ಕಾವೇರಿ ಜಲಾಶಯದಲ್ಲಿ ವ್ಯಾಪಕ ಮಳೆ: ನಿಧಾನವಾಗಿ ಮೈದುಂಬುತ್ತಿರುವ ಕೆಆರ್ಎಸ್
ಮಂಡ್ಯ, ಜು6: ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಕಾರಣ ರೈತರ ಜೀವನಾಡಿ ಕೃಷ್ಣರಾಜಸಾಗರ ಜಲಾಶಯಕ್ಕೆ ಹರಿದುಬರುತ್ತಿರುವ ನೀರಿನ ಪ್ರಮಾಣ ಹೆಚ್ಚಿದೆ. ಪರಿಣಾಮ ಜಲಾಶಯ ನಿಧಾನವಾಗಿ ಭರ್ತಿಯಾಗಿದೆ. ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವವರಿಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದ್ದು, ಸುರಕ್ಷಿತ ತಾಣಗಳಿಗೆ ಸ್ಥಳಾಂತರಗೊಳ್ಳಲು ಸೂಚಿಸಲಾಗಿದೆ.
ಜಲಾಶಯದ ಗರಿಷ್ಠ ಮಟ್ಟ 124.80 ಇದ್ದು, ಬುಧವಾರ ಜಲಾಶಯದಲ್ಲಿ 114.70 ಅಡಿ ನೀರು ಸಂಗ್ರಹವಾಗಿತ್ತು. ಒಟ್ಟು 49.452 ಟಿಎಂಸಿ ಸಾಮರ್ಥ್ಯದ ಅಣೆಕಟ್ಟೆಯಲ್ಲಿ 36.719 ಟಿಎಂಸಿ ನೀರು ಸಂಗ್ರಹವಾಗಿದೆ.

ಜಲಾಶಯಕ್ಕೆ 29468 ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಜಲಾಶಯದಿಂದ 3171 ಕ್ಯೂಸೆಕ್ ನೀರನ್ನು ಹೊರಗೆ ಹರಿಯಬಿಡಲಾಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ 90.52 ಅಡಿ ನೀರು ಸಂಗ್ರಹವಾಗಿತ್ತು.
ಈ ಬಾರಿ ಮುಂಗಾರು ಜುಲೈ ಅಂತ್ಯದಲ್ಲೇ ಪ್ರಾರಂಭವಾಗಿರುವ ಕಾರಣ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣವೂ ಹೆಚ್ಚಿದೆ. ಕಳೆದ ವರ್ಷ 1468 ಕ್ಯೂಸೆಕ್ ಮಾತ್ರ ಒಳ ಹರಿವಿತ್ತು. ಜಲಾಶಯದಿಂದ 1341 ಕ್ಯೂಸೆಕ್ ನೀರನ್ನು ಹೊರ ಹರಿವು ದಾಖಲಾಗಿತ್ತು. ಇದೇ ರೀತಿ ಮಳೆ ಬೀಳುತ್ತಿದ್ದರೆ ಜುಲೈ ಅಂತ್ಯ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಜಲಾಶಯ ಭರ್ತಿಯಾಗುವ ಸಾಧ್ಯತೆಗಳಿವೆ.

2010ರಲ್ಲಿ ಅಕ್ಟೋಬರ್ನಲ್ಲಿ ಭರ್ತಿ
ಸಾಮಾನ್ಯವಾಗಿ ಜುಲೈನಿಂದ ಆಗಸ್ಟ್ ತಿಂಗಳಲ್ಲೇ ಅಣೆಕಟ್ಟು ಭರ್ತಿಯಾಗುತ್ತದೆ. ಒಮ್ಮೊಮ್ಮೆ ಸೆಪ್ಟೆಂಬರ್ನಲ್ಲಿ, ಅಪರೂಪವೆಂಬಂತೆ ಅಕ್ಟೋಬರ್ನಲ್ಲಿ ಪೂರ್ಣ ಮಟ್ಟ ತಲುಪುತ್ತದೆ. 2010ರ ಅಕ್ಟೋಬರ್ 18ರಂದು ಅಣೆಕಟ್ಟು ಭರ್ತಿಯಾಗಿತ್ತು. ಅಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರು ಕಾವೇರಿ ಮಾತೆಗೆ ಬಾಗೀನ ಸಮರ್ಪಿಸಿದ್ದರು. ಕಳೆದ ವರ್ಷ ಮೊದಲ ಬಾರಿಗೆ ಬಸವರಾಜ ಬೊಮ್ಮಾಯಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ್ದರು.












Click it and Unblock the Notifications