ಮಳವಳ್ಳಿಯಲ್ಲಿ ಆಹಾರಕ್ಕಾಗಿ ಕಾದಾಡಿದ ಹೆಣ್ಣು ಚಿರತೆ ಸಾವು
ಮಂಡ್ಯ, ಮೇ 25: ಹಸಿವಿನಿಂದ ಕಂಗೆಟ್ಟಿದ್ದ ಚಿರತೆಗಳು ಆಹಾರಕ್ಕಾಗಿ ಕಾಳಗ ನಡೆಸಿದ ವೇಳೆ ಹೆಣ್ಣು ಚಿರತೆಯೊಂದು ಸಾವನ್ನಪ್ಪಿರುವ ಘಟನೆ ಮಳವಳ್ಳಿಯ ಬಿ.ಜಿ.ಪುರ ಹೋಬಳಿಯ ಕಚ್ಚಗನಹಳ್ಳಿ ಗ್ರಾಮದ ಬಿದನಗೆರೆಯಲ್ಲಿ ನಡೆದಿದೆ.
ನಾಲ್ಕೈದು ವರ್ಷ ಪ್ರಾಯದ ಹೆಣ್ಣು ಚಿರತೆ ಮೃತಪಟ್ಟಿದ್ದು, ಕಾದಾಟದಿಂದಲೇ ಸಾವನ್ನಪ್ಪಿದೆ ಎಂಬುದಕ್ಕೆ ಚಿರತೆ ಮೈತುಂಬಾ ಇರುವ ಮತ್ತೊಂದು ಚಿರತೆಯ ಕೈ ಉಗುರಿನ ಗುರುತುಗಳು ಸಾಕ್ಷಿಯಾಗಿವೆ. ಕಚ್ಚಗನಹಳ್ಳಿ ಗ್ರಾಮದ ಹೊರವಲಯದ ಬಿದನಗೆರೆ ಕೆರೆಯ ದಡದಲ್ಲಿ ಚಿರತೆ ಸತ್ತು ಬಿದ್ದಿರುವುದನ್ನು ನೋಡಿದ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗ್ರಾಮಸ್ಥರು ಕೆಲ ದಿನಗಳ ಹಿಂದೆ, ಹುಲಿಯೊಂದು ಈ ಪ್ರದೇಶದಲ್ಲಿ ತಿರುಗಾಡಿದೆ. ಹುಲಿಯೇ ಚಿರತೆಯನ್ನು ಕೊಂದು ಹಾಕಿರಬಹುದು ಎಂದು ಶಂಕಿಸಿದ್ದರು. ಆದರೆ ಈ ಬಗ್ಗೆ ವಲಯ ಅರಣ್ಯಾಧಿಕಾರಿ ರಮೇಶ್ ಮಾತನಾಡಿ, ಇಲ್ಲಿ ಹುಲಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲ. ಹಸಿವಿನಿಂದ ಚಿರತೆಗಳು ಕಾದಾಡಿಕೊಂಡು ಹೆಣ್ಣು ಚಿರತೆ ಸಾವನ್ನಪ್ಪಿರುವ ಸಾಧ್ಯತೆ ಹೆಚ್ಚಾಗಿದೆ. ಈ ಕುರಿತಂತೆ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ನಿಖರ ಮಾಹಿತಿ ದೊರೆಯಲಿದೆ ಎಂದು ತಿಳಿಸಿದ್ದಾರೆ.












Click it and Unblock the Notifications