಿಎಸ್ನ ಎಂಟು ಶಾಸಕರು, ಮೂರು ಸಚಿವರು ಮತ್ತು ಮೂವರು ವಿಧಾನಪರಿಷತ್ ಸದಸ್ಯರು ಇರುವ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವು ಸಾಧಿಸುತ್ತಾರೆ ಎಂದೇ ಭಾವಿಸಲಾಗಿತ್ತು. ಇದು ಮುಖ್ಯವಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು.
ನಿಖಿಲ್ ಕುಮಾರಸ್ವಾಮಿ ಮುನ್ನಡೆ ಸಾಧಿಸಿದ ಸಂದರ್ಭದಲ್ಲಿ ಜೆಡಿಎಸ್ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದ್ದರು. ಆದರೆ, ಕೆಲ ಹೊತ್ತಿನಲ್ಲಿಯೇ ಸುಮಲತಾ ಮೇಲುಗೈ ಸಾಧಿಸಿದರು. ಕೆಲವು ಸುತ್ತುಗಳ ಬಳಿಕ ಕೊನೆಯ ಹಂತದಲ್ಲಿ ಸುಮಲತಾ ಮುನ್ನಡೆ ಅಂತರ ಹೆಚ್ಚಿಸಿಕೊಳ್ಳತೊಡಗಿದರು. ಅಂತಿಮವಾಗಿ ಜಯಮಾಲೆ ಸುಮಲತಾ ಅವರಿಗೆ ಒಲಿದಿದೆ.
ಮಂಡ್ಯ ಲೋಕಸಭೆ ಕ್ಷೇತ್ರದ ಚುನಾವಣೆ ಇಡೀ ದೇಶದ ಗಮನ ಸೆಳೆದಿತ್ತು. ಬಿಜೆಪಿ ಇಲ್ಲಿ ಅಭ್ಯರ್ಥಿಯನ್ನು ಇಳಿಸದೆ ನೇರವಾಗಿ ಸುಮಲತಾ ಅವರಿಗೆ ಬೆಂಬಲ ಘೋಷಿಸಿತ್ತು. ಕಾಂಗ್ರೆಸ್ನ ಅತೃಪ್ತ ಮುಖಂಡರು ಕೂಡ ಸುಮಲತಾ ಅವರ ಪರ ಪ್ರಚಾರ ನಡೆಸಿದ್ದರು. ಜೆಡಿಎಸ್ನ ಕೆಲವು ಮುಖಂಡರು ಸಹ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಿದ್ದರು. ಸುಮಲತಾ ಅವರ ವಿರುದ್ಧ ನಡೆಸಿದ ವೈಯಕ್ತಿಕ ಮತ್ತು ಅವಹೇಳನಾಕಾರಿ ವಾಗ್ದಾಳಿಗಳು ನಿಖಿಲ್ ವಿರುದ್ಧ ಅಭಿಪ್ರಾಯ ಮೂಡಿಸಲು ಕಾರಣವಾಗಿದ್ದವು.
ಫಲಕೊಡದ ಎಚ್ಡಿಕೆ ತಂತ್ರ
ಜೆಡಿಎಸ್ನ ಎಲ್ಲ ನಿರೀಕ್ಷೆಗಳನ್ನು ಹುಸಿಗೊಳಿಸಿ ಸುಮಲತಾ ಅಂಬರೀಷ್ ಮಂಡ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಸುಮಾರು 76 ಸಾವಿರ ಮತಗಳ ಅಂತರದಿಂದ ಸುಮಲತಾ ಗೆಲುವು ಸಾಧಿಸಿರುವುದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸೋಲು ಎಂದೇ ಹೇಳಲಾಗುತ್ತಿದೆ. ತಮ್ಮ ಪ್ರತಿಷ್ಠೆಯನ್ನು ಪಣವಾಗಿಟ್ಟುಕೊಂಡು ಕುಮಾರಸ್ವಾಮಿ ಮಂಡ್ಯದಲ್ಲಿ ಪ್ರಚಾರ ನಡೆಸಿದ್ದರು. ಸುಮಲತಾ ಅವರದೇ ಹೆಸರಿನ ಮೂವರು ಮಹಿಳೆಯರನ್ನು ಸಹ ಕಣಕ್ಕಿಳಿಸಲಾಗಿತ್ತು. ಆದರೆ, ಯಾವ ತಂತ್ರವೂ ಇಲ್ಲಿ ಫಲಕೊಟ್ಟಿಲ್ಲ.
ಇತಿಹಾಸ ಸೃಷ್ಟಿಸಿದ ಸುಮಲತಾ
ಕರ್ನಾಟಕದ ಇತಿಹಾಸದಲ್ಲಿಯೇ 52 ವರ್ಷದಲ್ಲಿ ಇದೇ ಮೊದಲ ಬಾರಿಗೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ಮಹಿಳಾ ಅಭ್ಯರ್ಥಿಯೊಬ್ಬರು ಲೋಕಸಭೆಗೆ ಪ್ರವೇಶಿಸಿದ್ದಾರೆ. ಚುನಾವಣಾ ಬಹಿರಂಗ ಪ್ರಚಾರದ ಕೊನೆಯ ದಿನ ಸ್ವಾಭಿಮಾನಿ ಸಮಾವೇಶ ನಡೆಸಿದ್ದ ಸುಮಲತಾ ಅವರಿಗೆ ಸ್ವಾಭಿಮಾನದ ಗೆಲುವು ದೊರಕಿದೆ.
ಸುಮಲತಾ ಗೆಲ್ಲುತ್ತದೆ ಎಂದವರು
ಎಕ್ಸಿಟ್ ಪೋಲ್ ಸಮೀಕ್ಷೆಗಳಲ್ಲಿ ಕೆಲವು ಸಮೀಕ್ಷೆಗಳು ಸುಮಲತಾ ಪರವಾಗಿದ್ದರೆ, ಇನ್ನು ಕೆಲವು ನಿಖಿಲ್ ಕುಮಾರಸ್ವಾಮಿ ಪರವಾಗಿದ್ದವು. ನಿಖಿಲ್ ಗೆಲ್ಲುತ್ತಾರೆ ಎಂದು ಆರು ಮತ್ತು ಸುಮಲತಾ ಗೆಲುವಿನ ಕುರಿತು ನಾಲ್ಕು ಸಮೀಕ್ಷೆಗಳು ಭವಿಷ್ಯ ನುಡಿದಿದ್ದರು. ರಿಪಬ್ಲಿಕ್ ಟಿವಿ ಸಿ ವೋಟರ್, ಜನ್ ಕಿಬಾತ್, ಎಬಿಪಿ ನ್ಯೂಸ್ ನೀಲ್ಸನ್, ಇಂಡಿಯಾ ಟುಡೆ ಆಕ್ಸಿಸ್ ಮತ್ತು ಆಜ್ ತಕ್ ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಗಳು ಸುಮಲತಾ ಅವರಿಗೆ ಗೆಲುವು ಎಂದಿದ್ದವು.
ನಿಖಿಲ್ ಗೆಲುವು ಸುಳ್ಳಾಯಿತು
ರಾಷ್ಟ್ರ ರಾಜಕಾರಣದ ಸಮೀಕ್ಷೆಯಲ್ಲಿ ಬಹುತೇಕ ಖಚಿತ ಮಾಹಿತಿ ನೀಡಿದ್ದ ಚಾಣಕ್ಯ, ಟೈಮ್ಸ್ ನೌ, ನ್ಯೂಸ್ 18 ಐಪಿಎಸ್ಒಎಸ್ ಹಾಗೂ ಸಿಎನ್ಎಕ್ಸ್ ವರದಿಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಗೆಲುವಿನ ಬಗ್ಗೆ ಭವಿಷ್ಯ ನುಡಿದಿದ್ದವು. ಆದರೆ, ಈ ಭವಿಷ್ಯ ತಲೆಕೆಳಗಾಗಿದೆ.