ಕರ್ನಾಟಕದಲ್ಲಿ ಕೊರೊನಾ ವೈರಸ್; ಮಂಡ್ಯ ಜಿಲ್ಲೆಯಲ್ಲಿ ಪರಿಸ್ಥಿತಿ ಹೇಗಿದೆ?
ಮಂಡ್ಯ, ಮಾರ್ಚ್ 22: ವಿದೇಶದಿಂದ ಆಗಮಿಸಿದ ಒಟ್ಟು 112 ಜನರಿಗೆ ಗೃಹಬಂಧನದಲ್ಲಿರಿಸಿ ಆರೋಗ್ಯ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದರು.
ಈ ಬಗ್ಗೆ ಮಾಹಿತಿ ನೀಡಿದ ಅವರು, "ಜಿಲ್ಲೆಗೆ ಆಗಮಿಸಿರುವ 112 ಜನರು 37 ದೇಶಗಳಿಂದ ಬಂದವರಾಗಿದ್ದಾರೆ. ದುಬೈನಿಂದ 19 ಜನರು, ಸೌದಿ ಅರೇಬಿಯಾದಿಂದ ಬಂದ 16 ಜನರಲ್ಲಿ 12 ಜನರು ಮೆಕ್ಕಾ, ಜರ್ಮನಿಯಿಂದ 13, ಸಿಂಗಾಪುರ, ಮಲೇಷಿಯಾ, ಆಸ್ಟ್ರೇಲಿಯಾದಿಂದಲೂ ಬಂದಿದ್ದಾರೆ" ಎಂದು ವಿವರಿಸಿದರು.
ಕೊರೊನಾ ವೈರಸ್ ಲಕ್ಷಣಗಳು ಕಂಡುಬಂದ ಇಬ್ಬರನ್ನು ಮಿಮ್ಸ್ ನಲ್ಲಿ ತೆರೆದಿರುವ ವಿಶೇಷ ವಾರ್ಡ್ ನಲ್ಲಿಟ್ಟು ಚಿಕಿತ್ಸೆ ನೀಡಲಾಗಿದೆ. ಇಬ್ಬರ ರಕ್ತ ಮತ್ತು ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿ ವರದಿಯಲ್ಲಿ ನೆಗೆಟಿವ್ ಬಂದಿದೆ.

ಶುಕ್ರವಾರ (ಮಾ.21) ವಿದೇಶದಿಂದ ಬಂದ 24 ವರ್ಷದ ಯುವಕ ಮಂಡ್ಯದ ಹೊಸಹಳ್ಳಿ ಬಡಾವಣೆಯವರಾಗಿದ್ದಾರೆ. ಅವರು 2018ರಲ್ಲಿ ಎಂ.ಎಸ್. ಅಧ್ಯಯನಕ್ಕಾಗಿ ಜರ್ಮನಿಗೆ ಹೋಗಿದ್ದರು. ಅವರು ಈಗಾಗಲೇ ವಿಮಾನ ನಿಲ್ದಾಣದಲ್ಲಿ ಪರಿಶೀಲನೆಗೆ ಒಳಗಾಗಿದ್ದಾರೆ. ಅವರಿಗೆ ಗಂಟಲು ಕೆರೆತ ಮಾತ್ರವಿರುವುದು ಗೊತ್ತಾಗಿದೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಸೂಚಿಸಿ ಕಳುಹಿಸಿದ್ದರು. ಅದರಂತೆ ಅವರ ರಕ್ತ, ಕಫದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಕೊರೋನಾ ವೈರಸ್ ಹರಡಲು ಗರಿಷ್ಠ 12 ಗಂಟೆಗಳ ಕಾಲ ಬೇಕು. ಶೀತ ಹೆಚ್ಚಿರುವ ಜಾಗದಲ್ಲಿ 3 ರಿಂದ 4 ಗಂಟೆಯಾದರೂ ಅವಶ್ಯಕತೆ ಇದೆ. ಆದ್ದರಿಂದ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡದಂತೆ ತಡೆಯುವ ಉದ್ದೇಶದಿಂದ ಜನತಾ ಕರ್ಫ್ಯೂ ಜಾರಿಗೊಳಿಸಿದೆ ಎಂದು ಮಾಹಿತಿ ನೀಡಿದರು.












Click it and Unblock the Notifications