ಮಡಿಕೇರಿಯಲ್ಲಿ ಕಾರು,ಲಾರಿ ಮುಖಾಮುಖಿ ಡಿಕ್ಕಿ: ಮಹಿಳೆ ಸಾವು
ಮಡಿಕೇರಿ, ಜೂನ್ 13: ಮುಂದೆ ಹೋಗುತ್ತಿದ್ದ ಲಾರಿಯನ್ನು ಹಿಂದಿಕ್ಕುವ ವೇಳೆ ಎದುರಿನಿಂದ ಬಂದ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮಹಿಳೆ ಸಾವನ್ನಪ್ಪಿ, ಚಾಲನೆ ಮಾಡುತ್ತಿದ್ದ ಚಾಲಕ ಗಂಭೀರ ಗಾಯಗೊಂಡ ಘಟನೆ ಕುಶಾಲನಗರ ಬಳಿಯ ಆನೆಕಾಡಿನ ರಾಜ್ಯ ಹೆದ್ದಾರಿಯಲ್ಲಿ ಬುಧವಾರ ನಡೆದಿದೆ.
ಮಡಿಕೇರಿ ತಾಲೂಕಿನ ಕಾಟಕೇರಿ ನಿವಾಸಿ ಫಿಲೋಮಿನಾ ಎಂಬುವವರೇ ಅವಘಡದಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇನ್ನು ಕಾರಿನಲ್ಲಿದ್ದ ಮತ್ತು ಕಾರು ಚಲಾಯಿಸುತ್ತಿದ್ದ ಪುತ್ರ ಯೋಧ ಪ್ರವೀಣ್ ಡ್ಯಾನಿಯಲ್ ಅವರಿಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಅದೃಷ್ಟವಶಾತ್ ಪ್ರವೀಣ್ ಡ್ಯಾನಿಯಲ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರವೀಣ್ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಜೆಯಲ್ಲಿ ಊರಿಗೆ ಬಂದಿದ್ದು, ತಾಯಿ, ಪತ್ನಿ ಅವರೊಂದಿಗೆ ಕಾರಿನಲ್ಲಿ ಕೆ.ಆರ್.ನಗರದಲ್ಲಿರುವ ಡೋರನಹಳ್ಳಿ ಚರ್ಚ್ಗೆ ಹೊರಟಿದ್ದರು ಎನ್ನಲಾಗಿದೆ. ಮಡಿಕೇರಿಯಿಂದ ಕುಶಾನಗರದ ಕಡೆಗೆ ಬರುವಾಗ ಆನೆಕಾಡು ಬಳಿ ಮುಂದೆ ಹೋಗುತ್ತಿದ್ದ ಲಾರಿಯನ್ನು ಹಿಂದಿಕ್ಕಿ ಮುಂದೆ ಹೋಗುತ್ತಿದ್ದ ವೇಳೆ ಎದುರಿನಿಂದ ಬಂದ ಮತ್ತೊಂದು ಲಾರಿ ಮುಖಾಮುಖಿ ಡಿಕ್ಕಿ ಹೊಡೆದಿದೆ.

ಪರಿಣಾಮ ಫಿಲೋಮಿನಾ ಅವರಿಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರ ಗಾಯಗೊಂಡ ಪ್ರವೀಣ್ ಅವರನ್ನು ಕೂಡಲೇ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಸಾಗಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಶಾಲನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಾಹನಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಚಾರ್ಮಾಡಿಘಾಟ್ ರಸ್ತೆಯನ್ನು ಮುಚ್ಚಿದ್ದರಿಂದ ಮಂಗಳೂರಿನಿಂದ ಕೊಡಗಿನ ಮೂಲಕ ಮೈಸೂರು ಬೆಂಗಳೂರು ಕಡೆಗೆ ಹೆಚ್ಚಿನ ವಾಹನಗಳು ಸಂಚರಿಸುತ್ತಿರುವ ಕಾರಣ ಜತೆಗೆ ಮಳೆಯೂ ಹೆಚ್ಚಾಗಿದ್ದರಿಂದ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಹೇಳಿದ್ದಾರೆ.












Click it and Unblock the Notifications