ಭಾರತ ಹಿಂದೂ ರಾಷ್ಟ್ರವಾಗಿಯೇ ಉಳಿಯುತ್ತದೆ ಎಂದ ಪ್ರಮೋದ್ ಮುತಾಲಿಕ್
ಮಂಡ್ಯ, ಸೆಪ್ಟೆಂಬರ್ 21 : ಮಾಜಿ ಪ್ರಧಾನಿ, ಜೆಡಿಎಸ್ ಮುಖಂಡ ಎಚ್.ಡಿ. ದೇವೇಗೌಡರಷ್ಟೇ ಅಲ್ಲ, ಈ ಹಿಂದೆ ಕೂಡ ಬೇಕಾದಷ್ಟು ರಾಜಕಾರಣಿಗಳು ಮುಸ್ಲಿಮರ ಓಟಿಗಾಗಿ ಹಿಂದೂ ರಾಷ್ಟ್ರ ಆಗಲು ಬಿಡುವುದಿಲ್ಲ ಎಂದು ಹೇಳುತ್ತಲೇ ಬಂದಿದ್ದಾರೆ. ಇಂತಹ ನೂರು ದೇವೇಗೌಡರು ಬಂದರೂ ಭಾರತ ಹಿಂದೂ ರಾಷ್ಟ್ರವಾಗಿಯೇ ಉಳಿಯುತ್ತದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನ ಪ್ರಧಾನಿ ನರೇಂದ್ರ ಮೋದಿಯವರಿಗೆ ದೇವಿ ಶಕ್ತಿ ಕೊಟ್ಟಿದ್ದಾಳೆ. ಜನ ಬೆಂಬಲ ಇದೆ. ನೂರಕ್ಕೆ ನೂರು ಹಿಂದೂ ರಾಷ್ಟ್ರವಾಗುತ್ತದೆ. ಹಿಂದೂ ರಾಷ್ಟ್ರ ಎಂದರೆ ಇಲ್ಲಿನ ಮುಸ್ಲಿಂ, ಕ್ರಿಶ್ಚಿಯನ್ನರನ್ನು ಹೊರಗೆ ಹಾಕುವಂತಹುದ್ದಲ್ಲ ಎಂದರು.

ಮುಸ್ಲಿಮರ ಓಟಿನ ಸಲುವಾಗಿ ಏನೇನೋ ಹೇಳಿಕೊಂಡು ಓಡಾಡುವಂತಹುದೂ ಅಲ್ಲ. ಬದಲಾಗಿ ಮುಸ್ಲಿಂ, ಕ್ರಿಶ್ಚಿಯನ್ನರು ಇಲ್ಲೇ ಆನಂದವಾಗಿ ಬದುಕುತ್ತಾರೆ ಎಂದು ಹೇಳಿದರು.
ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರವಾದಿಗಳ ತನಿಖೆಗೆ ಒಳಪಡಿಸಬೇಕು. ಗೌರಿ ಹತ್ಯೆಯನ್ನು ಶ್ರೀರಾಮ ಸಂಘಟನೆಯೂ ಸಹ ತೀವ್ರವಾಗಿ ಖಂಡಿಸಿದೆ. ಈ ಬಗ್ಗೆ ಗಮನ ಹರಿಸದೆ ವಿಚಾರವಾದಿ, ವಿಕಾರವಾದಿಗಳು ಹಿಂದೂಗಳು, ಹಿಂದೂ ಸಂಘಟನೆಗಳ ಕಾಎರ್ಯಕರ್ತರು ಹತ್ಯೆ ಮಾಡಿದ್ದಾರೆ ಎಂದು ಹೇಳುವ ಮೂಲಕ ಜನರ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ ಎಂದರು.
ರಾಜ್ಯ ಸರಕಾರ ಗೌರಿ ಹತ್ಯೆ ಪ್ರಕರಣವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದೆ. ರಾಜ್ಯದ ಪೊಲೀಸ್ ಇಲಾಖೆಯೂ ಸಮರ್ಥವಾಗಿ ತನಿಖೆ ನಡೆಸುವಲ್ಲಿ ಮುಂಚೂಣಿಯಲ್ಲಿದ್ದು, ಬೇರೆ ಬೇರೆ ದೃಷ್ಟಿಕೋನದಿಂದ ತನಿಖೆ ನಡೆಸುತ್ತಿದೆ. ಈ ತನಿಖೆಯಿಂದ ಯಾರು ಹಂತಕರು ಎಂಬುದನ್ನು ಪೊಲೀಸರು ಪತ್ತೆ ಹಚ್ಚುತ್ತಾರೆ .ಅದರಲ್ಲಿ ಎರಡು ಮಾತಿಲ್ಲ ಎಂದರು.












Click it and Unblock the Notifications