ಉಗುರಿಗಾಗಿ ರಾಷ್ಟ್ರೀಯ ಪ್ರಾಣಿ ಹುಲಿ ಕೊಂದ ದುಷ್ಕರ್ಮಿಗಳ ಬಂಧನ
ಮಡಿಕೇರಿ, ಆಗಸ್ಟ್ 28: ಕೇವಲ ಹುಲಿಯ ಉಗುರಿಗಾಗಿ ಅದನ್ನು ಕೊಂದು ಕಾಲುಗಳನ್ನು ಕತ್ತರಿಸಿಕೊಂಡು ಹೋಗಿರುವ ಅಮಾನವೀಯ ಘಟನೆ ನಾಗರಹೊಳೆ ಅರಣ್ಯ ವ್ಯಾಪ್ತಿ ಪ್ರದೇಶದಲ್ಲಿ ಮೂರು ದಿನಗಳ ಹಿಂದೆ ನಡೆದಿದೆ.
Recommended Video
ಕೊಡಗಿನ ಸುಳುಗೋಡು ಗ್ರಾಮದ ಶಶಿ, ಶರಣು, ಸಂತೋಷ್ ಹಾಗೂ ನೆವಲೆ ಗ್ರಾಮದ ರಂಜು ಇವರುಗಳೇ ಬೇಟೆಗೆ ತೆರಳಿದ್ದರು ಎನ್ನಲಾಗಿದೆ. ಇವರು ಗುಂಡು ಹೊಡೆದು ಜಿಂಕೆಯನ್ನು ಹತ್ಯೆ ಮಾಡಿ ಹಿಂದಿರುಗುವಾಗ ಕಂಡ ಹುಲಿಯನ್ನು ಗುಂಡಿಕ್ಕಿ ಹತ್ಯೆಗೈದು, ಅದರ ಉಗುರಿಗಾಗಿ ಹುಲಿಯ ಕಾಲುಗಳನ್ನು ತುಂಡರಿಸಿದ ಘಟನೆ ಕಲ್ಲಳ್ಳ ವಲಯ ಸಂರಕ್ಷಿತ ಅರಣ್ಯದಲ್ಲಿ ನಡೆದಿದೆ.
ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಪೂರ್ವ ಘಟ್ಟದ ಅಪರೂಪದ 'ಕಳಿಂಗ ಕಪ್ಪೆ' ಪತ್ತೆ
ಪ್ರಕರಣದ ತನಿಖೆ ಕೈಗೊಂಡ ಅರಣ್ಯ ಇಲಾಖೆ ಅಧಿಕಾರಿಗಳು ದುಷ್ಕರ್ಮಿಗಳ ಪತ್ತೆ ಕಾರ್ಯಕ್ಕೆ ಬಂಡೀಪುರದ ಅರಣ್ಯ ಇಲಾಖೆಯ ಶ್ವಾನದಳದ ಚತುರ ಎಂದು ಕರೆಸಿಕೊಳ್ಳುವ 'ರಾಣಾ'ನನ್ನು ಕರೆಸಿದ್ದಾರೆ. ಹುಲಿ ಸತ್ತು ಬಿದ್ದ ಸ್ಥಳದಿಂದ ಆರೋಪಿಗಳ ಪತ್ತೆಗೆ ತೆರಳಿದ 'ರಾಣಾ' ನೇರವಾಗಿ ಮುಖ್ಯ ಆರೋಪಿ ಸಂತೋಷ್ನ ಮನೆಯ ಸುಳಿವು ನೀಡಿದೆ. ಈ ವೇಳೆ ಆತನ ಮನೆಯಲ್ಲಿ ಒಂದೂವರೆ ಕೆಜಿ ಜಿಂಕೆ ಮಾಂಸ ಪತ್ತೆಯಾಗಿದೆ. ಈ ವೇಳೆ ತಲೆಮರೆಸಿಕೊಂಡಿರುವ ರಂಜು, ಶಶಿ, ಶರಣು ಮನೆ ಸುಳಿವನ್ನು ರಾಣಾ ನೀಡಿದೆ.
ಆರೋಪಿಗಳ ಮನೆಯಲ್ಲಿ ಬಚ್ಚಿಟ್ಟಿದ್ದ ಹುಲಿಯ ಉಗುರುಗಳು, ಕೃತ್ಯಕ್ಕೆ ಬಳಸಿದ ಬಂದೂಕು ಮತ್ತು ಗುಂಡುಗಳು ಪತ್ತೆಯಾಗಿದೆ. ಮೊಕದ್ದಮೆ ದಾಖಲಿಸಿಕೊಂಡಿರುವ ಅಧಿಕಾರಿಗಳು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಸ್ಥಳಕ್ಕೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಅಜಯ್ ಮಿಶ್ರ, ಟೈಗರ್ ಪ್ರಾಜೆಕ್ಟ್ನ ಜಗತ್ ರಾಂ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್, ನಾಗರಹೊಳೆ ನಿರ್ದೇಶಕ ಡಿ.ಮಹೇಶ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಘಟನೆ ವನ್ಯ ಪ್ರೇಮಿಗಳಿಗೆ ಶಾಕ್ ನೀಡಿದ್ದು ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ಪ್ರಾಣಿ ಹುಲಿಯನ್ನು ಅಳಿವಿನಂಚಿನಲ್ಲಿರುವ ಅಪರೂಪದ ಪ್ರಾಣಿ ಎಂದು ಸರ್ಕಾರ ಘೋಷಿಸಿದ್ದು, ಇವುಗಳ ಸಂರಕ್ಷಣೆಗಾಗಿಯೇ ವಾರ್ಷಿಕ ಕೋಟ್ಯಂತರ ರುಪಾಯಿಗಳನ್ನು ವ್ಯಯಿಸುತ್ತಿದೆ. ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳನ್ನೂ ನಿರ್ಮಿಸಿ ಇವುಗಳ ಸಂತತಿ ವೃದ್ಧಿಗಾಗಿ ಹುಲಿ ಯೋಜನೆಯನ್ನೂ ಜಾರಿಗೆ ತಂದಿದೆ.