ಇನ್ನುಳಿದಿರುವುದು ಹೋರಾಟವೊಂದೇ : ಮಾದೇಗೌಡ ಕಿಡಿನುಡಿ
ಮಂಡ್ಯ, ಸೆಪ್ಟೆಂಬರ್ 19 : "ತಮಿಳ್ನಾಡಿಗೆ ಬಿಡೋದಕ್ಕೆ ಎಲ್ಲಿದೆ ನೀರು? ನೀರಿದ್ದರೆ ಕರ್ನಾಟಕಕ್ಕೂ ಬಿಡಲಿ, ತಮಿಳ್ನಾಡಿಗೂ ಬಿಡಲಿ. ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಸಿದ್ದರಾಮಯ್ಯ ಮನೆಗೆ ಹೋಗಲಿ" ಹೀಗೆಂದು ತಮ್ಮ ಎಂದಿನ ಶೈಲಿಯಲ್ಲಿ ಮಾರ್ಮಿಕವಾಗಿ ನುಡಿದವರು ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ, ಮಾಜಿ ಸಂಸದ ಬಿ ಮಾದೇಗೌಡ ಅವರು.
ನವದೆಹಲಿಯಲ್ಲಿ ಕಾವೇರಿ ಮೇಲುಸ್ತುವಾರಿ ಸಮಿತಿಯ ಸಭೆಯಲ್ಲಿ, ತಮಿಳುನಾಡಿಗೆ ಕರ್ನಾಟಕದಿಂದ 10 ದಿನಗಳ ಕಾಲ ಪ್ರತಿದಿನ 3 ಸಾವಿರ ಕ್ಯೂಸೆಕ್ಸ್ ಕಾವೇರಿ ನೀರು ಬಿಡಬೇಕು ಎಂದು ಆದೇಶ ನೀಡಿದ ನಂತರ ಮೇಲಿನಂತೆ ಮಾದೇಗೌಡರು ಪ್ರತಿಕ್ರಿಯಿಸಿದ್ದಾರೆ. [ಸೆ. 21ರಿಂದ 30ರ ವರೆಗೆ ಕಾವೇರಿ ನೀರು ಬಿಡಿ: ಶಶಿಶೇಖರ್]

ಕರ್ನಾಟಕದ ರೈತರ ಹಿತರಕ್ಷಣೆ ಕಾಪಾಡುವಲ್ಲಿ, ಸುಪ್ರೀಂಕೋರ್ಟಿನಲ್ಲಿ, ಕಾವೇರಿ ನ್ಯಾಯಾಧೀಕರಣದಲ್ಲಿ ಸಮರ್ಥವಾದ ಮಂಡಿಸುವಲ್ಲಿ ಕರ್ನಾಟಕ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ. ಇನ್ನು ನಮಗೆ ಉಳಿದಿರುವ ಒಂದೇ... ಅದು ಹೋರಾಟ ಹೋರಾಟ ಹೋರಾಟ ಎಂದು ಅವರು ಖಾರವಾಗಿ ನುಡಿದರು.
ಉಸ್ತುವಾರಿ ಸಮಿತಿ ಆದೇಶ ನೀಡಿದೆಯೆಂದು ನಾವು ನೀರು ಬಿಡುವುದಕ್ಕಾಗುತ್ತಾ? ಕರ್ನಾಟಕ ನೀರು ಬಿಡುತ್ತಿದ್ದರೆ ನಾವು ಸುಮ್ಮನೆ ಕೈಕಟ್ಟಿ ಕುಳಿತುಕೊಂಡಿರಲು ಆಗುತ್ತಾ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಮಾದೇಗೌಡರ ನೇತೃತ್ವದಲ್ಲಿ ಮಂಡ್ಯದಲ್ಲಿ ರೈತರು ಸತತವಾಗಿ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. [ವದಂತಿಗೆ ಕಿವಿ ಕೊಡಬೇಡಿ, ಸೆ.20ರಂದು ಬೆಂಗಳೂರು ಬಂದ್ ಇಲ್ಲ]

ಮಂಡ್ಯದಲ್ಲಿ ಹೋರಾಟ ತೀವ್ರ : ಕಾವೇರಿ ಉಸ್ತುವಾರಿ ಸಮಿತಿಯ ಆದೇಶ ಹೊರಬೀಳುತ್ತಿದ್ದಂತೆ ಮಂಡ್ಯದಲ್ಲಿ ಹೋರಾಟ ಮತ್ತಷ್ಟು ಚುರುಕಾಗಿದೆ. ಕರ್ನಾಟಕ ಸರಕಾರಕ್ಕೆ ಮತ್ತು ತಮಿಳುನಾಡಿಗೆ ಧಿಕ್ಕಾರ ಕೂಗುತ್ತ ಜನರು ಸಂಜಯ ವೃತ್ತದಲ್ಲಿ ರಸ್ತೆಗಿಳಿದಿದ್ದು, ಮೈಸೂರು-ಬೆಂಗಳೂರು ರಸ್ತೆಗೆ ತಡೆಯೊಡ್ಡಿದ್ದಾರೆ. ಯಾವ ವಾಹನವನ್ನೂ ದಾಟಲು ಪ್ರತಿಭಟನಾಕಾರರು ಬಿಡುತ್ತಿಲ್ಲ. [ಜನರ ಅಭಿಪ್ರಾಯ]












Click it and Unblock the Notifications