ನಟಿ ರಮ್ಯಾಗೆ ಅಂಚೆ ಮೂಲಕ ಬಾಗಿನ ಕಳಿಸಿದ ಬಿಜೆಪಿ ಕಾರ್ಯಕರ್ತರು
ಮಂಡ್ಯ, ಆಗಸ್ಟ್ 24: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಬಾಲಿಶವಾಗಿ ಮಾತನಾಡಿದ ಮಾಜಿ ಸಂಸದೆ, ನಟಿ ರಮ್ಯಾ ವಿರುದ್ಧ ಗರಂ ಆಗಿರುವ ಬಿಜೆಪಿ ಕಾರ್ಯಕರ್ತರು ಮಕ್ಕಳ ಆಟಿಕೆ ಪ್ರದರ್ಶಿಸಿ, ಬಳಿಕ ಅವರಿಗೆ ಬಾಗಿನ ರವಾನಿಸಿದ್ದಾರೆ.
ರಮ್ಯಾ ಅವರು ಇತ್ತೀಚೆಗೆ, ' ಪ್ರಧಾನಿ ನರೇಂದ್ರ ಮೋದಿಯವರು ಅಸ್ಸಾಂ, ಗುಜರಾತ್ ಅಥವಾ ಬಿಹಾರ ನೆರೆ ಸಂತ್ರಸ್ತರನ್ನು ಭೇಟಿಯಾಗಿ ಸಾಂತ್ವನ ಹೇಳಿದ ಫೋಟೋವನ್ನು ತೋರಿಸಿದಲ್ಲಿ 25 ಸಾವಿರ ರೂ. ಬಹುಮಾನ ಕೊಡುವುದಾಗಿ' ಘೋಷಿಸಿದ್ದರು. ರಮ್ಯಾ ಅವರ ಈ ಹೇಳಿಕೆ ಬಿಜೆಪಿ ಕಾರ್ಯಕರ್ತರಲ್ಲಿ ಆಕ್ರೋಶ ಹುಟ್ಟುಹಾಕಿದ್ದು, ರಮ್ಯಾ ಅವರಿನ್ನೂ ಹುಡುಗಾಟದ ಹುಡುಗಿ ಎಂದು ಬಿಜೆಪಿ ಕಾರ್ಯಕರ್ತರು ಅವರ ವಿರುದ್ಧ ಹರಿಹಾಯ್ದಿದ್ದಾರೆ

ಮಂಡ್ಯದ ಪ್ರಧಾನ ಆಂಚೆ ಕಚೇರಿ ಬಳಿ ಜಮಾಯಿಸಿದ ಬಿಜೆಪಿ ಪ್ರತಿಭಟನಾಕಾರರು, ಮಕ್ಕಳ ಆಟಿಕೆಗಳು, ಚಿಕ್ಕ ಮಗುವಿನ ಲಂಗಾ ಬ್ಲೌಸ್ ನ್ನು ಪ್ರದರ್ಶಿಸಿ, ರಮ್ಯಾ ಅವರಿಗೆ ಬುದ್ಧಿ ಬೆಳೆದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ಹಾನಿಗೊಳಗಾದ ರಾಜ್ಯದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಸಂಬಂಧಿಸಿದ ಇಲಾಖೆಯಿಂದಲೂ ವರದಿ ಕೇಳಿದ್ದಾರೆ. ಈ ಬಗ್ಗೆ ವಿಚಾರ ತಿಳಿಯದ ರಮ್ಯಾ ಬಾಲಿಶ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ದೂರಿದರು.
ಪ್ರವಾಹಕ್ಕೀಡಾಗಿರುವ ರಾಜ್ಯಗಳಲ್ಲಿ ನೀವು ಅಥವಾ ನಿಮ್ಮ ಪಕ್ಷದ ವರಿಷ್ಠರು ಎಷ್ಟು ಬಾರಿ ಪ್ರವಾಸ ಮಾಡಿದ್ದೀರಿ ಎಂದು ಪ್ರಶ್ನಿಸಿದರಲ್ಲದೆ, ಇಂತಹ ಬಾಲಿಶ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸುವಂತೆ ಒತ್ತಾಯಿಸಿದರು. ನಂತರ ಅಂಚೆ ಮೂಲಕ ಅವರ ವಿಳಾಸಕ್ಕೆ ಬಾಗಿನ ಕಳುಹಿಸಿದರು!












Click it and Unblock the Notifications