ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನೀರು, ಅವೈಜ್ಞಾನಿಕ ಕಾಮಗಾರಿಯೇ ಕಾರಣ: ಸಂಸದೆ ಸುಮಲತಾ
ಮಂಡ್ಯ, ಸೆಪ್ಟೆಂಬರ್ 1 : ಇತ್ತೀಚೆಗೆ ಸುರಿದ ಭಾರೀ ಮಳೆಗೆ ಮೈಸೂರು-ಬೆಂಗಳೂರು ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಈ ಭಾಗದ ರೈತರು ಮತ್ತು ಜನಸಾಮಾನ್ಯರು ಸಂಕಷ್ಟ ಅನುಭವಿಸುವಂತಾಗಿದೆ ಇದಕ್ಕೆ ಹೆದ್ದಾರಿ ಪ್ರಾಧಿಕಾರದ ಬೇಜಾವಾಬ್ದಾರಿಯುತ ಅಧಿಕಾರಿಗಳೇ ಕಾರಣ ಎಂದು ಸಂಸದೆ ಸುಮಲತಾ ಅಂಬರೀಶ್ ಆರೋಪಿಸಿದ್ದಾರೆ.
ಸುದ್ಧಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, "ಮಂಡ್ಯ ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಹಿಂದೆಯೂ ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಿದ್ದಿದೆ. ಆದರೆ ಈ ಪರಿಯಲ್ಲಿ ಎಂದಿಗೂ ನಷ್ಟ ಅನುಭವಿಸಿರಲಿಲ್ಲ. ಅದರಲ್ಲೂ ಮುಖ್ಯವಾಗಿ ಬೆಂಗಳೂರು-ಮೈಸೂರು ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಅಕ್ಕಪಕ್ಕದ ರೈತರು ಮತ್ತು ಜನಸಾಮಾನ್ಯರು ಸಂಕಷ್ಟ ಅನುಭವಿಸುವಂತಾಗಿದೆ," ಎಂದು ಹೇಳಿದರು.
ಹೆದ್ದಾರಿ ನಿರ್ಮಾಣದಿಂದಾಗಿ ಲಕ್ಷಾಂತರ ಮಂದಿಗೆ ಅನುಕೂಲವಾಗಲಿದೆ. ಆದರೆ ಹೆದ್ದಾರಿ ನಿರ್ಮಾಣದ ವೇಳೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಕೈಗೊಳ್ಳದೆ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸಿದ್ದರಿಂದಾಗಿ ಈ ರೀತಿಯ ಅವಘಡಗಳಿಗೆ ಕಾರಣವಾಗಿದೆ ಎಂದು ದೂರಿದರು.
ಇನ್ನೂ ಬೆಂಗಳೂರಿನಲ್ಲಿ ಮಳೆಗೆ ಅಂಡರ್ಪಾಸ್ನಲ್ಲಿ ನಿಂತರೂ 500 ರೂ. ದಂಡ
ಹೆದ್ದಾರಿ ನಿರ್ಮಾಣದ ಕಾಮಗಾರಿಯಲ್ಲಿ ಹಣ ಉಳಿತಾಯ ಮಾಡುವ ಸಲುವಾಗಿ ಇಂಜಿನಿಯರ್ಗಳು ಕೆಲವು ಅವೈಜ್ಞಾನಿಕ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಕೆಳ ಮತ್ತು ಮೇಲು ಸೇತುವೆಗಳನ್ನು ಸರಿಯಾಗಿ ನಿರ್ಮಿಸಿಲ್ಲ. ಈ ಹಿಂದೆ ರಸ್ತೆ ಬದಿಯಲ್ಲಿ ಚರಂಡಿಗಳನ್ನು ನಿರ್ಮಿಸಿದ್ದು, ಹೆದ್ದಾರಿಯನ್ನು ಎತ್ತರದಲ್ಲಿ ಮಾಡಿ ಮಳೆ ಬಿದ್ದರೆ ಎರಡೂ ಬದಿಯಲ್ಲಿ ನೀರು ಸರಾಗವಾಗಿ ಹೋಗುವಂತೆ ಮಾಡಲಾಗಿತ್ತು. ಅಂತಹ ಎಲ್ಲ ವ್ಯವಸ್ಥೆಯನ್ನೂ ಹಾಳುಗೆಡವಿದ ಅಧಿಕಾರಿಗಳು ಮತ್ತು ಇಂಜಿನಿಯರುಗಳ ಬೇಜವಾಬ್ದಾರಿತನದಿಂದಾಗಿ ನಷ್ಟ ಅನುಭವಿಸುವಂತಾಗಿದೆ ಎಂದು ಕಿಡಿಕಾರಿದರು.
ನನ್ನ ಪತ್ರಕ್ಕೆ ಸಮರ್ಪಕ ಉತ್ತರವಿಲ್ಲ
ಹೆದ್ದಾರಿ ಕಾಮಗಾರಿ ವೇಳೆ ನಾನು ಈ ಭಾಗದಲ್ಲಿ ಮೂರ್ನಾಲ್ಕು ಬಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಅಧಿಕಾರಿಗಳಿಂದ ಮಾಹಿತಿ ಪಡೆದು ಸಮಪರ್ಕವಾಗಿಲ್ಲದ ಕಡೆಗೆ ಸರಿಪಡಿಸುವಂತೆ ಸೂಚಿಸಿದ್ದೇನೆ. ದಿಶಾ ಸಭೆಯಲ್ಲೂ ಸಹ ಈ ಬಗ್ಗೆ ಪ್ರಸ್ತಾಪಿಸಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳುವಳಿಕೆ ನೀಡಿದ್ದೇನೆ. ಇದರೊಂದಿಗೆ ಪ್ರಾಧಿಕಾರಕ್ಕೆ ಸುಮಾರು 20 ಬಾರಿ ಪತ್ರಗಳನ್ನು ಬರೆದು ಸರಿಪಡಿಸುವಂತೆ ಮನವಿ ಮಾಡಿದ್ದೇನೆ. ಒಂದಕ್ಕೂ ಸಮರ್ಪಕವಾದ ಉತ್ತರವನ್ನು ನೀಡದ ಅಧಿಕಾರಿಗಳ ನಿರ್ಲಕ್ಷ್ಯತನ ಎದ್ದು ತೋರುತ್ತದೆ ಎಂದು ಹೇಳಿದರು.
ರೈತರು, ಜನಸಾಮಾನ್ಯರಿಗೆ ಸಂಕಷ್ಟ
ಹೆದ್ದಾರಿ ಕಾಮಗಾರಿಗಾಗಿ ಅಲ್ಲಲ್ಲಿ ಗುಂಡಿಗಳನ್ನು ತೋಡಿದ್ದಾರೆ. ಮೇಲು ಸೇತುವೆ ಕೆಳಗೆ ಸರ್ವಿಸ್ ರಸ್ತೆಗಳ ಬದಿಯಲ್ಲಿ ಮಳೆ ನೀರು ಸರಾಗವಾಗಿ ಹರಿದುಹೋಗಲು ಅವೈಜ್ಞಾನಿಕವಾಗಿ ವ್ಯವಸ್ಥೆ ಮಾಡಲಾಗಿದೆ. ಒಮ್ಮೆಲೆ ಭಾರೀ ಪ್ರಮಾಣದ ಮಳೆ ಬಿದ್ದು, ನೀರು ಸರಿಯಾಗಿ ಹರಿಯಲು ಅವಕಾಶವಿಲ್ಲದ ಕಾರಣ ಎಲ್ಲೆಂದರಲ್ಲಿ ಹರಿಯುತ್ತಿದೆ. ಮಳೆ ನೀರು ಹರಿಯುವ ವೇಳೆ ಎಲ್ಲವನ್ನೂ ಅಪೋಷಣ ಮಾಡಿಕೊಂಡು ಬೆಳೆ, ರಸ್ತೆ, ಎಲ್ಲವನ್ನೂ ತನ್ನೊಂದಿಗೆ ತೆಗೆದುಕೊಂಡು ಹರಿದಿದೆ ಎಂದು ದೂರಿದರು.
ಮಳೆಯಿಂದಾಗಿ ಸಾಕಷ್ಟು ಬೆಳೆ ನಷ್ಟವಾಗಿದೆ. ಕೆರೆ-ಕಟ್ಟೆಗಳು ತುಂಬಿ ಹರಿದಿವೆ. ಇದರಿಂದಾಗಿ ಸರಕಾರಕ್ಕೆ ಕೋಟ್ಯಂತರ ರೂ. ನಷ್ಟವಾಗಿದೆ. ಇದನ್ನು ಭರಿಸುವವರು ಯಾರು, ಸಾರ್ವಜನಿಕರ ತೆರಿಗೆ ಹಣದಲ್ಲಿ ಅಭಿವೃದ್ಧಿ ಕಾರ್ಯಕ್ರಮ ಮಾಡಲಾಗುತ್ತಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ರೈತರು, ಜನಸಾಮಾನ್ಯರು ಸಂಕಷ್ಟಪಡುವಂತಾಗಿದೆ. ಇದಕ್ಕೆ ಯಾವ ಅಧಿಕಾರಿ ಮೇಲೆ ನೀವು ಕ್ರಮ ಕೈಗೊಳ್ಳುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಾಪ್ ಸಿಂಹಗೆ ತಿರುಗೇಟು
ಈ ಬಗ್ಗೆ ಉಸ್ತುವಾರಿ ಸಚಿವರಿಗೆ ಎಲ್ಲವನ್ನೂ ತಿಳಿಸಿ ಮನವಿ ಮಾಡಿದ್ದೇನೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಭೆ ಕರೆಯುಂತೆ ಒತ್ತಾಯಿಸಿದ್ದೇನೆ. ಅವರೂ ಸಹ ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ. ಅಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.
ಬೇರೆ ಜನಪ್ರತಿನಿಧಿ ಹೇಳುವ ವಿಚಾರಕ್ಕೆ ನಾನು ಉತ್ತರ ಕೊಡುವುದಕ್ಕೆ ಹೋಗುವುದಿಲ್ಲ. ಅವರು ಏನು ಹೇಳುತ್ತಾರೋ ಅವರಿಗೆ ಬಿಟ್ಟ ವಿಚಾರ. ಹೆದ್ದಾರಿ ಕಾಮಗಾರಿಯಲ್ಲಿ ಲೋಪ ಇರುವುದರಿಂದಲೇ ನನ್ನ ಪತ್ರಕ್ಕೆ ಉತ್ತರ ಕೊಡಲಿಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಪ್ರತಾಪಸಿಂಹ ಅವರ ಹೇಳಿಕೆಗೆ ತಿರುಗೇಟು ನೀಡಿದರು.
ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಪತ್ರ
ಹೆದ್ದಾರಿ ಕಾಮಗಾರಿಯಿಂದ 16 ವಿವಿಧ ಸ್ಥಳಗಳಲ್ಲಿ ಆಗಿರುವ ಎಡವಟ್ಟಿನ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದು ತಿಳಿಸಲಾಗುವುದು. ಅವರಿಂದ ಉತ್ತರ ಬಂದ ನಂತರ ಮುಂದಿನ ಕ್ರಮ ಅನುಸರಿಸಲಾಗುವುದು. ಎಲ್ಲವನ್ನೂ ಸರಿಪಡಿಸದಿದ್ದಲ್ಲಿ ಇದನ್ನು ಇಲ್ಲಿಗೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.