ಬೋನಿನಲ್ಲಿ ಬಂಧಿಯಾದ ಚಿರತೆ: ತಾಯಿಯ ಮಡಿಲು ಸೇರಿದ ಮರಿಗಳು!
ಮಂಡ್ಯ, ನವೆಂಬರ್ 13: ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಳ್ಳನಕೆರೆ ಗ್ರಾಮದಲ್ಲಿ ಮರಿಗಳನ್ನು ಹುಡುಕಿಕೊಂಡು ಬಂದ ತಾಯಿ ಚಿರತೆ ಬೋನಿಗೆ ಬೀಳುವ ಮೂಲಕ ಗ್ರಾಮಸ್ಥರು ನೆಮ್ಮದಿಯುಸಿರು ಬಿಟ್ಟಿದ್ದು, ದೂರವಾಗಿದ್ದ ಮರಿಗಳು ಮತ್ತೆ ತಾಯಿಯನ್ನು ಸೇರುವಂತಾಗಿದೆ.
ಕಳ್ಳನಕೆರೆ ಗ್ರಾಮದ ದೇವರಾಜು ಎಂಬುವರ ಜಮೀನಿನಲ್ಲಿ ಕಬ್ಬು ಕಟಾವು ಮಾಡುವ ವೇಳೆ ಕಳೆದ ಎರಡು ದಿನಗಳ ಹಿಂದೆ ಮೂರು ಮರಿಗಳು ಚಿರತೆ ಪತ್ತೆಯಾಗಿದ್ದವು. ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ತಾಯಿ ಚಿರತೆ ಸುತ್ತಮುತ್ತಲೇ ಅಡ್ಡಾಡುತ್ತಿರಬಹುದೆಂಬ ಸಂಶಯದ ಮೇರೆಗೆ ಮರಿಗಳನ್ನು ಹುಡುಕಿಕೊಂಡು ಬರುವ ನಂಬಿಕೆಯಿಂದ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಚಿರತೆ ಮರಿಗಳು ಪತ್ತೆಯಾದ ಕಬ್ಬಿನ ಗದ್ದೆಯ ಪೊದೆಯ ಬಳಿ ಬೋನಿಟ್ಟು ಕಾರ್ಯಾಚರಣೆ ನಡೆಸಿದ್ದರು.

ಬೋನಿನೊಳಗೆ ಮರಿಗಳನ್ನು ಇಟ್ಟಿದ್ದರಿಂದ ಶನಿವಾರ(ನ.11) ರಾತ್ರಿ ತನ್ನ ಮರಿಗಳಿಗೆ ಹಾಲು ಕುಡಿಸುವ ಸಲುವಾಗಿ ಕಬ್ಬಿನ ಗದ್ದೆ ಬಳಿಯಿಟ್ಟಿದ್ದ ಬೋನಿನೊಳಗೆ ಬಂದಿದ್ದ ತಾಯಿ ಚಿರತೆ ಸೆರೆಯಾಗಿದೆ. ಚಿರತೆ ಬೋನಿಗೆ ಬಿದ್ದಿರುವ ವಿಚಾರ ಗ್ರಾಮಸ್ಥರಿಗೆ ತಿಳಿದ ಮೇರೆಗೆ ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದು ಅದರಂತೆ ತಾಲೂಕು ವಲಯ ಅರಣ್ಯ ಇಲಾಖೆಯ ಅಧಿಕಾರಿ ಜಿ.ರವೀಂದ್ರ, ಉಪ ವಲಯ ಅರಣ್ಯ ಅಧಿಕಾರಿಯಾದ ರಾಘವೇಂದ್ರ, ಅರಣ್ಯ ರಕ್ಷಣಾಧಿಕಾರಿ ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಧನಂಜಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅನಂತರಾಮು, ಶಿವಸ್ವಾಮಿ, ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ, ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಕಾವೇರಿ ವನ್ಯಜೀವಿ ಅರಣ್ಯ ಸಂರಕ್ಷಣಾ ಪ್ರದೇಶವಾದ ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಎರಡು ದಿನಗಳ ಹಿಂದೆ ಕಬ್ಬಿನ ಗದ್ದೆಯಲ್ಲಿ ಮರಿ ಪತ್ತೆಯಾಗಿದ್ದರಿಂದ ತಾಯಿ ಚಿರತೆಯೂ ಇದೇ ವ್ಯಾಪ್ತಿಯಲ್ಲಿ ಅಡ್ಡಾಡುತ್ತಿದೆ ಎಂಬುದನ್ನು ತಿಳಿದು ಗ್ರಾಮಸ್ಥರು ಭಯ ಭೀತರಾಗಿದ್ದರು. ಅಲ್ಲದೆ ಈ ಚಿರತೆ ಕೆಲವು ಸಮಯಗಳಿಂದ ಅಲ್ಲಲ್ಲಿ ಕಾಣಿಸಿಕೊಂಡು ಜಾನುವಾರುಗಳ ಮೇಲೆಯೂ ದಾಳಿ ಮಾಡಿತ್ತು. ಇದೀಗ ಬೋನಿಗೆ ಬಿದ್ದಿರುವ ಕಾರಣ ಇಲ್ಲಿನ ಜನ ನೆಮ್ಮದಿಯುಸಿರು ಬಿಡುವಂತಾಗಿದೆ.












Click it and Unblock the Notifications