ಪಾಂಡವಪುರದಲ್ಲಿ ತಮಿಳರ ಅಂಗಡಿ ಚೆಲ್ಲಾಪಿಲ್ಲಿ, ಲಾರಿ ಭಸ್ಮ
ಮಂಡ್ಯ, ಸೆಪ್ಟೆಂಬರ್ 12 : ಕಾವೇರಿ ನೀರಿನ ವಿಚಾರವಾಗಿ ಬೂದಿ ಮುಚ್ಚಿದ ಕೆಂಡಂತಿದ್ದ ಮಂಡ್ಯ ಜಿಲ್ಲಾದ್ಯಂತ ಸೋಮವಾರ ಪ್ರತಿಭಟನೆಗಳ ಕಾವು ಹೆಚ್ಚಾಗಿದೆ. ಸುಪ್ರೀಂ ಕೋರ್ಟಿನಿಂದ ತಿದ್ದುಪಡಿ ಆಜ್ಞೆ ಹೊರಬೀಳುತ್ತಿದ್ದಂತೆ ಪ್ರತಿಭಟನೆ ತೀವ್ರಗೊಳ್ಳುತ್ತಿದೆ.
ತಮಿಳುನಾಡಿನಲ್ಲಿ ಕರ್ನಾಟಕ ವಾಹನಗಳು ಹಾಗೂ ಕನ್ನಡಿಗರ ಹೋಟೆಲ್ಗಳ ಮೇಲೆ ದಾಳಿ ಮಾಡಿ ಹಾನಿ ಮಾಡಿರುವ ಹಿನ್ನೆಲೆಯಲ್ಲಿ ಪಾಂಡವಪುರ ಪಟ್ಟಣದಲ್ಲಿ ತಮಿಳಿಗರಿಗೆ ಸೇರಿದ ಅಂಗಡಿಗಳ ಮೇಲೆ ದಾಳಿ ಮಾಡಲಾಗಿದೆ.[ಕಾವೇರಿ ವಿವಾದ : ಕರ್ನಾಟಕಕ್ಕೆ ಮತ್ತೆ ಅನ್ಯಾಯ]
ಕೈಗೆ ಸಿಕ್ಕ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದು, ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ತಹಬದಿಗೆ ತಂದಿದ್ದಾರೆ. ಪಟ್ಟಣದಾದ್ಯಂತ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.[ತಮಿಳುನಾಡು-ಕರ್ನಾಟಕ ನಡುವೆ ಬಸ್ ಸಂಚಾರ ಸ್ಥಗಿತ]
ಲಾರಿಗೆ ಬೆಂಕಿ : ಸೆಪ್ಟೆಂಬರ್ 5ರ ಆದೇಶಕ್ಕಿಂತ ಹೆಚ್ಚು 30 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡುತ್ತಿದ್ದಂತೆ ರೊಚ್ಚಿಗೆದ್ದ ರೈತರು ಹಾಗೂ ಹೋರಾಟಗಾರರು ಪಾಂಡವಪುರ ಹಾಗೂ ಮದ್ದೂರು ತಾಲೂಕಿನ ಗೆಜ್ಜಲಗೆರೆ ಸಮೀಪ ತಮಿಳುನಾಡಿಗೆ ಸೇರಿದ ಲಾರಿಗೆ ಬೆಂಕಿ ಹಚ್ಚಿದ್ದಾರೆ.
ಕನ್ನಡಿಗರ ಮೇಲೆ ತಮಿಳುನಾಡಿನಲ್ಲಿ ಹಲ್ಲೆ ಮಾಡಿರುವುದರಿಂದ ಮತ್ತಷ್ಟು ಸಿಡಿದೆದ್ದ ಪಾಂಡವಪುರದ ಹೋರಾಟಗಾರರು ತಮಿಳಿಗರಿಗೆ ಸೇರಿದ ಮೂರ್ನಾಲ್ಕು ಅಂಗಡಿಗಳನ್ನು ಧ್ವಂಸಗೊಳಿಸಿದರು. ಅಲ್ಲದೆ, ಪೆಟ್ರೋಲ್ ಬಂಕ್ ಮುಂಭಾಗ ನಿಂತಿದ್ದ ತಮಿಳುನಾಡಿನ ಲಾರಿಗೆ ಬೆಂಕಿ ಹಚ್ಚಿದರು.
ಬೈಕ್ ರ್ಯಾಲಿ : ಕೆ.ಆರ್.ಎಸ್.ನ 500 ಮೀ. ಸುತ್ತ ನಿಷೇಧಾಜ್ಞೆ ಹೊರಡಿಸಿದ್ದರೂ ಜಿಪಂ ಸದಸ್ಯ ಸಿ.ಅಶೋಕ್ ನೇತೃತ್ವದಲ್ಲಿ ನೂರಾರು ಜೆಡಿಎಸ್ ಕಾರ್ಯಕರ್ತರು ಪಾಂಡವಪುರದಿಂದ ಕೆ.ಆರ್.ಎಸ್. ವರೆಗೆ ಬೈಕ್ ಜಾಥಾ ಹೊರಟಿದ್ದಾರೆ.[ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ]
ಮಂಡ್ಯ ನಗರದಲ್ಲಿ ಪಿ.ಇ.ಎಸ್. ಕಾಲೇಜು ಸೇರಿದಂತೆ ಇನ್ನಿತರ ಕಾಲೇಜುಗಳ ವಿದ್ಯಾರ್ಥಿಗಳು ಜೆ.ಸಿ.ವೃತ್ತದಲ್ಲಿ ಜಮಾಯಿಸಿ ಸುಪ್ರೀಂ ಕೋರ್ಟ್ನ ನಿರ್ದೇಶನ ಹಾಗೂ ತಮಿಳುನಾಡಿನ ಕ್ರಮವನ್ನು ಖಂಡಿಸಿ, ಆಕ್ರೋಶ ವ್ಯಕ್ತಪಡಿಸಿದರು.
ನಂತರ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಧರಣಿಯಲ್ಲಿ ಪಾಲ್ಗೊಂಡು ನಾವು ನಿಮ್ಮ ಜೊತೆ ಇದ್ದೇವೆ ಎಂದು ಬೆಂಬಲ ಸೂಚಿಸಿದರು.