'ಸೋಲಿಸಿದ್ದೇ ಬಾಯಿ ಮುಚ್ಚಿಕೊಂಡಿರಲಿ ಎಂದು, ಆದರೂ ಸತ್ತ ಕುದುರೆಗಳು ಮಾತನಾಡುತ್ತಿವೆ'
ಮಂಡ್ಯ, ಅಕ್ಟೋಬರ್ 9: ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯ ಕುರಿತು ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಚಲುವರಾಯಸ್ವಾಮಿ ನೀಡಿದ ಹೇಳಿಕೆಗೆ, ಜೆಡಿಎಸ್ ನಾಯಕ, ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ತಿರುಗೇಟು ನೀಡಿದ್ದಾರೆ.
ಜನರು ಅತಂತ್ರ ತೀರ್ಪಿನಿಂದಾಗಿ ಅನಿವಾರ್ಯ ಕಾರಣಗಳಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಈ ಮೈತ್ರಿ ಅಗತ್ಯವಾಗಿತ್ತು. ಮಂಡ್ಯ ಜೆಡಿಎಸ್ನ ಭದ್ರಕೋಟೆ. ಇಲ್ಲಿ ಯಾರನ್ನೇ ಅಭ್ಯರ್ಥಿಯನ್ನಾಗಿ ಮಾಡಿದರೂ ಗೆಲ್ಲಿಸುತ್ತೇವೆ ಎಂದು ಪುಟ್ಟರಾಜು ಹೇಳಿದ್ದಾರೆ.
ಇದರಿಂದ ಮಂಡ್ಯದಲ್ಲಿನ ಇಬ್ಬರು ಮುಖಂಡರ ನಡುವಿನ ತಿಕ್ಕಾಟ ಮತ್ತಷ್ಟು ಜೋರಾಗುವ ಲಕ್ಷಣಗಳು ಗೋಚರಿಸಿವೆ.
ಮಂಡ್ಯ ಲೋಕಸಭೆ ಉಪ ಚುನಾವಣೆ : ಜೆಡಿಎಸ್ ಜೊತೆ ಮೈತ್ರಿಗೆ ವಿರೋಧ?
ಜಿಲ್ಲೆಯಲ್ಲಿ ಪಕ್ಷ ಸದೃಢವಾಗಿದೆ. ಹೀಗಾಗಿ ಮುಂಬರುವ ಲೋಕಸಭೆಯ ಉಪಚುನಾವಣೆಗೆ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುವುದು ಬೇಡ. ಸ್ವತಂತ್ರವಾಗಿ ಚುನಾವಣೆ ಎದುರಿಸುವುದು ಸೂಕ್ತ ಎಂದು ಚಲುವರಾಯಸ್ವಾಮಿ ಪಕ್ಷದ ನಾಯಕರಿಗೆ ಹೇಳಿದ್ದರು.
ಸತ್ತ ಕುದುರೆಗಳು ಮಾತನಾಡುತ್ತಿವೆ
ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಚಲುವರಾಯಸ್ವಾಮಿ ಅವರ ಕುರಿತು ಮಾತನಾಡುವಾಗ, 'ಸತ್ತ ಕುದುರೆ' ಎಂಬ ಪದ ಬಳಕೆ ಮಾಡಿದ ಸಿ.ಎಸ್ ಪುಟ್ಟರಾಜು, ಚಲುವರಾಯಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಚಲುವರಾಯಸ್ವಾಮಿ ಅವರನ್ನು ಜನರು ಸೋಲಿಸಿದ್ದೇ ಅವರು ಬಾಯಿಮುಚ್ಚಿಕೊಂಡು ಇರಲಿ ಎಂದು. ಆದರೆ ಸತ್ತ ಕುದುರೆಗಳು ಮಾತನಾಡುವ ಹಾಗಾಗಿದೆ, ಜನರು ನೀಡಿದ ತೀರ್ಪಿನಿಂದಾಗಿ ಅನಿವಾರ್ಯವಾಗಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚಿಸಿವೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸಲು ಮಹಾನಾಯಕರು ತೀರ್ಮಾನ ಮಾಡಿದ್ದಾರೆ. ನಾಯಕರ ತೀರ್ಮಾನಗಳಿಗೆ ನಾನೂ ಬದ್ಧನಾಗಿರಬೇಕು, ಚಲುವರಾಯಸ್ವಾಮಿ ಅವರೂ ಬದ್ಧರಾಗಿರಬೇಕು ಎಂದು ತೀಕ್ಷ್ಣವಾಗಿ ಹೇಳಿದರು.
ಲೋಕಸಭೆ ಚುನಾವಣೆಗೆ ಸ್ಪರ್ಧೆ, ಚಲುವರಾಯಸ್ವಾಮಿ ಹೇಳಿದ್ದೇನು?
ಜೆಡಿಎಸ್ ಭದ್ರಕೋಟೆ
ಮಂಡ್ಯ ಜೆಡಿಎಸ್ನ ಭದ್ರಕೋಟೆ. ಇಲ್ಲಿ ಯಾರನ್ನೇ ಅಭ್ಯರ್ಥಿಯನ್ನಾಗಿ ಹಾಕಿದರೂ ಗೆಲ್ಲಿಸ್ತಿವಿ ಎಂದು ಪುಟ್ಟರಾಜು ಹೇಳಿದರು.
ಮಂಡ್ಯದಲ್ಲಿ ಮೈತ್ರಿಗಾಗಿ ನಾವೇನೂ ಅವರನ್ನು ಗೋಗರೆಯುತ್ತಿಲ್ಲ. ನಾಗಮಂಗದ ಇತಿಹಾಸದಲ್ಲಿ ಯಾರಾದರೂ 52 ಸಾವಿರ ಮತಗಳಿಂದ ಗೆದ್ದಿದ್ದನ್ನು ನೋಡಿದ್ದೀರಾ? ಎಂದು ಕಾಂಗ್ರೆಸ್ನ ಸುರೇಶ್ ಗೌಡ ಅವರ ಎದುರು ಭಾರಿ ಅಂತರದ ಸೋಲು ಕಂಡ ಚಲುವರಾಯಸ್ವಾಮಿ ಅವರನ್ನು ಕೆಣಕಿದರು.
ಮಂಡ್ಯದಲ್ಲಿ ಜೆಡಿಎಸ್ ಗೆ ಪೈಪೋಟಿ ನೀಡುತ್ತಾ ಬಿಜೆಪಿ?
ಅಸೆಂಬ್ಲಿಗೂ ಲೋಕಸಭೆಗೂ ವ್ಯತ್ಯಾಸವಿದೆ
ವಿಧಾನಸಭೆ ಚುನಾವಣೆಗೂ, ಲೋಕಸಭೆ ಚುನಾವಣೆಗೂ ಸಾಕಷ್ಟು ವ್ಯತ್ಯಾಸವಿದೆ. ಇಲ್ಲಿ ಸೋತವರು ಅಲ್ಲಿಯೂ ಸೋಲುತ್ತಾರೆ ಎನ್ನುವಂತಿಲ್ಲ. ಆಗಿನ ಸಂದರ್ಭವೇ ಬೇರೆ. ಈಗಿನ ಸಂದರ್ಭವೇ ಬೇರೆ. ಲೋಕಸಭೆ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಹಾಕಬೇಕು ಎಂದು ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ ಎಂದು ಚಲುವರಾಯಸ್ವಾಮಿ ಹೇಳಿದ್ದರು.
ಮಂಡ್ಯದಲ್ಲಿ ಜೆಡಿಎಸ್ ಗೆ ಪೈಪೋಟಿ ನೀಡುತ್ತಾ ಬಿಜೆಪಿ?
ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದೆ
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದೆ. 80 ಸ್ಥಾನ ಗೆದ್ದ ಕಾಂಗ್ರೆಸ್ 36 ಸ್ಥಾನ ಗೆದ್ದ ಜೆಡಿಎಸ್ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದೆ. ಈ ಅರಿವು ಜೆಡಿಎಸ್ ಮುಖಂಡರಲ್ಲಿ ಇದ್ದಂತೆ ಕಾಣುತ್ತಿಲ್ಲ. ನಮ್ಮ ಜತೆ ಹೇಗೆ ನಡೆದುಕೊಳ್ಳಬೇಕೆಂಬ ನಡವಳಿಕೆ ಜೆಡಿಎಸ್ ಗೆ ಗೊತ್ತಿಲ್ಲ. ಕಾಂಗ್ರೆಸ್ ಬಿಟ್ಟು ಕೊಟ್ಟಿರುವ ಸಿಎಂ ಹುದ್ದೆಯನ್ನು ಹೇಗೆ ನಡೆಸುತ್ತಿದ್ದಾರೆ ಎಂಬುದನ್ನು ಜನ ನೋಡ್ತಿದ್ದಾರೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು, ಜೆಡಿಎಸ್ ಶಾಸಕರ ಹೇಳಿಕೆಗಳೇ ಇದಕ್ಕೆ ಸಾಕ್ಷಿಯಾಗಿವೆ ಎಂದು ಚಲುವರಾಯಸ್ವಾಮಿ ಹೇಳಿಕೆ ನೀಡಿದ್ದರು.
ಬಿಟ್ಟುಕೊಡಬೇಕು ಎಂದು ಕೇಳುತ್ತಿದ್ದಾರೆ
'ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಬೇಕು ಎಂಬ ಕಾನೂನು ಇಲ್ಲ. ಅವರು ಬಿಟ್ಟುಕೊಡಿ ಎಂದು ಕೇಳುತ್ತಾರೆ. ಆದರೆ, ಪಕ್ಷ ಸೂಕ್ತ ನಿರ್ಧಾರವನ್ನು ಕೈಗೊಳ್ಳಬೇಕು. ಈಗ ಚುನಾವಣೆ ದಿನಾಂಕ ಮಾತ್ರ ಘೋಷಣೆಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಹಾಕುವುದಿಲ್ಲ ಎಂದು ಹೇಳಿಲ್ಲ' ಎಂದು ಚಲುವರಾಯಸ್ವಾಮಿ ಹೇಳಿದರು. 'ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. ಮಂಡ್ಯ ಲೋಕಸಭೆ ಉಪ ಚುನಾವಣೆಗೆ ನಾನು ಸ್ಪರ್ಧೆ ಮಾಡುವುದಿಲ್ಲ. ನಾನು ಟಿಕೆಟ್ ಆಕಾಂಕ್ಷಿಯೂ ಅಲ್ಲ' ಎಂದು ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.
ರಮ್ಯಾ ವಿರುದ್ಧ ಸೋತಿರಲಿಲ್ಲವೇ?
ಮಾತೆತ್ತಿದರೆ ಜೆಡಿಎಸ್ನವರು ಮಂಡ್ಯದಲ್ಲಿ ಏಳು ಸೀಟುಗಳನ್ನು ಗೆದ್ದಿರುವುದಾಗಿ ಹೇಳಿಕೊಳ್ಳುತ್ತಾರೆ. ಐದು ಶಾಸಕ ಸ್ಥಾನಗಳನ್ನು ಗೆದ್ದಿದ್ದವರು, ಹಿಂದಿನ ಲೋಕಸಭೆ ಚುನಾವಣೆಯಲ್ಲಿ ರಮ್ಯಾ ವಿರುದ್ಧ ಸೋತಿರಲಿಲ್ಲವೇ? ವಿಧಾನಸಭೆಯಲ್ಲಿ ಎಲ್ಲ ಸ್ಥಾನ ಗೆದ್ದ ಮಾತ್ರಕ್ಕೆ ಲೋಕಸಭೆಯಲ್ಲಿಯೂ ಜನರು ಸುಲಭವಾಗಿ ಗೆಲ್ಲಿಸುವುದಿಲ್ಲ. ಲೋಕಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಕಲೇಬೇಕು. ಜೆಡಿಎಸ್ ಬಲಿಷ್ಠವಾಗಿದ್ದರೂ ಕಾಂಗ್ರೆಸ್ಗೆ ಮಂಡ್ಯದಲ್ಲಿ ಗೆದ್ದ ಇತಿಹಾಸವಿದೆ ಎಂದಿದ್ದರು.