100ರ ಸನಿಹದಲ್ಲಿ ಕೆಆರ್ಎಸ್ ನೀರಿನ ಮಟ್ಟ
ಮಂಡ್ಯ, ಜುಲೈ 08 : ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಬಿರುಸಾಗಿದೆ. ಕಾವೇರಿ ನದಿ ಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೆಆರ್ಎಸ್ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಜಲಾಶಯದ ನೀರಿನ ಮಟ್ಟ 100 ಅಡಿ ಸನಿಹಕ್ಕೆ ತಲುಪಿದೆ.
124.80 ಅಡಿ ಎತ್ತರದ ಕೆಆರ್ಎಸ್ ಜಲಾಶಯದಲ್ಲಿ ಜುಲೈ 7ರಂದು 99.40 ಅಡಿ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಕೇವಲ 81.55 ಅಡಿ ನೀರು ಇತ್ತು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಜಲಾಶಯಕ್ಕೆ 6,324 ಕ್ಯುಸೆಕ್ ಒಳ ಹರಿವು ಇದೆ. 449 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಒಳ ಹರಿವಿನ ಪ್ರಮಾಣ ಇನ್ನೂ ಹೆಚ್ಚಳವಾಗುವ ನಿರೀಕ್ಷೆ ಇದೆ.

ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಕೆಆರ್ಎಸ್ ಜಲಾಶಯ ಭರ್ತಿಯಾಗಿತ್ತು. ಪ್ರತಿದಿನ 1 ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರನ್ನು ಜಲಾಶಯದಿಂದ ಹೊರಬಿಡಲಾಗಿತ್ತು. ಕಾವೇರಿ ನದಿ ಪಾತ್ರದಲ್ಲಿ ಮಳೆ ಹೆಚ್ಚಾದರೆ ಜುಲೈ ಅಂತ್ಯಕ್ಕೆ ಈ ಬಾರಿ ಕೆಆರ್ಎಸ್ ಭರ್ತಿಯಾಗಲಿದೆ.
ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಕೆಆರ್ಎಸ್ ಬಹುಮುಖ್ಯವಾದದ್ದು. ಮಂಡ್ಯ ಜಿಲ್ಲೆಗೆ ನೀರಾವರಿಗೆ ಕೆಆರ್ಎಸ್ ಜಲಾಶಯವೇ ಆಸರೆಯಾಗಿದೆ. ಮೈಸೂರು, ಬೆಂಗಳೂರು ಮತ್ತು ಮಂಡ್ಯಕ್ಕೆ ಇಲ್ಲಿಂದಲೇ ಕುಡಿಯುವ ನೀರು ಸರಬರಾಜು ಆಗುತ್ತದೆ.












Click it and Unblock the Notifications