ಕೊನೆಗೂ ಕೊಡಗಿನಲ್ಲಿ ಸಂತ್ರಸ್ತರಿಗೆ ಸಿಕ್ಕಿತು ಸೂರು
ಮಡಿಕೇರಿ, ಅಕ್ಟೋಬರ್ 26: ಕಳೆದ ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಮನೆಗಳನ್ನು ಕಳೆದುಕೊಂಡ 35 ಕುಟುಂಬಗಳಿಗೆ ರಾಜ್ಯ ವಸತಿ ಹಾಗೂ ಕೊಡಗು ಜಿಲ್ಲಾ ಉಸ್ತುವರಿ ಸಚಿವರಾದ ವಿ. ಸೋಮಣ್ಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಶುಕ್ರವಾರ ಸಂತ್ರಸ್ತರಿಗೆ ಮನೆಗಳನ್ನು ಹಸ್ತಾಂತರಿಸಿದರು.
ಪ್ರಥಮ ಹಂತದಲ್ಲಿ ಕರ್ಣಂಗೇರಿ ಬಳಿ ನಿರ್ಮಿಸಲಾದ 35 ಮನೆಗಳನ್ನು ಸಾಂಕೇತಿಕವಾಗಿ ಹಸ್ತಾಂತರ ಮಾಡಲಾಯಿತು. ಮನೆಯ ಹೆಣ್ಣು ಮಗಳ ಹೆಸರಲ್ಲಿ ಈ ಮನೆಗಳನ್ನು ರಿಜಿಸ್ಟರ್ ಮಾಡಲಾಗಿದ್ದು, ಅವರಿಗೆ ಮನೆಗಳ ಹಕ್ಕುಪತ್ರ ಮತ್ತು ದಾಖಲೆಯನ್ನು ವಿತರಿಸಲಾಯಿತು.
ಬಳಿಕ ಮಾತನಾಡಿದ ಸಚಿವ ವಿ. ಸೋಮಣ್ಣ, "35 ಮನೆಗಳನ್ನು 5 ಕೋಟಿ 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಒಂದು ಕುಟುಂಬ ನೆಮ್ಮದಿಯಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯವಿರುವ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಮುಂದಿನ ಮಾರ್ಚ್ 30ರ ಒಳಗೆ ಉಳಿದ 500ಕ್ಕೂ ಹೆಚ್ಚು ಮನೆಗಳನ್ನು ಪೂರ್ಣಗೊಳಿಸಿ, ಸಂತ್ರಸ್ತರಿಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್, ಪೊಲೀಸ್ ವರಿಷ್ಟಾಧಿಕಾರಿ ಡಾ.ಸುಮನಾ, ಜಿಪಂ. ಸಿಇಓ ಲಕ್ಷ್ಮೀಪ್ರಿಯ ಸೇರಿದಂತೆ ಅಧಿಕಾರಿಗಳು, ಮನೆ ನಿರ್ಮಾಣ ಸಂಸ್ಥೆಯ ಗುತ್ತಿಗೆದಾರರು ಹಾಜರಿದ್ದರು.












Click it and Unblock the Notifications