ಚಿಕ್ಕಮಂಡ್ಯ; ಸೇತುವೆ ಒಡೆಯಲು ಬಂದಿದ್ದ ಅಧಿಕಾರಿಗಳಿಗೆ ರೈತರಿಂದ ತರಾಟೆ
ಮಂಡ್ಯ, ಅಕ್ಟೋಬರ್, 18: ಚಿಕ್ಕಮಂಡ್ಯ ಕೆರೆಯಂಗಳದ ಬೀಡಿ ಕಾರ್ಮಿಕರ ಕಾಲೋನಿಗೆ ಮಳೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿತ್ತು. ನಂತರ ಅಧಿಕಾರಿಗಳು ಅನಾಹುತಕ್ಕೆ ಕಾರಣವಾಗಿದ್ದ ಹಳ್ಳದ ಮೇಲ್ಭಾಗದಲ್ಲಿರುವ ಕಾಲುವೆ-ಸೇತುವೆಯನ್ನು ಒಡೆದು ಹಾಕಲು ಮುಂದಾಗಿದ್ದರು. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಬೀಡಿ ಕಾಲೋನಿ ಕಾರ್ಮಿಕರಿಗಾಗಿ ಸೇತುವೆಯನ್ನು ಒಡೆಯುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಳ್ಳದ ಮೇಲ್ಭಾಗದಲ್ಲಿ ನಿರ್ಮಿಸಿರುವ ಸೇತುವೆಯನ್ನು ಒಡೆದುಹಾಕಲು ಯತ್ನಿಸಿದ ಅಧಿಕಾರಿಗಳು ಹಾಗೂ ಯುವ ಮುಖಂಡನಿಗೆ ರೈತರು ಮುತ್ತಿಗೆ ಹಾಕಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಪ್ರತಿ ಬಾರಿ ಮಳೆ ಬಂದಾಗಲೆಲ್ಲಾ ಬೀಡಿ ಕಾರ್ಮಿಕರ ಕಾಲೋನಿ ನಿವಾಸಿಗಳ ಸ್ಥಿತಿ ಹೇಳತೀರದಾಗಿರುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಪ್ರತಿಭಟನೆ, ಹೋರಾಟಗಳು ನಡೆಯುತ್ತಲೇ ಇವೆ. ಆದರೆ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಈವರೆಗೂ ಸೂಕ್ತ ಕ್ರಮಗಳನ್ನು ಜರುಗಿಸುವ ಕೆಲಸಗಳು ಆಗಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ಈ ಮಧ್ಯೆ ರೈತ ಸಂಘದ ಯುವ ಮುಖಂಡ ಎಸ್.ಸಿ. ಮಧುಚಂದನ್ ಅವರ ನೇತೃತ್ವದಲ್ಲಿ ನಿನ್ನೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗಿತ್ತು. ಬೀಡಿ ಕಾಲೋನಿ ನಿವಾಸಿಗಳು ಡಿಸಿ ಕಚೇರಿ ಮುಖ್ಯದ್ವಾರದ ಗೇಟ್ಗಳನ್ನು ಮುರಿದು ಒಳ ನುಗ್ಗಿ ಪ್ರತಿಭಟಿಸಿದ್ದರು. ಕಾಲೋನಿಯಲ್ಲಿ ನೀರು ನಿಲ್ಲಲು ಕೆರೆ ಮತ್ತು ಅವೈಜ್ಞಾನಿಕ ಬಡಾವಣೆ ನಿರ್ಮಾಣ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದನ್ನು ತಿಳಿದ ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ
ಕೆರೆ ಕೋಡಿ ನೀರು ಹರಿದು ಹೋಗಲು ಹಳ್ಳವಿದ್ದು, ಹಳ್ಳದ ಮೇಲ್ಭಾಗದಲ್ಲಿ ಸುಮಾರು 700 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ನಾಲೆಯೊಂದನ್ನು ನಿರ್ಮಿಸಲಾಗಿತ್ತು. ವಿಶ್ವೇಶ್ವರಯ್ಯನವರು ನಾಲೆ ನಿರ್ಮಾಣ ಮಾಡಿದ ವೇಳೆ ಸೇತುವೆಯನ್ನು ಕಟ್ಟಲಾಗಿತ್ತು. ಚುರ್ಕಿಗಾರೆ ಬಳಸಿ ಕಲ್ಲುಗಳಿಂದ ನಿರ್ಮಿಸಿರುವ ಸೇತುವೆ ಮತ್ತು ಕಾಲುವೆಯನ್ನು ತೆರವು ಮಾಡಲು ಅಧಿಕಾರಿಗಳು ಮುಂದಾಗಿದ್ದರು. ನೀರು ಸರಾಗವಾಗಿ ಹರಿಯುವಂತೆ ಮಾಡಲು ಸೇತುವೆಯನ್ನು ಜೆಸಿಬಿಯಿಂದ ಒಡೆದುಹಾಕಲು ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದರು.

ಅಧಿಕಾರಿಗಳಿಗೆ ಹಿಗ್ಗಾಮುಗ್ಗ ತರಾಟೆ
ಈ ಸುದ್ದಿ ತಿಳಿದ ಚಿಕ್ಕಮಂಡ್ಯ, ಹಳೇನಗರ ಸೇರಿದಂತೆ ವಿವಿಧ ಗ್ರಾಮಗಳ ನಿವಾಸಿಗಳು ಸ್ಥಳಕ್ಕೆ ಆಗಮಿಸಿ ಅಧಿಕಾರಿಗಳಿಗೆ ಮುತ್ತಿಗೆ ಹಾಕಿದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಯುವ ರೈತ ಮುಖಂಡ ಎಸ್.ಸಿ. ಮಧುಚಂದನ್ ಸಹ ಬಂದಿದ್ದರು. ಬೀಡಿ ಕಾಲೋನಿ ನಿವಾಸಿಗಳಿಗೆ ಅನುಕೂಲ ಮಾಡಿಕೊಡಲು ಬಂದಿದ್ದಾರೆ ಎಂದು ತಿಳಿದ ರೈತರು ಮಧುಚಂದನ್ನನ್ನು ತರಾಟೆಗೆ ತೆಗೆದುಕೊಂಡರು.

ಸ್ಥಳದಿಂದ ಕಾಲ್ಕಿತ್ತ ಅಧಿಕಾರಿಗಳು
ನೂರಾರು ಸಂಖ್ಯೆಯಲ್ಲಿ ಜನರು ಜಮಾವಣೆ ಆಗುತ್ತಿರುವುದನ್ನು ಕಂಡ ಅಧಿಕಾರಿಗಳು ಜೆಸಿಬಿಯೊಂದಿಗೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ನಂತರ ಎಸ್.ಸಿ.ಮಧುಚಂದನ್ಗೆ ರೈತರು ತೀವ್ರ ತರಾಟೆಗೆ ತೆಗೆದುಕೊಂಡರು. ಈ ವೇಳೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಸ್ಥಳದಲ್ಲಿದ್ದ ಪೊಲೀಸರು ರೈತರನ್ನು ಸಮಾಧಾನಪಡಿಸಿ ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಯಶಸ್ವಿಯಾದರು.

ರೈತರ ಮನವೊಲಿಸಿದ ಪೊಲೀಸರು
ಕೆಲವು ನಿವಾಸಿಗಳಿಗಾಗಿ ಕೆರೆಯನ್ನೇ ಬಲಿ ನೀಡಲಾಗಿದೆ. ಇನ್ನು ನಮ್ಮ ನೂರಾರು ಹೆಕ್ಟೇರ್ ಜಮೀನನ್ನು ಇವರಿಗೆ ಬಲಿ ಕೊಡಬೇಕೆ? ಅಂದಿನಿಂದಲೂ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಸಾಯುವವರೆಗೂ ಹೋರಾಟ ಮಾಡುತ್ತೇವೆ. ಸೇತುವೆ ಧ್ವಂಸಕ್ಕೆ ಅಧಿಕಾರಿಗಳು ನಾಲ್ಕನೇ ಬಾರಿಗೆ ಬಂದಿದ್ದಾರೆ. ಕನ್ನಂಬಾಡಿ ಅಣೆಕಟ್ಟೆಯಷ್ಟೇ ಇತಿಹಾಸವಿರುವ ಸೇತುವೆ ಮತ್ತು ಕಾಲುವೆಯನ್ನು ಎಂದಿಗೂ ಒಡೆಯಲು ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ. ನಂತರ ಪೊಲೀಸರು ರೈತರ ಮನವೊಲಿಸಿ ಸ್ಥಳದಿಂದ ಕಳುಹಿಸುವಲ್ಲಿ ಯಶಸ್ವಿಯಾದರು.












Click it and Unblock the Notifications