ಕುಮಾರಸ್ವಾಮಿ ಎಲೆಕ್ಷನ್ ಟೈಮಲ್ಲಿ ಮಾತ್ರ ಕಣ್ಣೀರ್ ಹಾಕ್ತಾರಂತೆ...
ಮಂಡ್ಯ, ನವೆಂಬರ್ 27: ಮಾಜಿ ಮುಖ್ಯಮಂತ್ರಿ ಹೆಚ್,ಡಿ,ಕುಮಾರಸ್ವಾಮಿ ಅವರು ಚುನಾವಣೆ ಬಂತೆಂದರೆ ಪ್ರವಾಹಕ್ಕಿಂತ ಜಾಸ್ತಿ ಕಣ್ಣೀರು ಸುರಿಸುತ್ತಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಅಭರ್ಥಿ ಪರವಾಗಿ ಪ್ರಚಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹೆಚ್ಡಿಕೆ ಕಣ್ಣೀರಿನಿಂದ ಕೆ.ಆರ್.ಪೇಟೆಯಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿದೆ ಎಂದು ತಿರುಗೇಟು ನೀಡಿದರು.

ಕಣ್ಣೀರು ಹಾಕಿದ್ರೆ ಜನ ಮತ ನೀಡುತ್ತಾರೆ ಅಂತ ಅನ್ಕೊಂಡಿದ್ದಾರೆ. ಅವರನ್ನು ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಮತದಾರರು ಬುದ್ದಿ ಕಲಿಸಿದ್ದಾರೆ ಎಂದು ಟೀಕಿಸಿದರು. ಕುಮಾರಸ್ವಾಮಿ ಅವರಿಗೆ ಚುನಾವಣೆ ವೇಳೆಯಲ್ಲಿ ಮಾತ್ರ ಜನ ನೆನಪಾಗುತ್ತಾರೆ ಎಂದರು. ಅವರ ಕಣ್ಣೀರಿಗೆ ಕೆ.ಆರ್.ಪೇಟೆ ಜನ ಮರುಳಾಗಬಾರದು ಎಂದು ಮತದಾರರಿಗೆ ಮನವಿ ಮಾಡಿಕೊಂಡರು.
ಚುನಾವಣೆ ನಂತರ ರಾಜಕೀಯ ಧ್ರುವೀಕರಣವಾಗುತ್ತೆ ಅಂತ ಹೇಳಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿಯಾಗು ಅವರಿಗೆ ರಾಜಕೀಯ ಧ್ರುವೀಕರಣ ಅಂದ್ರೆನೇ ಗೊತ್ತಿಲ್ಲ. ಈಗಾಗಲೇ ರಾಜ್ಯದಲ್ಲಿ, ದೇಶದಲ್ಲಿ ಧ್ರುವೀಕರಣವಾಗಿದೆ ಎಂಬುದನ್ನು ನೆನಪು ಮಾಡಿಕೊಳ್ಳಲಿ ಎಂದು ಟಾಂಗ್ ಕೊಟ್ಟರು.
ಬಹುಶಃ ಕುಮಾರಸ್ವಾಮಿಯವರು ಕಾಂಗ್ರೆಸ್ ಸೇರಬಹುದು, ಅದನ್ನೇ ರಾಜಕೀಯ ಧ್ರುವೀಕರಣ ಎಂದು ಹೇಳ್ತಿದ್ದಾರೆ. ಅವರು ಚುನಾವಣಾ ಸಂದರ್ಭದಲ್ಲಿ ಮಾತ್ರ ಇಂತಹ ಹೇಳಿಕೆಗಳನ್ನು ನೀಡುವುದರಲ್ಲಿ ನಿಸ್ಸೀಮರು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು. ದುರಹಂಕಾರದಿಂದ ಚುನಾವಣೆ ಗೆಲ್ಲಬಹುದು ಎಂದು ತಿಳಿದುಕೊಂಡಿದ್ದಾರೆ, ಆದರೆ ಸಿದ್ದರಾಮಯ್ಯನವರ ದುರಹಂಕಾರಕ್ಕೆ ಈ ಉಪ ಚುನಾವಣೆ ಇತಿಶ್ರೀ ಹಾಡಲಿದೆ ಎಂದರು.
ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾರಾಯಣಗೌಡ, ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಬಿ.ಚಂದ್ರಶೇಖರ್ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿ ಬಿ.ಎಲ್.ದೇವರಾಜ್ ಉಪ ಚುನಾವಣಾ ಆಖಾಡದಲ್ಲಿದ್ದಾರೆ. ಡಿಸೆಂಬರ್ 05 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 09 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.












Click it and Unblock the Notifications