ಕೊಡಗಿನಲ್ಲಿ ಮೂಗಿಗೆ ಬಡಿಯುತ್ತಿದೆ ಗಾಂಜಾ ಕಮಟು ವಾಸನೆ; ಎಲ್ಲಿದರ ಮೂಲ?
ಮಡಿಕೇರಿ,
ಸೆಪ್ಟೆಂಬರ್ 15: ಒಂದೆಡೆ ಡ್ರಗ್ ಗೆ ಸಂಬಂಧಿಸಿದ ಸುದ್ದಿ ರಾಜ್ಯದಲ್ಲಿ ಸಂಚಲನವನ್ನುಂಟು ಮಾಡಿದ್ದರೆ, ಮತ್ತೊಂದೆಡೆ ಹಲವು ಜಿಲ್ಲೆಗಳಲ್ಲಿ ಗಾಂಜಾ ಪತ್ತೆ ಹಚ್ಚುವ ಕಾರ್ಯವನ್ನು ಪೊಲೀಸರು ಮಾಡುತ್ತಿದ್ದಾರೆ. id="toptextpromo"> id='are-slot-1' class='oiad oi-axt oiadv'>ಡ್ರಗ್
ಹಗರಣ ಬೆಳಕಿಗೆ ಬಂದ ನಂತರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪೊಲೀಸರು ಎಚ್ಚೆತ್ತುಕೊಂಡಿದ್ದು, ಗಾಂಜಾ ಮಾರಾಟಗಾರರು, ಬೆಳೆಗಾರರು ಹೀಗೆ ಎಲ್ಲರನ್ನು ಹುಡುಕಿ ತರುತ್ತಿದ್ದಾರೆ. ಪರಿಣಾಮ ಗಾಂಜಾದ ಕಮಟು ವಾಸನೆ ಇದೀಗ ಎಲ್ಲರ ಮೂಗಿಗೆ ಬಡಿಯಲು ಆರಂಭಿಸಿದೆ. ಕಳೆದ ಹಲವು ವರ್ಷಗಳಿಂದ ಗಾಂಜಾ ಮಾರಾಟ ಮಾಡುತ್ತಿರುವ ಬಗೆಗಿನ ವರದಿಗಳು ಹಾಗೂ ಪ್ರಕರಣಗಳು ಅಲ್ಲಲ್ಲಿ ಕೇಳಿ ಬರುತ್ತಲೇ ಇದ್ದವು. ಪೊಲೀಸರು ಬಂಧಿಸುವುದು, ಆನಂತರ ಸಿಕ್ಕಿ ಹಾಕಿಕೊಂಡವರನ್ನು ಜಾಮೀನಿನ ಮೇಲೆ ಬಿಡಿಸಿಕೊಂಡು ಹೋಗುವುದು ನಡೆಯುತ್ತಲೇ ಇತ್ತು. ಆದರೆ ಈಗ ತನಿಖೆ ಚುರುಕುಗೊಂಡಿದೆ. id='are-slot-2' class='oiad oi-axt oiadv'>
ಹಳೇ ಮೈಸೂರು ವ್ಯಾಪ್ತಿಯಲ್ಲಿ ದಂಧೆ
ಈ ಮೊದಲು ಪೊಲೀಸರು ಆಳವಾಗಿ ಈ ಬಗ್ಗೆ ತನಿಖೆ ನಡೆಸದ ಕಾರಣ ಹಳೇ ಮೈಸೂರು ವ್ಯಾಪ್ತಿಯಲ್ಲಿ ಈ ದಂಧೆ ಜಿಗಿತುಕೊಂಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಲಾಕ್ ಡೌನ್ ಕಾಲದಲ್ಲಿಯೇ ವೈದ್ಯಕೀಯ ಪಾಸ್ ಗಳನ್ನು ಬಳಸಿ ಮೈಸೂರಿನಿಂದ ಕೊಡಗಿನತ್ತ ಗಾಂಜಾ ಸಾಗಿಸಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಕೊಡಗಿನಲ್ಲಿ ಒಂದಷ್ಟು ಮಂದಿ ಗಾಂಜಾವನ್ನು ಹಂಚಿಕೊಳ್ಳುತ್ತಿದ್ದಾಗ ಸಿಕ್ಕಿಬಿದ್ದಿದ್ದರು. ಆಗ ತನಿಖೆ ಮಾಡಿದ ಪೊಲೀಸರಿಗೆ ಗಾಂಜಾ ಮೈಸೂರಿನಿಂದಲೇ ಅಲ್ಲಿಗೆ ಸರಬರಾಜಾಗಿರುವುದು ಗೊತ್ತಾಗಿತ್ತು.
ಕಳೆದ ಕೆಲ ವರ್ಷಗಳಿಂದ ಮೈಸೂರಿನಿಂದಲೇ ಗಾಂಜಾ ಬೇರೆ ಬೇರೆ ಕಡೆಗಳಿಗೆ ಸಾಗಾಟವಾಗುತ್ತಿರುವುದು ಗೌಪ್ಯವಾಗಿ ಉಳಿದಿಲ್ಲ. ಹುಣಸೂರು, ಪಿರಿಯಾಪಟ್ಟಣ, ಬೈಲುಕುಪ್ಪೆ ಟಿಬೆಟ್ ಕ್ಯಾಂಪ್ ಮೊದಲಾದ ಕಡೆಗಳಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದಾಗ ಆರೋಪಿಗಳು ಸಿಕ್ಕಿ ಬಿದ್ದಿದ್ದರು. ಅವತ್ತೇ ಪೊಲೀಸರು ಗಂಭೀರ ತನಿಖೆ ನಡೆಸಿದ್ದರೆ ಅದರ ಹಿಂದಿನ ಕಿಂಗ್ ಪಿನ್ ಗಳು ಸಿಕ್ಕಿ ಬೀಳುತ್ತಿದ್ದರೇನೋ? ಈ ನಡುವೆ ಮೈಸೂರಿನಿಂದ ಕುಶಾಲನಗರಕ್ಕೆ ಲಾಕ್ ಡೌನ್ ಇದ್ದಾಗಲೂ ತೂಗು ಸೇತುವೆ ಮೂಲಕ ಗಾಂಜಾ ಸಾಗಿಸಲಾಗುತ್ತಿದೆ ಎಂಬ ಗುಸುಗುಸು ಮಾತು ಇಲ್ಲಿನವರ ಬಾಯಿಯಿಂದ ಹೊರಬಂದಿದ್ದವು.

ಕೊಡಗಿನಲ್ಲಿ ಪ್ರವಾಸಿಗರೇ ಟಾರ್ಗೆಟ್
ಕೊಡಗಿನಲ್ಲಿ ಗಾಂಜಾ ಪ್ರಕರಣಗಳು ಇತ್ತೀಚೆಗೆ ಹೆಚ್ಚು ಬೆಳಕಿಗೆ ಬರುತ್ತಿವೆ. ಕುಶಾಲನಗರದಲ್ಲಿ ಬಹಳಷ್ಟು ಗಾಂಜಾ ವ್ಯಸನಿಗಳಿದ್ದಾರೆ. ಇಲ್ಲಿನ ಕೆಲವು ಇಂಜಿನಿಯರ್ ವಿದ್ಯಾರ್ಥಿಗಳು ಕೂಡ ಗಾಂಜಾ ವ್ಯಸನಿಗಳಾಗಿದ್ದು, ಅವರೇ ಕೆಲವು ಗಾಂಜಾ ಮಾರಾಟಗಾರರಿಗೆ ಖಾಯಂ ಗಿರಾಕಿಗಳು ಎಂಬ ಮಾತುಗಳಿವೆ.
ಅದು ಹೊರತುಪಡಿಸಿದರೆ ಮೋಜು ಮಸ್ತಿಗಾಗಿ ಬರುವ ಹಾಗೂ ವಿದೇಶದಿಂದ ಬರುವ ಪ್ರವಾಸಿಗರು ಕೊಡಗಿನ ರೆಸಾರ್ಟ್, ಹೋಂ ಸ್ಟೇಗಳಲ್ಲಿ ಉಳಿದುಕೊಳ್ಳುತ್ತಿದ್ದು, ಅಂತಹವರ ಪೈಕಿ ಕೆಲವರು ಗಾಂಜಾ ವ್ಯಸನಿಗಳಾಗಿರುತ್ತಾರೆ. ಅಂಥ ವ್ಯಕ್ತಿಗಳು ಕೇಳಿದಷ್ಟು ಹಣ ನೀಡಲು ತಯಾರಿರುತ್ತಾರೆ. ಇದನ್ನೇ ಸ್ಥಳೀಯ ಕೆಲವರು ಬಂಡವಾಳ ಮಾಡಿಕೊಂಡು ಗಾಂಜಾ ಸರಬರಾಜು ಮಾಡಿ ಜೇಬು ತುಂಬಿಸಿಕೊಳ್ಳುತ್ತಾರೆ. ಇತ್ತೀಚೆಗಿನ ಕೊಡಗಿನಲ್ಲಿ ಗಾಂಜಾ ಹಂಚಿಕೊಳ್ಳುವಾಗ ಸಿಕ್ಕಿ ಬಿದ್ದ ಪ್ರಕರಣಗಳು ಇದಕ್ಕೆ ನಿದರ್ಶನವಾಗಿವೆ.

ಕೊಡಗಿಗೆ ಶುಂಠಿಯೊಂದಿಗೆ ಬಂದ ಗಾಂಜಾ
ಯಾವಾಗ ಗಾಂಜಾಕ್ಕೆ ಬೇಡಿಕೆಯಿದೆ ಎಂಬುದು ಗೊತ್ತಾಯಿತೋ ಜತೆಗೆ ಸ್ಥಳೀಯವಾಗಿಯೇ ಬೇಡಿಕೆಯಿದೆ ಎಂಬುದು ಅರಿವಾಗುತ್ತಿದ್ದಂತೆಯೇ ಮನೆ ಬಳಿಯೇ ಕೆಲವರು ಗಾಂಜಾ ಬೆಳೆಯಲು ಮುಂದಾಗಿ ಸಿಕ್ಕಿ ಬಿದ್ದ ಘಟನೆಗಳು ನಡೆದಿವೆ. ಸದ್ಯದ ಪರಿಸ್ಥಿತಿಯಲ್ಲಿ ಹಣವೇ ಮುಖ್ಯವಾಗಿರುವುದರಿಂದ ಗಾಂಜಾ ಬೆಳೆಯುವುದು, ಮಾರಾಟ ಮಾಡುವುದು ಅಪರಾಧ ಎಂದು ಗೊತ್ತಿದ್ದರೂ ಮತ್ತೆ ಮತ್ತೆ ಗಾಂಜಾದತ್ತ ಮುಖ ಮಾಡುತ್ತಿರುವುದು ಆತಂಕಕಾರಿಯಾಗಿದೆ.
ಕೊಡಗಿನಲ್ಲಿ ಗಾಂಜಾದ ಕಮಟು ವಾಸನೆ ಬರುತ್ತಿರುವುದು ಇವತ್ತು ನಿನ್ನೆಯಿಂದಲ್ಲ. 1995ರಿಂದ 2005ರ ಅವಧಿಯಲ್ಲಿ, ಅಂದರೆ ಸುಮಾರು ಹತ್ತು ವರ್ಷಗಳಲ್ಲಿ ಕೋಟ್ಯಂತರ ರೂ. ಲೆಕ್ಕದಲ್ಲಿ ಗಾಂಜಾ ಬೆಳೆದು ಹೊರಕ್ಕೆ ಸಾಗಿಸಲಾಗಿದೆ. ಕೇರಳದಿಂದ ಶುಂಠಿ ಕೃಷಿ ಮಾಡಲು ಬಂದ ಕೇರಳಿಗರಿಗೆ ಇಲ್ಲಿನ ಬೆಳೆಗಾರರು ಗದ್ದೆ ಹಾಗೂ ಪಾಳು ಬಿದ್ದಿದ್ದ ಜಾಗಗಳನ್ನು ನೀಡಿದ್ದರು. ಅದನ್ನು ಗುತ್ತಿಗೆ ಆಧಾರದಲ್ಲಿ ಪಡೆದು ಶುಂಠಿ ಕೃಷಿ ಮಾಡಿದರು. ಸುತ್ತ ಬೇಲಿ ನಿರ್ಮಿಸಿಕೊಂಡಿದ್ದರಿಂದ ಅದರೊಳಗೆ ಯಾರೂ ಹೋಗಲಿಲ್ಲ. ಅಲ್ಲಿ ಶುಂಠಿ ಜತೆಗೆ ಗಾಂಜಾವನ್ನು ಸದ್ದಿಲ್ಲದೆ ಬೆಳೆದರು.
Recommended Video

ಗಾಂಜಾವನ್ನು ಬೇರು ಸಹಿತ ಕೀಳಲಾಗುತ್ತಿಲ್ಲ
ಇದೆಲ್ಲವೂ ಬೆಳಕಿಗೆ ಬರುವ ವೇಳೆಗೆ ಮಾಲುಗಳೆಲ್ಲವೂ ತಲುಪಬೇಕಾದ ಜಾಗವನ್ನು ತಲುಪಿಯಾಗಿತ್ತು. ಆದರೂ ಪೊಲೀಸರು ಮತ್ತು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಅರಣ್ಯ, ಕಾಫಿ ತೋಟ, ಶುಂಠಿ ನಡುವೆ ಬೆಳೆದಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಗಾಂಜಾ ವಶಪಡಿಸಿಕೊಂಡು ನಾಶ ಮಾಡಿದ್ದರು. ಅಷ್ಟೇ ಅಲ್ಲದೆ ಗಾಂಜಾ ಸಾಗಣೆ ತಡೆಗಟ್ಟುವಲ್ಲಿಯೂ ಯಶಸ್ವಿಯಾದರು. ಆದರೆ ಇದೀಗ ಮತ್ತೆ ಮೈಸೂರು-ಕೊಡಗು ಕಡೆಗೆ ಗಾಂಜಾ ಸರಬರಾಜಾಗುತ್ತಿರುವುದು ಆತಂಕವನ್ನುಂಟು ಮಾಡಿದೆ. ಇದನ್ನು ತೊಲಗಿಸಬೇಕಾದರೆ ಪೊಲೀಸರು ಮಾತ್ರವಲ್ಲದೆ ಸಾರ್ವಜನಿಕರು ಎಚ್ಚೆತ್ತುಕೊಳ್ಳುವುದು ಅನಿವಾರ್ಯವಾಗಿದೆ.












Click it and Unblock the Notifications