ಮಂಡ್ಯ: ಕಬ್ಬಿನ ಗದ್ದೆಯಲ್ಲಿ ಭಾರೀ ಗಾತ್ರದ ಹೆಬ್ಬಾವು ಸೆರೆ
ಮಂಡ್ಯ, ಅಕ್ಟೋಬರ್ 12 : ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕುಂದನಹಳ್ಳಿ ಗ್ರಾಮವೊದಂರ ಹೊಲದಲ್ಲಿ ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅದನ್ನು ಸೆರೆಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ.
ಕುಂದನಹಳ್ಳಿ ಗ್ರಾಮದ ನಿವಾಸಿ ದಾಸೇಗೌಡ ಎಂಬುವರ ಜಮೀನಿನಲ್ಲಿ ಕಬ್ಬು ಕಟಾವು ಮಾಡುತ್ತಿದ್ದ ಸಂದರ್ಭದಲ್ಲಿ ಸುಮಾರು 10ಅಡಿ ಉದ್ದವಿರುವ 30ರಿಂದ 40ಕೆ.ಜಿ. ತೂಕದ ಹೆಬ್ಬಾವು ಕಾರ್ಮಿಕರಿಗೆ ಕಾಣಿಸಿಕೊಂಡಿದ್ದು, ಕಾರ್ಮಿಕರು ಬೆಚ್ಚಿ ಬಿದ್ದಿದ್ದಾರೆ.

ಈ ವೇಳೆ ಎಚ್ಚೆತ್ತುಕೊಂಡ ಜಮೀನಿನ ಮಾಲೀಕ ರೈತ ದಾಸೇಗೌಡ ಅವರು ಉರಗ ತಜ್ಞ ಸ್ನೇಕ್ ಮುನ್ನಾ ಅವರಿಗೆ ದೂರವಾಣಿ ಕರೆ ಮಾಡಿ ಸ್ಥಳಕ್ಕೆ ಕರೆಯಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಸ್ನೇಕ್ ಮುನ್ನಾ ಅವರು ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಪಟ್ಟಣದ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದರು.
ಹಾವನ್ನು ತಮ್ಮ ವಶಕ್ಕೆ ಪಡೆದ ಅರಣ್ಯಾಧಿಕಾರಿ ರವೀಂದ್ರ, ಉಪಸಂರಕ್ಷಣಾಧಿಕಾರಿ ರಾಘವೇಂದ್ರ ಅವರು ಪ್ರತಿಕ್ರಿಯಿಸಿ, ತಮ್ಮ ಪ್ರಾಣವನ್ನು ಲೆಕ್ಕಿಸದೆ ಹಾವನ್ನು ಸುರಕ್ಷಿತವಾಗಿ ಹಿಡಿಯುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಜತೆಗೆ ವನ್ಯಜೀವಿಗಳ ಸಂತತಿಯನ್ನು ಉಳಿಸಲು ಪ್ರಾಮಾಣಿಕ ಕಾರ್ಯನಿರ್ವಹಿಸುತ್ತಿರುವ ಸ್ನೇಕ್ ಮುನ್ನಾ ಅವರ ಕಾರ್ಯವನ್ನು ಶ್ಲಾಘಿಸಿದರು.












Click it and Unblock the Notifications