ಅವರೇ ಕಲ್ಲು ತೂರಿ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ: ಕುಮಾರಸ್ವಾಮಿ
Recommended Video

ಮಂಡ್ಯ, ಏಪ್ರಿಲ್ 12: ಮಂಡ್ಯ ಪಕ್ಷೇತರ ಅಭ್ಯರ್ಥಿ ಹೊಸ ತಂತ್ರ ಹೂಡಿದ್ದಾರೆ, ತಮ್ಮ ಪ್ರಚಾರ ಸಭೆಯ ಮೇಲೆ ತಾವೇ ಕಲ್ಲು ಹೊಡೆಸಿಕೊಂಡು ಜೆಡಿಎಸ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.
ಮದ್ದೂರು ತಾಲ್ಲೂಕಿನಲ್ಲಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ನಡೆಸಿದ ಅವರು, ಸುಮಲತಾ ಅವರ ಪ್ರಚಾರ ಸಭೆಯಲ್ಲಿ ನಡೆದ ಕಲ್ಲು ತೂರಾಟ ಹಾಗೂ ಆ ಆರೋಪವನ್ನು ಜೆಡಿಎಸ್ ಮೇಲೆ ಹಾಕಿದ್ದರ ಬಗ್ಗೆ ಮಾತನಾಡಿದರು.

ನಾನು ಯಾವುದೇ ಕುತಂತ್ರ ಮಾಡುವುದಿಲ್ಲ, ಆದರೆ ಅವರೇ ಗೆಲ್ಲಲು ನಾನಾ ಕುತಂತ್ರ ಮಾಡುತ್ತಿದ್ದಾರೆ. ನಾನು ಮಂಡಿಸಿದ ಬಜೆಟ್ ಅನ್ನು ಮಂಡ್ಯ ಬಜೆಟ್ ಎಂದು ಟೀಕಿಸಿದವರ ಜೊತೆ ಸೇರಿಕೊಂಡು ಮತ ಕೇಳಲು ಬಂದಿದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಂಡಾಗ ನಿಮ್ಮ ಮನೆಗೆ ಯಾರು ಬಂದಿದ್ದರು ನೀವೆ ಯೋಚಿಸಿ ಎಂದು ಕುಮಾರಸ್ವಾಮಿ ಜನರನ್ನು ಪ್ರಶ್ನಿಸಿದರು.
ನಿಖಿಲ್ ಅನ್ನು ಮಂಡ್ಯ ಅಭಿವೃದ್ಧಿ ಬಗೆಗೆ ಚರ್ಚೆ ಆಹ್ವಾನಿಸಿದ್ದ ಸುಮಲತಾ ಅವರ ಸವಾಲಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಪಕ್ಷೇತರ ಅಭ್ಯರ್ಥಿಯಿಂದ ಮಂಡ್ಯ ಅಭಿವೃದ್ಧಿಯ ಬಗ್ಗೆ ನಾವು ಕಲಿಯಬೇಕಿಲ್ಲ, ನಮ್ಮ ಸಾಮಾನ್ಯ ಕಾರ್ಯಕರ್ತನನ್ನು ಎದುರಿಸುವ ಶಕ್ತಿಯೂ ಅವರಿಗೆ ಇಲ್ಲ, ಅಂಬರೀಶ್ ಇದ್ದಾಗಲಾದರೂ ಇವರು ಜನರ ಕಷ್ಟ ಕೇಳಿದ್ದಾರಾ? ಎಂದು ಪ್ರಶ್ನೆ ಮಾಡಿದರು.
ಇದೇ ದಿನ ದೇವೇಗೌಡ ಹಾಗೂ ಸಿದ್ದರಾಮಯ್ಯ ಅವರು ಮಂಡ್ಯ ಕ್ಷೇತ್ರದ ಹಲವೆಡೆ ನಿಖಿಲ್ ಕುಮಾರಸ್ವಾಮಿ ಅವರ ಪರ ಜಂಟಿಯಾಗಿ ಪ್ರಚಾರ ನಡೆಸಿದರು.












Click it and Unblock the Notifications