ಪ್ರೀತಿಯ ಹೆಸರಲ್ಲಿ ಮೋಸ: ಮಡಿಕೇರಿಯ ಇಬ್ಬರು ನ್ಯಾಯಾಂಗ ಬಂಧನಕ್ಕೆ
ಮದುವೆಯಾಗುವುದಾಗಿ ನಂಬಿಸಿ, ಮೋಸ ಮಾಡಿದ ಮಡಿಕೇರಿಯ ಇಬ್ಬರು ಯುವಕರನ್ನು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಮಡಿಕೇರಿ, ಮೇ 08: ತನ್ನದೇ ಗ್ರಾಮದ ಮಹಿಳೆಯೊಬ್ಬರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಮಡಿಕೇರಿ ಜಿಲ್ಲೆ ಸೋಮವಾರಪೇಟೆಯ ಚೌಡ್ಲು ಗ್ರಾಮಪಂಚಾಯಿಯ ಗಾಂಧಿನಗರ ನಿವಾಸಿ ವೆಂಕಟೇಶ್(35) ಮತ್ತೊಬ್ಬ ಮಹಿಳೆಯನ್ನು ಮದುವೆಯಾದ ಘಟನೆಗೆ ಸಂಬಂಧಿಸಿದಂತೆ ಪೊಲೀಸರ ಅತಿಥಿಯಾಗಿದ್ದಾನೆ.
ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ ಮತ್ತು ವೆಂಕಟೇಶ್ ಗೆ ಒಂದು ಮಗುವೂ ಇತ್ತು. ಆದರೂ 22 ವರ್ಷದ ಮತ್ತೊಬ್ಬ ಯುವತಿಯನ್ನು ಪುಸಲಾಯಿಸಿ, ಆಂಧ್ರ ಪ್ರದೇಶಕ್ಕೆ ಕರೆದೊಯ್ದು ಮದೆವೆಯಾಗಿದ್ದ. ನಾಪತ್ತೆಯಾಗಿದ್ದ ಯುವತಿಯ ಕುರಿತು ಆಕೆಯ ಕುಟುಂಬ ದೂರು ನೀಡಿತ್ತು. ಕೊನೆಗೂ ಈ ಇಬ್ಬರನ್ನೂ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸರು, ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ದೂರಿನನ್ವಯ ಈತನ್ನು ಬಂಧಿಸಿದ್ದಾರೆ.[6 ತಿಂಗಳು ಉಚಿತ ಆಹಾರದ ಭರವಸೆ: ದಿಡ್ಡಳ್ಳಿ ಆದಿವಾಸಿಗಳ ಸ್ಥಳಾಂತರ]

ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ ದೂರು ನೀಡುತ್ತಿದ್ದಂತೆಯೇ, 22ರ ಯುವತಿಯೂ, ತನಗಿಷ್ಟವಿಲ್ಲದಿದ್ದರೂ ಬಲವಂತವಾಗಿ ತನ್ನನ್ನು ಆಂಧ್ರ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆಂದು ತಿಳಿಸಿದ್ದಾರೆ. ಸದ್ಯಕ್ಕೆ ವೆಂಕಟೇಶ್ ನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಅವಳ ಪ್ರೀತಿಸಿ ಇವಳ ಮದುವೆ ಯತ್ನ!
ಇನ್ನೊಂದು ಪ್ರಕರಣದಲ್ಲಿ, 18 ವರ್ಷ ತುಂಬುತ್ತಿದ್ದಂತೆಯೇ ನಿನ್ನನ್ನು ಮದುವೆಯಾಗುತ್ತೇನೆಂದು ಅಪ್ರಾಪ್ತೆಯೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದ ಮಡಿಕೇರಿಯ ಕರಿಕೆಯ ನಿವಾಸಿ ನಿತಿನ್ ಎಂಬುವವನನ್ನು ಸಹ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಹುಡುಗಿಗೆ 18 ವರ್ಷವಾದರೂ ಮದುವೆಯ ಸೊಲ್ಲೆತ್ತದ ನಿತಿನ್ ಕೊನೆಗೆ ಬೇರೆ ಹುಡುಗಿಯೊಂದಿಗೆ ಮದುವೆಯಾಗಲು ಯತ್ನಿಸುತ್ತಿದ್ದ ವಿಷಯ ತಿಳಿದು, ಹುಡುಗಿ ಗ್ರಾಮದ ಹಿರಿಯರ ಸಮ್ಮುಖದಲ್ಲೇ ದೂರು ಸಲ್ಲಿಸಿದ್ದಾಳೆ. ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾನೆಂದು ಆಕೆ ನೀಡೀದ ದೂರಿನನ್ವಯ ನಿತಿನ್ ನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.












Click it and Unblock the Notifications