ಅಕ್ಟೋಬರ್ 7ರಿಂದ ಕೊಡಗು ಪ್ರವಾಸಿ ತಾಣಗಳು ಬಂದ್
ಮಡಿಕೇರಿ, ಅಕ್ಟೋಬರ್ 04; ದಸರಾ ಮತ್ತು ಕರಗೋತ್ಸವದ ಪ್ರಯುಕ್ತ ಕೊಡಗು ಜಿಲ್ಲಾಡಳಿತ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಿದೆ. ಅಕ್ಟೋಬರ್ 7 ರಿಂದ 17ರ ತನಕ ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳನ್ನು ಬಂದ್ ಮಾಡುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ರಾಜಾಸೀಟ್, ಗದ್ದುಗೆ, ಮ್ಯುಸಿಯಂ, ಕೋಟೆ, ನೆಹರು ಮಂಟಪ ಸೇರಿದಂತೆ ವಿವಿಧ ಪ್ರವಾಸಿ ತಾಣಗಳು ಬಂದ್ ಆಗಲಿವೆ.
ಮಡಿಕೇರಿ ದಸರಾ ಮತ್ತು ಕಾವೇರಿ ತೀರ್ಥೋದ್ಭವ ಕುರಿತು ಜಿಲ್ಲಾಡಳಿತದ ಜೊತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸಭೆ ನಡೆಸಿದರು. ನಾಡಿನ ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಅಕ್ಟೋಬರ್ 17 ರಂದು ಮಧ್ಯಾಹ್ನ 1.11 ಗಂಟೆಗೆ ತೀರ್ಥೋದ್ಭವ ನಡೆಯಲಿದೆ.

ಕೋವಿಡ್ ಪರಿಸ್ಥಿತಿ ಹಿನ್ನೆಲೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಕೆಲವು ನಿಬಂಧನೆಗಳನ್ನು ಪಾಲಿಸುವಲ್ಲಿ ಸರ್ಕಾರದ ಜೊತೆ ಭಕ್ತಾಧಿಗಳು ಕೈಜೋಡಿಸುವಂತೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದ್ದಾರೆ.
ಈ ಬಾರಿ ಅಕ್ಟೋಬರ್ 17ರ ಮಧ್ಯಾಹ್ನ 1.11 ಗಂಟೆಗೆ ತೀರ್ಥೋದ್ಭವ ನಡೆಯಲಿದೆ. ಹಾಗೆಯೇ ಸಾಲು-ಸಾಲು ರಜೆ ಇರುವುದರಿಂದ ಕೋವಿಡ್ ನಿಯಮ ಪಾಲಿಸಬೇಕಿದೆ. ಆದ್ದರಿಂದ ಭಕ್ತರು ಅಕ್ಟೋಬರ್ 17ರ ಮಧ್ಯಾಹ್ನ 2 ಗಂಟೆಯ ನಂತರ ಭಾಗಮಂಡಲದಿಂದ ತಲಕಾವೇರಿಗೆ ತೆರಳಬಹುದಾಗಿದೆ.
ವಾಹನಗಳಿಗೆ ಸೂಚನೆ; ಅಕ್ಟೋಬರ್ 17ರಂದು ಖಾಸಗಿ ವಾಹನಗಳು ಭಾಗಮಂಡಲ ತನಕ ಮಾತ್ರ ತೆರಳಲು ಅವಕಾಶವಿದೆ. ಭಾಗಮಂಡಲದಿಂದ ತಲಕಾವೇರಿಗೆ ಕಾಲು ನಡಿಗೆ ಮೂಲಕ ತೆರಳಲು ಅವಕಾಶವಿದೆ.
ಆದರೆ ಕಾಲ್ನಡಿಗೆಯಲ್ಲಿ ತಲಕಾವೇರಿಗೆ ಹೋಗುವವರು 72 ಗಂಟೆ ಅವಧಿಯ ಮೊದಲಿನ ಆರ್. ಟಿ. ಪಿ. ಸಿ. ಆರ್. ಪರೀಕ್ಷೆ ಮಾಡಿಸಿ, ನೆಗೆಟಿವ್ ವರದಿ ಪಡೆದಿರಬೇಕು ಜೊತೆಗೆ ಒಂದು ಬಾರಿಯಾದರೂ ಕೋವಿಡ್ ಲಸಿಕೆ ಪಡೆದಿರಬೇಕು ಹಾಗೂ ಗುರುತಿನ ಚೀಟಿ ಹೊಂದಿರಬೇಕು.
ಮಡಿಕೇರಿ ದಸರಾ; ಮಡಿಕೇರಿ ದಸರಾ ಕುರಿತು ಮಾತನಾಡಿದ ಸಚಿವರು, "ಅಕ್ಟೋಬರ್ 7ರಂದು ಆರಂಭವಾಗುವ ಕರಗ ಉತ್ಸವದಲ್ಲಿ ಪ್ರತಿ ಕರಗದಲ್ಲಿ 25 ಜನರು ಪಾಲ್ಗೊಳ್ಳಬಹುದಾಗಿದೆ. ಈ ಬಾರಿ ಮನೆ ಮನೆಗೆ ತೆರಳಿ ಪೂಜೆ ಪಡೆಯಲು ಅವಕಾಶವಿದ್ದು, ಇದರಲ್ಲಿ 10 ಜನರು ತೆರಳಬಹುದಾಗಿದೆ" ಎಂದರು.
"ಕೋವಿಡ್ ಪರಿಸ್ಥಿತಿ ಹಿನ್ನೆಲೆ ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಈ ಬಾರಿ ಸಾಂಪ್ರದಾಯಿಕವಾಗಿ ದಸರಾ ಆಚರಿಸಲಾಗುವುದು. ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ. ಆ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು" ಎಂದು ಸಚಿವರು ಮನವಿ ಮಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್. ವೆಂಕಟೇಶ್ ಮಾತನಾಡಿ, "ತೀರ್ಥೋದ್ಭವ ದಿನದಂದು ಪಾಲ್ಗೊಳ್ಳುವವರಿಗೆ ಕಳೆದ ಬಾರಿಯಂತೆ ಅಕ್ಟೋಬರ್ 14 ರಂದು ಆರ್. ಟಿ. ಪಿ. ಸಿ. ಆರ್. ಪರೀಕ್ಷೆ ಮಾಡಲಾಗುವುದು" ಎಂದರು.
"ಕೋವಿಡ್ ಲಸಿಕೆ ನೀಡುವಲ್ಲಿ ಕೊಡಗು ಎರಡನೇ ಸ್ಥಾನದಲ್ಲಿದ್ದು, ಪ್ರಥಮ ಹಂತದ ಲಸಿಕೆಯಲ್ಲಿ ಶೇ 94ರಷ್ಟು ಪ್ರಗತಿ ಸಾಧಿಸಲಾಗಿದೆ. ಹಾಗೆಯೇ ಎರಡನೇ ಹಂತದ ಲಸಿಕೆ ನೀಡುವಲ್ಲಿ ಶೇ 43ರಷ್ಟು ಪ್ರಗತಿ ಸಾಧಿಸಲಾಗಿದೆ" ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮಾತನಾಡಿ, "ಮಡಿಕೇರಿ ದಸರಾ ಮತ್ತು ತಲಕಾವೇರಿ ತುಲಾ ಸಂಕ್ರಮಣ ಜಾತ್ರೆ ಸಂದರ್ಭದಲ್ಲಿ ಕೋವಿಡ್ ನಿಯಮ ಪಾಲನೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಲಸಿಕಾ ಅಭಿಯಾನವನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ" ಎಂದರು.












Click it and Unblock the Notifications