ಕೊಡಗಿನಲ್ಲಿ ಕಾಡಾನೆಗಳ ಅಟ್ಟಹಾಸಕ್ಕೆ ಓರ್ವ ಬಲಿ
ಕೊಡಗಿನಲ್ಲಿ ಕಾಡಾನೆಗಳ ದಾಳಿ ಮಿತಿಮೀರಿದೆ. ವಿರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮದಲ್ಲಿ ಕಾಫಿ ತೋಟದ ಕೆಲಸ ಮುಗಿಸಿ ಮನೆಯತ್ತ ತೆರಳುತ್ತಿದ್ದ ವ್ಯಕ್ತಿಯೊಬ್ಬರನ್ನು ಕಾಡಾನೆ ಕೊಂದು ಹಾಕಿದೆ.
ಮಡಿಕೇರಿ, ಮೇ 28: ತೋಟದಲ್ಲಿ ಕೆಲಸ ಮುಗಿಸಿ ಮನೆಯತ್ತ ತೆರಳುತ್ತಿದ್ದ ವ್ಯಕ್ತಿಯೊಬ್ಬರನ್ನು ಕಾಡಾನೆ ಕೊಂದು ಹಾಕಿದ ಘಟನೆ ವಿರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ತಿಮ್ಮಯ್ಯ ಅಲಿಯಾಸ್ ಸಾಬು (59) ಎಂಬವರೇ ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ ದುರ್ದೈವಿ. ಇವರು ದೇವಯ್ಯ ಎಂಬುವರಿಗೆ ಸೇರಿದ ಕಾಫಿ ತೋಟದಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಕಾರ್ಮಿಕರನ್ನು ತೋಟಕ್ಕೆ ಕರೆತಂದು ಕೆಲಸ ಮುಗಿಸಿ ಸಂಜೆ ವೇಳೆಯಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭ ಚಾಮುಂಡೇಶ್ವರಿ ದೇವಾಲಯದ ಬಳಿ ದಿಢೀರ್ ಎದುರಾದ ಕಾಡಾನೆ ದಾಳಿ ಮಾಡಿದೆ.

ಈ ವೇಳೆ ದೇವಯ್ಯ ಅವರು ಹೆದರಿ ಜೋರಾಗಿ ಕಿರುಚಿದ್ದರಿಂದ ಶಬ್ಧ ಕೇಳಿ ಸಮೀಪದಲ್ಲೇ ಕರ್ತವ್ಯದಲ್ಲಿದ್ದ ಅರಣ್ಯ ಇಲಾಖೆಯ ಏಳು ಮಂದಿ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದಾರೆ. ಈ ಸಂದರ್ಭ ಆನೆ ಕಾಣಿಸಿಕೊಂಡಿದ್ದು ಅದು ಅರಣ್ಯಾಧಿಕಾರಿಗಳ ಮೇಲೆಯೂ ದಾಳಿ ಮಾಡಲು ಮುಂದಾಗಿದೆ. ಇದರಿಂದ ತಪ್ಪಿಸಿಕೊಳ್ಳಲು ಮುಂದಾದಾಗ ಅರಣ್ಯಾಧಿಕಾರಿ ಜತ್ತಪ್ಪ ಎಂಬುವರು ಕಾಲುಜಾರಿ ಬಿದ್ದು ಗಾಯಗೊಂಡಿದ್ದಾರೆ. ಆನೆ ಹೊರಟು ಹೋದ ಬಳಿಕ ಗಾಯಗೊಂಡಿದ್ದ ತಿಮ್ಮಯ್ಯ ಮತ್ತು ಅರಣ್ಯಾಧಿಕಾರಿ ಜತ್ತಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಗಂಭೀರ ಗಾಯಗೊಂಡಿದ್ದ ತಿಮ್ಮಯ್ಯ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಜತ್ತಪ್ಪ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕೆ ವೃತ್ತ ನಿರೀಕ್ಷಕ ಕುಮಾರ ಆರಾಧ್ಯ, ಠಾಣಾಧಿಕಾರಿ ನಂಜುಂಡಸ್ವಾಮಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಭಯ ಸೃಷ್ಟಿಸಿದ ಕಾಡಾನೆಗಳು
ಕೊಡಗಿನಲ್ಲಿ ಕಾಡಾನೆಗಳ ಹಾವಳಿ ನಿಲ್ಲುವ ಲಕ್ಷಣಗಳು ಕಂಡುಬರುತ್ತಿಲ್ಲ. ಕಾಡಿನಿಂದ ನೇರವಾಗಿ ನಾಡಿನತ್ತ ಬರುತ್ತಿರುವ ಕಾಡಾನೆಗಳು ಮನುಷ್ಯರನ್ನು ಬಲಿತೆಗೆದುಕೊಳ್ಳುತ್ತಿರುವುದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ.

ಈಗಾಗಲೆ ಹಲವೆಡೆ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಆನೆಗಳು ಹಲಸಿನ ಹಣ್ಣಿಗಾಗಿ ಎಲ್ಲೆಂದರಲ್ಲಿ ಅಲೆಯುತ್ತಿದ್ದು, ಕೃಷಿ ಫಸಲನ್ನೆಲ್ಲ ಹಾಳು ಮಾಡುತ್ತಿವೆ. ಈಗ ಕಾಫಿ ತೋಟದಲ್ಲಿ ಗೊಬ್ಬರ ಹಾಕುವುದು, ಚಿಗುರು ತೆಗೆಯುವುದು, ಮರ ಕಪಾತ್ ಹೀಗೆ ಹಲವು ಕೆಲಸಗಳಿದ್ದು, ತೋಟದೊಳಗೆ ಹೋಗಲು ಭಯಪಡುವಂತಾಗಿದೆ. ಆನೆಗಳಿಗೆ ಹೆದರಿ ಕಾರ್ಮಿಕರು ಕೆಲಸಕ್ಕೆ ಬಾರದೆ ಉಳಿಯುತ್ತಿರುವುದರಿಂದ ಕಾಫಿ ತೋಟದ ಮಾಲೀಕರು ಚಿಂತಾಕ್ರಾಂತರಾಗಿದ್ದಾರೆ.












Click it and Unblock the Notifications