ಅಂಬರೀಶಣ್ಣ ರಸ್ತೆ ಬೇಡ, ನೀರು ಬೇಡ, ನೀವು ಬನ್ನಿ ಸಾಕು...
ಮಂಡ್ಯ, ಸೆಪ್ಟೆಂಬರ್ 15: ತಮಿಳುನಾಡಿಗೆ ಕಾವೇರಿ ನೀರು ಹರಿಸಲು ನಿರ್ಧರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾವೇರಿ ಚಳವಳಿ ವೇಳೆ ಜಿಲ್ಲೆಯತ್ತ ಮುಖ ಮಾಡದ ಅಂಬರೀಶ್ ವಿರುದ್ಧ ಶ್ರೀರಂಗಪಟ್ಟಣದ ಬಿಜೆಪಿ ಕಾರ್ಯಕರ್ತರು ಗುರುವಾರ ವ್ಯಂಗ್ಯ' ಚಳವಳಿ ನಡೆಸಿದರು.
ರೈತರಿಗೆ ಆತ್ಮಹತ್ಯೆ ಭಾಗ್ಯ, ನೀರು ಕೇಳಿದವರಿಗೆ ಬಾಸುಂಡೆ ಭಾಗ್ಯ, ಕಾವೇರಿಗಾಗಿ ಹೋರಾಡಿದವರಿಗೆ ಗುಂಡಿನ ಭಾಗ್ಯ, ನಿಷ್ಠಾವಂತರಿಗೆ ನೇಣಿನ ಭಾಗ್ಯ ಕರುಣಿಸಿರುವ ಸಿದ್ದರಾಮಯ್ಯ ಅವರ ನಿಲುವನ್ನು ಪ್ರಬಲವಾಗಿ ಖಂಡಿಸಿದರು.[ತಮಿಳುನಾಡಿಗೆ ನೀರು ಬಿಡುವುದೊಂದೇ ದಾರಿ: ರಮೇಶ್ ಕುಮಾರ್]
ಕಾವೇರಿ ನದಿ ನೀರು ಹಂಚಿಕೆಯಲ್ಲಿ ಸಮರ್ಥ ವಾದ ಮಂಡಿಸುವಲ್ಲಿ ಪ್ರತಿ ಹಂತದಲ್ಲೂ ಸೋಲಿನ ಭಾಗ್ಯವನ್ನು ಕರ್ನಾಟಕಕ್ಕೆ ಕರುಣಿಸುತ್ತಾ ಜನರ ಕುಡಿಯುವ ನೀರನ್ನೂ ತಮಿಳುನಾಡಿಗೆ ಹರಿಸಿದ್ದಾರೆ. ಕಾವೇರಿ ಕಣಿವೆಯ ಜನಹಿತ ಕಾಪಾಡುವಲ್ಲಿ ವಿಫಲರಾದ ಸಿದ್ದರಾಮಯ್ಯ ಅಧಿಕಾರಕ್ಕೆ ಅಂಟಿಕೊಂಡು ರೈತಾಪಿ ವರ್ಗದವರನ್ನು ಬಲಿ ಕೊಡುತ್ತಿದ್ದಾರೆ ಎಂದು ದೂರಿದರು.

'ಅಂಬರೀಶಣ್ಣ ಪ್ಲೀಸ್ ಮಂಡ್ಯಕ್ಕೆ ಬನ್ನಿ': ಕಾವೇರಿ ಹೋರಾಟ ಪ್ರಾರಂಭವಾದಾಗಿನಿಂದ ಇತ್ತ ತಿರುಗಿ ನೋಡದ ಮಾಜಿ ಸಚಿವ ಅಂಬರೀಶ್ ವಿರುದ್ಧ ಬಂಡೆದ್ದಿರುವ ಪ್ರತಿಭಟನಾಕಾರರು, ಅಂಬರೀಶಣ್ಣ ಪ್ಲೀಸ್ ಮಂಡ್ಯಕ್ಕೆ ಬನ್ನಿ, ನಾವು ನಿಮ್ಮನ್ನು ನೀರು ಕೇಳಲ್ಲ, ಬೆಳೆಯ ನಷ್ಟಕ್ಕೆ ಪರಿಹಾರ ಕೇಳಲ್ಲ, ಮೈಶುಗರ್ ಆರಂಭ ಮಾಡಿಸಿ ಎಂದು ಕೇಳಲ್ಲ, ರಸ್ತೆ ರಿಪೇರಿ ಮಾಡಿಸಿ ಎಂದು ಕೇಳಲ್ಲ, ಮಂಡ್ಯದ ಜನತೆ ನಿಮ್ಮನ್ನು ನೋಡಲು ತುಂಬಾ ಆಸೆಯಾಗಿದೆ, ಎಲ್ಲಿದ್ದರೂ ಪ್ಲೀಸ್ - ಪ್ಲೀಸ್ ಬನ್ನಿ' ಎಂದು ವ್ಯಂಗ್ಯವಾಡಿದ್ದಾರೆ.
ಚಳವಳಿಯಲ್ಲಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಮಂಜುನಾಥ್, ಪಾಂಡವಪುರ ತಾಲೂಕು ಅಧ್ಯಕ್ಷ ರಮೇಶ್, ಮುಖಂಡರಾದ ಕೆ.ಬಲರಾಂ, ಸಿ.ಟಿ.ಮಂಜುನಾಥ್, ಕೃಷ್ಣ ಇತರರಿದ್ದರು.[ಶಾಂತಿ ಕಾಪಾಡಲು ಅರ್ಜಿ, ವಿಚಾರಣೆಯಿಂದ ಹಿಂದೆ ಸರಿದ ಜಡ್ಜ್]
ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೈತ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ರೈಲು ನಿಲ್ದಾಣದ ಆವರಣದಲ್ಲಿ ಗುರುವಾರ ನಡೆದಿದೆ.
ತಾಲೂಕಿನ ಮಂಗಲ ಗ್ರಾಮದ ರಾಜು ಎಂಬುವರ ಪುತ್ರ ಸುರೇಶ್ (30) ಆತ್ಮಹತ್ಯೆಗೆ ಯತ್ನಿಸಿದ ರೈತ. ನಗರದ ರೈಲು ನಿಲ್ದಾಣದ ಮುಖ್ಯ ದ್ವಾರದ ಬಳಿ ಬಂದು, ತಾನು ತಂದಿದ್ದ ಬಾಟಲಿ ತೆಗೆದು ವಿಷ ಸೇವಿಸಿ, ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಘೋಷಣೆ ಕೂಗಿ ಕುಸಿದು ಬಿದ್ದಿದ್ದಾನೆ.[ಅಂಬರೀಶಣ್ಣ...ಎಲ್ಲೇ ಇದ್ದರೂ ದಯವಿಟ್ಟು ಮಂಡ್ಯಗೆ ಬನ್ನಿ, ಪ್ಲೀಸ್..]
ರೈಲು ನಿಲ್ದಾಣದ ಆವರಣದಲ್ಲಿ ಕರ್ತವ್ಯನಿರತರಾಗಿದ್ದ ಪೊಲೀಸರು ತಕ್ಷಣ ಆತನನ್ನು ಆಟೋವೊಂದರಲ್ಲಿ ಮಿಮ್ಸ್ ಗೆ ಸಾಗಿಸಿದರು. ತೀವ್ರವಾಗಿ ಅಸ್ವಸ್ಥನಾದ ಸುರೇಶ್ ಗೆ ಚಿಕಿತ್ಸೆ ನೀಡಲಾಯಿತು.












Click it and Unblock the Notifications